ADVERTISEMENT

ಟಾರ್ಪೆಡೋಸ್ ತಂಡವನ್ನು ಭೇಟಿಯಾದ ಸಿಂಧು, ರಮಣ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 14:05 IST
Last Updated 3 ಫೆಬ್ರುವರಿ 2022, 14:05 IST
ಬೆಂಗಳೂರು ಟಾರ್ಪೆಡೋಸ್ ತಂಡದ ಆಟಗಾರರ ಜೊತೆ ಪಿ.ವಿ.ಸಿಂಧು ಮತ್ತು ಪಿ.ವಿ.ರಮಣ
ಬೆಂಗಳೂರು ಟಾರ್ಪೆಡೋಸ್ ತಂಡದ ಆಟಗಾರರ ಜೊತೆ ಪಿ.ವಿ.ಸಿಂಧು ಮತ್ತು ಪಿ.ವಿ.ರಮಣ   

ಬೆಂಗಳೂರು: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಮತ್ತು ಅವರ ತಂದೆ, ಭಾರತ ವಾಲಿಬಾಲ್ ತಂಡದ ಮಾಜಿ ಆಟಗಾರ ಪಿ.ವಿ.ರಮಣ ಅವರು ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಆಡುವ ಬೆಂಗಳೂರು ಟಾರ್ಪೆಡೋಸ್‌ ತಂಡವನ್ನು ಭೇಟಿಯಾದರು.

ಇದೇ ಐದರಂದು ಆರಂಭವಾಗಲಿರುವ ಲೀಗ್‌ನಲ್ಲಿ ಪಾಲ್ಗೊಳ್ಳುವ ಟಾರ್ಪೆಡೋಸ್ ಆಟಗಾರರು ಹೈದರಾಬಾದ್‌ನಲ್ಲಿ ಶಿಬಿರದಲ್ಲಿದ್ದಾರೆ. ಅಲ್ಲಿಗೆ ತೆರಳಿದ ಸಿಂಧು ಮತ್ತು ರಮಣ ಯುವ ಆಟಗಾರರಿಗೆ ಹುರುಪು ತುಂಬಿದರು.

‘ಸಿಂಧು ಅವರು ದೇಶದ ಹೆಮ್ಮೆ. ಅವರನ್ನು ಭೇಟಿಯಾದ ಈ ದಿವನ್ನು ಮರೆಯಲು ನಮಗೆ ಯಾರಿಗೂ ಸಾಧ್ಯವಿಲ್ಲ. ನಮ್ಮ ಕ್ರೀಡಾಜೀವನಕ್ಕೆ ತಿರುವು ನೀಡಲು ಈ ಭೇಟಿ ಸಹಕಾರಿಯಾಗಬಲ್ಲುದು’ ಎಂದು ತಂಡದ ನಾಯಕ ರಂಜಿತ್ ಸಿಂಗ್ ಅಭಿಪ್ರಾಯಪಟ್ಟರು.

ADVERTISEMENT

‘ಟೂರ್ನಿ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ಪಿ.ವಿ. ರಮಣ ಅವರು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ತಂಡದಲ್ಲಿ ಸೆಟ್ಟರ್ ಪಾತ್ರ ನಿರ್ವಹಿಸುವ ನಾನು ಎದುರಾಳಿ ಬ್ಲಾಕರ್‌ಗೆ ಕಷ್ಟವಾಗುವಂತೆ ಲಾಂಗ್ ಶಾಟ್‌ಗಳನ್ನು ಹೊಡೆಯಲು ಗಮನ ನೀಡಬೇಕು ಎಂದು ಅವರು ಸೂಚಿಸಿದರು. ಅವರ ಮಾತುಗಳನ್ನು ಕೇಳಿ ಹೊಸ ಹುರುಪು ತುಂಬಿದೆ’ ಎಂದು ರಂಜಿತ್ ಹೇಳಿದರು.

ತಂಡದ ಬ್ಲಾಕರ್ ಸಾರಂಗ್ ಶಾಂತಿಲಾಲ್, ಸೆಟ್ಟರ್ ವಿನಾಯಕ್ ರೋಖಡೆ ಮುಂತಾದವರು ಕೂಡ ಸಿಂಧು–ರಮಣ ಭೇಟಿ ಅವಿಸ್ಮರಣೀಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.