ADVERTISEMENT

ಕೆ.ಎಂ.ಕಾರ್ಯಪ್ಪ ರಾಜ್ಯ ಹಾಕಿ ಟೂರ್ನಿ: ಸೆಮಿಫೈನಲ್‌ಗೆ ಕೆನರಾ ಬ್ಯಾಂಕ್, ಸಾಯ್

ಹ್ಯಾಟ್ರಿಕ್ ಗೋಲು ಗಳಿಸಿದ ಪ್ರದೀಪ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 19:45 IST
Last Updated 6 ಮಾರ್ಚ್ 2020, 19:45 IST
ಕೆನರಾ ಬ್ಯಾಂಕ್‌ ತಂಡದ ನಿಕಿನ್ ತಿಮ್ಮಯ್ಯ (ಮಧ್ಯ) ಅವರಿಂದ ಚೆಂಡು ಕಸಿದುಕೊಳ್ಳಲು ಡಿವೈಇಎಸ್ ತಂಡದ ಆಟಗಾರರು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ
ಕೆನರಾ ಬ್ಯಾಂಕ್‌ ತಂಡದ ನಿಕಿನ್ ತಿಮ್ಮಯ್ಯ (ಮಧ್ಯ) ಅವರಿಂದ ಚೆಂಡು ಕಸಿದುಕೊಳ್ಳಲು ಡಿವೈಇಎಸ್ ತಂಡದ ಆಟಗಾರರು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೆನರಾ ಬ್ಯಾಂಕ್, ಭಾರತ ಕ್ರೀಡಾ ಪ್ರಾಧಿಕಾರ (ಸಾಯ್), ಸದರ್ನ್ ಕಮಾಂಡ್ ಮತ್ತು ಎಂಇಜಿ ತಂಡಗಳು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರಾಜ್ಯ ಹಾಕಿ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದವು.

ಶುಕ್ರವಾರ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆನರಾ ಬ್ಯಾಂಕ್ 3–1ರಲ್ಲಿ ಡಿವೈಇಎಸ್‌ ಎದುರು ಜಯ ಸಾಧಿಸಿತು. ಎರಡನೇ ಪಂದ್ಯದಲ್ಲಿ ಸದರ್ನ್ ಕಮಾಂಡ್ ತಂಡ ಎಎಸ್‌ಸಿ ಸೆಂಟರ್‌ ವಿರುದ್ಧ 3–0ಯಿಂದ ಗೆಲುವು ಸಾಧಿಸಿತು. ಎಂಟರ ಘಟ್ಟದ ಮೂರನೇ ಪಂದ್ಯದಲ್ಲಿ ಎಂಇಜಿ 2–1ರಲ್ಲಿ ರೈಲು ಗಾಲಿ ಕಾರ್ಖಾನೆಯನ್ನು ಮಣಿಸಿತು. ಕೊನೆಯ ಪಂದ್ಯದಲ್ಲಿ ರಾಜ್ಯ ಪೊಲೀಸ್ ತಂಡವನ್ನು ಸಾಯ್ 7–5ರಲ್ಲಿ ಸೋಲಿಸಿತು.

ಮಿಂಚಿದ ನಿಕಿನ್, ಅಪ್ಪಣ್ಣ: ಡಿವೈಇಎಸ್ ಎದುರಿನ ತಂಡದಲ್ಲಿ ನಿಕಿನ್ ತಿಮ್ಮಯ್ಯ ಒಂಬತ್ತನೇ ನಿಮಿಷದಲ್ಲೇ ಕೆನರಾ ಬ್ಯಾಂಕ್‌ಗೆ ಮುನ್ನಡೆ ಗಳಿಸಿಕೊಟ್ಟರು. 25ನೇ ನಿಮಿಷದಲ್ಲಿ ಕೆ.ಎಸ್‌.ಅಪ್ಪಣ್ಣ ಮತ್ತು 41ನೇ ನಿಮಿಷದಲ್ಲಿ ವರ್ಗೀಸ್ ಜಾನ್ ಗಳಿಸಿದ ಗೋಲುಗಳೊಂದಿಗೆ ತಂಡದ ಭರವಸೆ ಹೆಚ್ಚಿತು. ಡಿವೈಇಎಸ್ ಪರ ಏಕೈಕ ಗೋಲು ಗಳಿಸಿದ ಪವನ್ ಮಡಿವಾಳರ (55ನೇ ನಿಮಿಷ) ಸೋಲಿನ ಅಂತರ ಕಡಿಮೆ ಮಾಡಿದರು.

ADVERTISEMENT

ಎಎಸ್‌ಸಿ ಸೆಂಟರ್ ಎದುರಿನ ಪಂದ್ಯದಲ್ಲಿ ಸದರ್ನ್ ಕಮಾಂಡ್ ಏಕಪಕ್ಷೀಯ ಜಯ ದಾಖಲಿಸಿತು. ಮಣಿ ಸಿಂಗ್ (13ನೇ ನಿ), ಅಜಿತ್ ಶಿಂಧೆ (16ನೇ ನಿ) ಮತ್ತು ಎಂ.ಎಸ್.ಬೋಪಣ್ಣ (54ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು. ಎಂಇಜಿ ವಿರುದ್ಧ ರೈಲು ಗಾಲಿ ಕಾರ್ಖಾನೆ ಆರಂಭಿಕ ಮುನ್ನಡೆ ಸಾಧಿಸಿದರೂ ನಂತರ ಎದುರಾಳಿಗಳ ಆಟ ಕಳೆಕಟ್ಟಿತು. ಸುಶೀಲ್ ಗ್ಸಾಲ್ಸೊ 10ನೇ ನಿಮಿಷದಲ್ಲಿ ಗಾಲಿ ಕಾರ್ಖಾನೆಗಾಗಿ ಗೋಲು ಗಳಿಸಿದ್ದರು. ಆದರೆ 17ನೇ ನಿಮಿಷದಲ್ಲಿ ಎಂಇಜಿಯ ಮಂಜೀತ್ ತಿರುಗೇಟು ನೀಡಿ ಸಮಬಲ ಸಾಧಿಸಿದರು. 58ನೇ ನಿಮಿಷದಲ್ಲಿ ದೀಪಕ್ ಅವರ ಗೋಲು ತಂಡಕ್ಕೆ ಗೆಲುವು ತಂದುಕೊಟ್ಟಿತು.

ಪ್ರದೀಪ್ ಹ್ಯಾಟ್ರಿಕ್‌; ಗೋಲು ಮಳೆ: ಸಾಯ್ ಮತ್ತು ಪೊಲೀಸ್ ತಂಡಗಳ ನಡುವಿನ ಪಂದ್ಯದಲ್ಲಿ ಒಟ್ಟು 12 ಗೋಲುಗಳು ಮೂಡಿಬಂದವು. ಪೊಲೀಸ್ ತಂಡದ ಪ್ರದೀಪ್ ಹ್ಯಾಟ್ರಿಕ್ ಸಾಧಿಸಿದರು. ಸಾಯ್ ಪರ ಬಿ.ಎಂ. ಲಿಖಿತ್ (3ನೇ ನಿ), ಹರೀಶ್ ಮುಟಗಾರ (6, 20ನೇ ನಿ), ವೀರಣ್ಣ ಗೌಡ (27ನೇ ನಿ), ಚೆಲ್ಸಿ ಮೇದಪ್ಪ (40ನೇ ನಿ), ಬಿ.ಪಿ.ಸೋಮಣ್ಣ (51ನೇ ನಿ) ಮತ್ತು ಯತೀಶ್ ಕುಮಾರ್ (54ನೇ ನಿ) ಗೋಲು ಗಳಿಸಿದರೆ ಪೊಲೀಸ್ ತಂಡಕ್ಕಾಗಿ ಎನ್‌.ಬಿ.ಪ್ರದೀಪ್ (8, 16, 18, 39ನೇ ನಿ) ಮತ್ತು ಕೆ.ಎಸ್‌. ಪರಮೇಶ್ (13ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ಇಂದಿನ ಪಂದ್ಯಗಳು (ಸೆಮಿಫೈನಲ್)
ಕೆನರಾ ಬ್ಯಾಂಕ್‌–ಸದರ್ನ್ ಕಮಾಂಡ್
ಆರಂಭ: ಮಧ್ಯಾಹ್ನ 2.00

ಎಂಇಜಿ–ಸಾಯ್
ಆರಂಭ: ಸಂಜೆ 4.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.