ನವದೆಹಲಿ: ಯುವ ಕುಸ್ತಿಪಟುವಿನ ಕೊಲೆಗೆ ಸಂಬಂಧಿಸಿದ ಆರೋಪ ಎದುರಿಸುತ್ತಿರುವ ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಅವರಿಗೆ ನಿರೀಕ್ಷಣಾ ಜಾಮೀನನ್ನು ದೆಹಲಿಯ ನ್ಯಾಯಾಲಯ ನಿರಾಕರಿಸಿದೆ. ಪ್ರಕರಣದಲ್ಲಿ ಸುಶೀಲ್ ಕುಮಾರ್ ಅವರ ಕುಮ್ಮಕ್ಕು ಇರುವುದು ಸ್ಪಷ್ಟವಾಗುತ್ತಿದೆ. ಅವರ ವಿರುದ್ಧದ ಆರೋಪ ಗಂಭೀರವಾದದ್ದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಕೊಲೆ ಪ್ರಕರಣ ಬಹಿರಂಗ ಆಗುತ್ತಿದ್ದಂತೆ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದಾರೆ.
ರಾಷ್ಟ್ರ ರಾಜಧಾನಿಯ ಕ್ರೀಡಾಂಗಣವೊಂದರಲ್ಲಿ ಮೇ ನಾಲ್ಕರಂದು ನಡೆದ ಗಲಾಟೆಯಲ್ಲಿ ಕುಸ್ತಿಪಟು ಸಾಗರ್ ರಾಣಾ ಸಾವಿಗೀಡಾಗಿದ್ದರು. ಅವರ ಗೆಳೆಯರಾದ ಸೋನು ಮತ್ತು ಅಮಿತ್ ಕುಮಾರ್ಗೆ ಗಾಯವಾಗಿತ್ತು. ಸುಶೀಲ್ ಕುಮಾರ್ ಮತ್ತು ಇತರ ಕೆಲವರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಪ್ರಕರಣದ ತನಿಖೆ ನಡೆಯುತ್ತಿದ್ದು ಆರೋಪಿಗಳ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾಗಿದೆ. ಕೆಲವು ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ. ಬಂಧನಕ್ಕೆ ಹೆದರಿ ಸುಶೀಲ್ ಕುಮಾರ್ ನಿರೀಕ್ಷಣಾ ಜಾಮೀನಿಗಾಗಿ ಸೋಮವಾರ ನ್ಯಾಯಾಲಯದ ಮೊರೆ ಹೋಗಿದ್ದರು. ತಮ್ಮ ಮೇಲಿನ ಆರೋಪಗಳು ಪೂರ್ವಗ್ರಹಪೀಡಿತವಾಗಿವೆ ಎಂದು ಅಭಿಪ್ರಾಯಪಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.