ಮೈಸೂರು:ಎರಡು ವರ್ಷಗಳ ನಂತರ ರಂಗೇರಿದ್ದ ದಸರಾ ಕುಸ್ತಿ ಅಖಾಡದಲ್ಲಿ ಕುಸ್ತಿಪ್ರಿಯರ ಶಿಳ್ಳೆ– ಚಪ್ಪಾಳೆಗಳನಡುವೆ ಆಕ್ರಮಣಕಾರಿ ಪಟ್ಟುಗಳ ಮೂಲಕ ಪ್ರಾಬಲ್ಯ ಮೆರೆದ ಮುಧೋಳದ ಪೈಲ್ವಾನ ಸುನಿಲ್ ಪಡತಾರೆ ಹಾಗೂ ಬಾಗಲಕೋಟೆಯ ಬಾಪುಸಾಹೇಬ ಶಿಂಧೆ ಕ್ರಮವಾಗಿ ದಸರಾ ಕಂಠೀರವ ಹಾಗೂ ದಸರಾ ಕೇಸರಿ ಪ್ರಶಸ್ತಿ ಗೆದ್ದರು.
ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಭಾನುವಾರ ನಡೆದ ದಸರಾ ಕುಸ್ತಿ ಸ್ಪರ್ಧೆಯ ಹಣಾಹಣಿಯಲ್ಲಿ ಸುನಿಲ್ ಅವರು ಮೈಸೂರಿನ ಭೂತಪ್ಪನ ಗರಡಿಯ ಆರ್.ಯಶ್ವಂತ್ ಅವರನ್ನು ಮಣಿಸಿದರು.
ದಸರಾ ಕೇಸರಿ: 74–86 ಕೆ.ಜಿ ವಿಭಾಗದಲ್ಲಿ ಬಾಪುಸಾಹೇಬ ಶಿಂಧೆ ಗೆದ್ದರು. ತಮ್ಮದೇ ಜಿಲ್ಲೆಯ ಪೈಲ್ವಾನ ಹೊಳೆಬಸು ಕುಶಾಲ್ ಅವರನ್ನು 8–4 ಅಂಕಗಳ ಅಂತರದಲ್ಲಿ ಸೋಲಿಸಿದರು.
‘ದಸರಾ ಕುಮಾರ್’ ಪ್ರಶಸ್ತಿಗೆ (74 ಕೆ.ಜಿ) ನಡೆದ 20 ನಿಮಿಷಗಳ ಹೋರಾಟದಲ್ಲಿ ಮೈಸೂರಿನ ಭೂತಪ್ಪನ ಗರಡಿಯ ಆರ್.ಯಶ್ವಂತ್ ಅವರು ತಮ್ಮದೇ ಗರಡಿಯ ದೀಕ್ಷಿತ್ ಕುಮಾರ್ ಅವರನ್ನು 32–0ರಲ್ಲಿ ಮಣಿಸಿದರು.
ಮಹಿಳೆಯರಿಗೆ2018ರಿಂದ ಆಯೋಜಿಸುತ್ತಿರುವ ‘ದಸರಾ ಕಿಶೋರಿ’ 57– 62 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ ಉತ್ತರಕನ್ನಡದ ಕುಸ್ತಿಪಟುಗಳಾದ ಪ್ರಿನ್ಸಿತಾ ಪೆದ್ರೋ ಹಾಗೂ ಗಾಯತ್ರಿ ರಮೇಶ್ 10 ನಿಮಿಷಗಳ ಹೋರಾಟ ನಡೆಸಿದರು. 3–0 ಅಂತರದಲ್ಲಿ ಗಾಯತ್ರಿ ಅವರನ್ನು ಸೋಲಿಸಿದ ಪ್ರಿನ್ಸಿತಾ ‘ದಸರಾ ಕಿಶೋರಿ’ ಪ್ರಶಸ್ತಿ ಗಳಿಸಿದರು.
ದಸರೆಯಲ್ಲಿ ಇದೇ ಮೊದಲ ಬಾರಿ ಆಯೋಜಿಸಿದ್ದ ‘ದಸರಾ ಕಿಶೋರ’ ಪ್ರಶಸ್ತಿಯನ್ನು ಉತ್ತರ ಕನ್ನಡದ ರೋಹನ್ ನಾರಾಯಣ್ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.