ADVERTISEMENT

ತರಬೇತಿಗೆ ಮರಳಿದ ಅಥ್ಲೀಟುಗಳು

ಸಾಯ್‌ನ ಬೆಂಗಳೂರು, ಪಟಿಯಾಲ ಕೇಂದ್ರಗಳಲ್ಲಿ ಹೊರಾಂಗಣ ತಾಲೀಮು ಆರಂಭ

​ಪ್ರಜಾವಾಣಿ ವಾರ್ತೆ
Published 27 ಮೇ 2020, 19:45 IST
Last Updated 27 ಮೇ 2020, 19:45 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   

ನವದೆಹಲಿ: ಕೊರೊನಾ ವೈರಾಣುವಿನ ಹಾವಳಿಯ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ತಮ್ಮ ವಸತಿ ನಿಲಯಗಳಲ್ಲಿ ‘ಬಂದಿ’ಯಾಗಿದ್ದ ಭಾರತದ ಪ್ರಮುಖ ಅಥ್ಲೀಟುಗಳು ಹೊರಾಂಗಣ ತರಬೇತಿಗೆ ಮರಳುತ್ತಿದ್ದಾರೆ. ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಹಾಗೂ ವೇಗದ ಓಟಗಾರ್ತಿ ಹಿಮಾ ದಾಸ್‌ ಅವರು ಬುಧವಾರ ಪಟಿಯಾಲದಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ತಾಲೀಮು ಆರಂಭಿಸಿದರು.

‘ಬೆಂಗಳೂರು ಕೇಂದ್ರದಲ್ಲಿಯೂ ತರಬೇತಿ ಆರಂಭಗೊಂಡಿದೆ. ಕ್ರೀಡಾ ಸಚಿವಾಲಯ ಕಾರ್ಯನಿರ್ವಹಣೆಯ ಮಾನದಂಡ (ಎಸ್‌ಒಪಿ) ಹಾಗೂ ಸರ್ಕಾರ ನೀಡಿರುವ ಆರೋಗ್ಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ’ ಎಂದು ಸಾಯ್‌ ಹೇಳಿದೆ.

‘ಪಟಿಯಾಲ ಹಾಗೂ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳಲ್ಲಿ ಪ್ರಮುಖ ಅಥ್ಲೀಟುಗಳು ಬುಧವಾರದಿಂದ ತರಬೇತಿ ಆರಂಭಿಸಿದ್ದಾರೆ’ ಎಂದು ಸಾಯ್ ತಿಳಿಸಿದೆ.

ADVERTISEMENT

‘ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್‌ ಸ್ಪೋರ್ಟ್ಸ್‌’ ಎಂದೂ ಕರೆಯಲಾಗುವ ಪಟಿಯಾಲ ಕೇಂದ್ರವು, ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ವೇಟ್‌ಲಿಫ್ಟರ್‌ಗಳು ಮತ್ತು ನೀರಜ್‌, ಹಿಮಾ ಸೇರಿದಂತೆ ಪ್ರಮುಖ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಅಥ್ಲೀಟ್‌ಗಳಿಗೆ ಆಶ್ರಯ ನೀಡಿದೆ.

ಬೆಂಗಳೂರು ಕೇಂದ್ರವು ಭಾರತ ತಂಡದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳಿಗೆ ಆತಿಥ್ಯ ವಹಿಸಿದೆ. ನಡಿಗೆ ಸ್ಪರ್ಧಿಗಳಾದ ಕೆ.ಟಿ. ಇರ್ಫಾನ್‌ ಹಾಗೂ ಭಾವನಾ ಜಾಟ್‌ ಕೂಡ ಇಲ್ಲಿಯೇ ತಂಗಿದ್ದಾರೆ.

‘ಸರ್ಕಾರದ ಮಾರ್ಗಸೂಚಿಗಳ ಅನ್ವಯ ಅಂತರ ಕಾಯ್ದುಕೊಳ್ಳುವುದು ಹಾಗೂ ನೈರ್ಮಲ್ಯ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಳಸಿದಬಳಿಕ ಕ್ರೀಡಾ ಸಾಧನಗಳನ್ನು ಆಟಗಾರರು ಅವರೇ ಸ್ಯಾನಿಟೈಜ್‌ ಮಾಡಬೇಕು. ಒಬ್ಬರು ಬಳಸಿದ ಸಾಧನವನ್ನು ಇನ್ನೊಬ್ಬರು ಬಳಸುವಂತಿಲ್ಲ’ ಎಂದು ಸಾಯ್‌ ವಿವರಿಸಿದೆ.

ಹಿಮಾ ದಾಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.