ಮೈಸೂರು: ದಸರಾ ಉತ್ಸವದ ಪ್ರಮುಖ ಆಕರ್ಷಣೆ ಎನಿಸಿರುವ ನಾಡಕುಸ್ತಿ ಪಂದ್ಯಾವಳಿಗೆ ಭಾನುವಾರ ಚಾಲನೆ ಲಭಿಸಿದ್ದು, ಅ.4ರ ವರೆಗೆ ನಡೆಯಲಿದೆ.
ಮೊದಲ ದಿನ 30 ಜೊತೆ ಕುಸ್ತಿ ಪಂದ್ಯಗಳು ನಡೆದವು. ಹರಿಯಾಣದ ಯುದಿಷ್ಠಿರ್ ಮತ್ತು ಪುಣೆಯ ಜಯದೀಪ್ ಗಾಯಕವಾಡ್ ನಡುವಿನ ‘ಮಾರ್ಫಿಟ್’ ಕುಸ್ತಿಯಲ್ಲಿ ಯುದಿಷ್ಠಿರ್ ಏಳು ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು.
ದಾವಣಗೆರೆಯ ಕಾರ್ತಿಕ್ ಕಾಟೆ ಮತ್ತು ಪುಣೆಯ ಕೌತುಕ್ ದಾಘಲೆ ನಡುವಿನ ಒಂದು ಗಂಟೆಯ ಹೋರಾಟ ಪ್ರೇಕ್ಷಕರ ಮನಗೆದ್ದಿತು.
ಈ ಬಾರಿ ನಾಡಕುಸ್ತಿಯಲ್ಲಿ 150 ಜೊತೆ ಸ್ಪರ್ಧೆಗಳು ನಡೆಯಲಿವೆ. ಇದರ ಜತೆಗೆ ಮೈಸೂರು ವಿಭಾಗ ಮಟ್ಟದ ಪಾಯಿಂಟ್ ಕುಸ್ತಿ, ರಾಜ್ಯಮಟ್ಟದ ಗ್ರೀಕೊ ರೋಮನ್ ಕುಸ್ತಿ, ರಾಜ್ಯಮಟ್ಟದ ಮಹಿಳೆಯರ ಪಾಯಿಂಟ್ ಕುಸ್ತಿ ಮತ್ತು ರಾಜ್ಯಮಟ್ಟದ ಪುರುಷರ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿ ಆಯೋಜನೆಯಾಗಿದೆ.
‘ದಸರಾ ಕಿಶೋರಿ’, ‘ದಸರಾ ಕುಮಾರ’, ‘ದಸರಾ ಕೇಸರಿ’ ಮತ್ತು ‘ದಸರಾ ಕಂಠೀರವ’ ಪ್ರಶಸ್ತಿಯನ್ನು ನಿರ್ಧರಿಸಲು ಅ.4 ರಂದು ಸೆಣಸಾಟ ನಡೆಯಲಿದೆ. ‘ದಸರಾ ಕಂಠೀರವ’ ಪ್ರಶಸ್ತಿ ವಿಜೇತರು ಒಂದೂ ಕಾಲು ಕೆ.ಜಿ. ತೂಕದ ಬೆಳ್ಳಿ ಗದೆ ಪಡೆಯಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.