ADVERTISEMENT

ಬ್ಯಾಸ್ಕೆಟ್‌ಬಾಲ್‌: ಅಪ್ಪಯ್ಯ ಕ್ಲಬ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 25 ಮೇ 2019, 15:51 IST
Last Updated 25 ಮೇ 2019, 15:51 IST

ಬೆಂಗಳೂರು: ಶ್ರೀರಾಮ್‌ ಅವರ ಉತ್ತಮ ಆಟದ ನೆರವಿನಿಂದ ಅಪ್ಪಯ್ಯ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡ ಎಸ್‌.ರಂಗರಾಜನ್‌ ಸ್ಮಾರಕ ಟ್ರೋಫಿ ರಾಜ್ಯ ‘ಸಿ’ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹೋರಾಟದಲ್ಲಿ ಅಪ್ಪಯ್ಯ ತಂಡ 56–44 ಪಾಯಿಂಟ್ಸ್‌ನಿಂದ ವಿವೇಕ್‌ ಎಸ್‌.ಸಿ. ತಂಡವನ್ನು ಸೋಲಿಸಿತು.

ಆರಂಭದಿಂದಲೇ ಚುರುಕಿನ ಸಾಮರ್ಥ್ಯ ತೋರಿದ ಅಪ್ಪಯ್ಯ ತಂಡ ಮೊದಲಾರ್ಧದ ವೇಳೆಗೆ 29–24ರಿಂದ ಮುನ್ನಡೆ ಗಳಿಸಿತ್ತು. ದ್ವಿತೀಯಾರ್ಧದಲ್ಲೂ ಈ ತಂಡ ಮೇಲುಗೈ ಸಾಧಿಸಿತು. ಶ್ರೀರಾಮ್‌ 21 ಪಾಯಿಂಟ್ಸ್‌ ಕಲೆಹಾಕಿದರು. ವಿವೇಕ್‌ ತಂಡದ ಜೊಶುವಾ 19 ಪಾಯಿಂಟ್ಸ್‌ ಗಳಿಸಿ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು.

ADVERTISEMENT

ಬಿ.ಸಿ.ಬಿ.ಸಿ. ತಂಡ 61–49 ಪಾಯಿಂಟ್ಸ್‌ನಿಂದ ಮೈಸೂರಿನ ಆರ್ಯನ್ಸ್‌ ಕ್ಲಬ್‌ ಎದುರು ಗೆದ್ದಿತು. ವಿಜಯೀ ತಂಡದ ಅಕ್ಷಾನ್‌ 22 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು.

ಇತರ ಪಂದ್ಯಗಳಲ್ಲಿ ಸಹಕಾರನಗರ ಕ್ಲಬ್‌ 53–37ರಲ್ಲಿ ಮಂಡ್ಯದ ವಿ.ಬಿ.ಸಿ ಎದುರೂ, ಡಿಆರ್‌ಡಿಒ ಕ್ಲಬ್ 57–55ರಲ್ಲಿ ರಾಜಕುಮಾರ್‌ ಕ್ಲಬ್‌ ಮೇಲೂ, ದಾವಣಗೆರೆಯ ಗ್ರೀನ್ಸ್‌ ಕ್ಲಬ್‌ 31–26ರಲ್ಲಿ ಮೈಸೂರಿನ ನ್ಯಾಷನಲ್ಸ್‌ ಕ್ಲಬ್‌ ಎದುರೂ, ವೈಎಫ್‌ಬಿಸಿ ಕೋಲಾರ 53–29ರಲ್ಲಿ ಎಸ್‌ಬಿಐ ಮೇಲೂ, ಮೈಸೂರಿನ ಯಂಗ್‌ ಚಾಲೆಂಜರ್ಸ್‌ 45–44ರಲ್ಲಿ ಓರಿಯನ್ಸ್‌ ಕ್ಲಬ್‌ ವಿರುದ್ಧವೂ ವಿಜಯಿಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.