ADVERTISEMENT

ಗೋವಾದ ಋತ್ವಿಜ್‌ ಪರಬ್‌ ಚಾಂಪಿಯನ್‌

ಅಖಿಲ ಭಾರತ ಚೆಸ್‌: ತೇಜಕುಮಾರ್‌ಗೆ ಮೂರನೇ ಸ್ಥಾನ

ಪ್ರಮೋದ ಜಿ.ಕೆ
Published 31 ಅಕ್ಟೋಬರ್ 2018, 20:32 IST
Last Updated 31 ಅಕ್ಟೋಬರ್ 2018, 20:32 IST
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಅಖಿಲ ಭಾರತ ಚೆಸ್‌ ಟೂರ್ನಿಯಲ್ಲಿ ಚಾಂಪಿಯನ್ ಆದ ಗೋವಾದ ರಿತ್ವಿಜ್‌ ಪರಬ್‌ (ನಡುವೆ), ಎರಡನೇ ಸ್ಥಾನ ಪಡೆದ ಡಿ ಯಶಸ್‌ (ಬಲ) ಹಾಗೂ ಮೂರನೇ ಸ್ಥಾನ ಗಳಿಸಿದ ಎಂ.ಎಸ್‌. ತೇಜಕುಮಾರ್‌ –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಅಖಿಲ ಭಾರತ ಚೆಸ್‌ ಟೂರ್ನಿಯಲ್ಲಿ ಚಾಂಪಿಯನ್ ಆದ ಗೋವಾದ ರಿತ್ವಿಜ್‌ ಪರಬ್‌ (ನಡುವೆ), ಎರಡನೇ ಸ್ಥಾನ ಪಡೆದ ಡಿ ಯಶಸ್‌ (ಬಲ) ಹಾಗೂ ಮೂರನೇ ಸ್ಥಾನ ಗಳಿಸಿದ ಎಂ.ಎಸ್‌. ತೇಜಕುಮಾರ್‌ –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ಕುತೂಹಲ ಮೂಡಿಸಿದ್ದ ಒಂಬತ್ತನೇ ಸುತ್ತಿನ ಪಂದ್ಯದಲ್ಲಿ ಗೆದ್ದು, ‘ಬೆಟರ್‌ ಟೈ ಬ್ರೇಕರ್‌’ ನಲ್ಲಿಯೂ ಜಯ ಸಾಧಿಸಿದ್ದ ಗೋವಾದ ಋತ್ವಿಜ್ ಪರಬ್‌ ಅವರು ಅಖಿಲ ಭಾರತ ಮುಕ್ತ ಫಿಡೆ ರೇಟೆಡ್‌ ಚೆಸ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ.

‌ಧಾರವಾಡ ಜಿಲ್ಲಾ ಚೆಸ್‌ ಸಂಸ್ಥೆ, ರೋಟರಿ ಕ್ಲಬ್‌ ಹುಬ್ಬಳ್ಳಿ ಉತ್ತರದ ಜಂಟಿ ಆಶ್ರಯದಲ್ಲಿ ಇಲ್ಲಿನ ಕೆಎಲ್‌ಇ ತಾಂತ್ರಿಕ ಹಾವಿದ್ಯಾಲಯದಲ್ಲಿ ನಡೆದ ಐದು ದಿನಗಳ ಟೂರ್ನಿಯಲ್ಲಿ ಪರಬ್‌ ಒಟ್ಟು ಎಂಟು ಅಂಕ ಗಳಿಸಿದರು. ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದ ಕರ್ನಾಟಕದ ಗ್ರ್ಯಾಂಡ್‌ ಮಾಸ್ಟರ್‌ ಎಂ.ಎಸ್‌. ತೇಜಕುಮಾರ್‌ ಮತ್ತು ಡಿ. ಯಶಸ್‌ ಕೂಡ ಇಷ್ಟೇ ಅಂಕಗಳನ್ನು ಕಲೆ ಹಾಕಿದ್ದರು.
ಹಿಂದಿನ ಸುತ್ತಿನ ಪಂದ್ಯಗಳಲ್ಲಿ ಈ ಆಟ ಗಾರರು ಪೈಪೋಟಿ ನಡೆಸಿದಾಗ ಪಡೆದ ಫಲಿತಾಂಶದ ಆಧಾರದ ಮೇಲೆ ಪರಬ್‌ ಅವರನ್ನು ವಿಜೇತರೆಂದು ತೀರ್ಮಾನಿಸಲಾಯಿತು. ಪರಬ್‌ ಮತ್ತು ಯಶಸ್‌ ನಡುವಿನ ಆರನೇ ಸುತ್ತಿನ ಪಂದ್ಯ ಡ್ರಾ ಆಗಿತ್ತು. ಈ ಪಂದ್ಯಕ್ಕೂ ಮೊದಲು ಇಬ್ಬರೂ ಆಟಗಾರರು ತಲಾ 6.5 ಅಂಕ ಹೊಂದಿದ್ದರು. ಆರನೇ ಸುತ್ತಿನಲ್ಲಿ ಪರಬ್‌ ಜಯಿಸಿ ಮುನ್ನಡೆ ಗಳಿಸಿದ್ದರು. ಪರಬ್‌ ಎಂಟನೇ ಸುತ್ತಿನಲ್ಲಿ ತೇಜಕುಮಾರ್‌ ಅವರನ್ನು ಮಣಿಸಿದ್ದರು.

‘ಇಬ್ಬರೂ ಸ್ಪರ್ಧಿಗಳು ಸಮ ಅಂಕ ಹೊಂದಿದ್ದರೆ ಬುಕೊಲ್ಜ್‌ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲಾಗುತ್ತದೆ.
ಸ್ಪರ್ಧಿ ತಮ್ಮ ಹಿಂದಿನ ಸುತ್ತುಗಳಲ್ಲಿ ಪಡೆದ ಫಲಿತಾಂಶ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದರ ಪ್ರಕಾರ ಸೆಕೆಂಡ್‌ ಟೈ ಬ್ರೇಕರ್‌ನಲ್ಲಿ ಪರಬ್‌ ಚಾಂಪಿಯನ್‌ ಆದರು’ ಎಂದರು ಟೂರ್ನಿಯ ಮುಖ್ಯ ಆರ್ಬಿಟ್ರೇಟರ್‌ ಬಿ.ಎಚ್‌. ವಸಂತ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರಶಸ್ತಿಯ ಜೊತೆಗೆ ಪರಬ್‌ ₹ 50 ಸಾವಿರ ಬಹುಮಾನ ಪಡೆ ದರು.ಒಂಬತ್ತನೇ ಸುತ್ತಿನಲ್ಲಿ ಋತ್ವಿಜ್‌ ತಮ್ಮದೇ ರಾಜ್ಯದ ನೀರಜ್‌ ಸರಿಪಳ್ಳಿ ಮೇಲೂ, ತೇಜಕುಮಾರ್‌ ಕರ್ನಾಟಕದ ಹೆರ್ಮನ್‌ ಡಿಯಾನ್ ವಿರುದ್ಧ ಗೆಲುವು ಸಾಧಿಸಿದರು.

ಎಂಟನೇ ಸುತ್ತಿನ ಪಂದ್ಯ ಡ್ರಾ ಮಾಡಿಕೊಂಡು 7.5 ಅಂಕಗಳಿಂದ ಮುನ್ನಡೆಯಲ್ಲಿದ್ದ ಮಹಾರಾಷ್ಟ್ರದ ಸಮದ್ ಜಯಕುಮಾರ್ ಶೇಟ್‌ ಮಹತ್ವದ ಹಂತದಲ್ಲಿ ಎಡವಿದರು. ಇವರು ಯಶಸ್‌ ಎದುರು ಕೊನೆಯ ಸುತ್ತಿನಲ್ಲಿ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.