ಲಂಡನ್: ಟೂರ್ನಿಯಲ್ಲಿ ಇನ್ನೂ ಆರು ಪಂದ್ಯಗಳನ್ನು ಆಡಬೇಕಿದೆ. ಆದ್ದರಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ತಮ್ಮ ತಂಡಕ್ಕೆ ಇದೆ ಎಂದು ಭಾರತ ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಹೇಳಿದರು.
ಎಚ್ಐಎಚ್ ಹಾಕಿ ಪ್ರೊ ಲೀಗ್ ಪುರುಷರ ಟೂರ್ನಿಯಲ್ಲಿ ಆಡುತ್ತಿರುವ ಭಾರತ ತಂಡವು ಹೋದವಾರ ಎರಡು ಪಂದ್ಯಗಳಲ್ಲಿ ಸೋತಿತ್ತು. ಆ ಪಂದ್ಯಗಳಲ್ಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ತಂಡವು 2–1ರಿಂದ ಹಾಗೂ ಗ್ರೇಟ್ ಬ್ರಿಟನ್ 4–2ರಿಂದ ಭಾರತ ಬಳಗಕ್ಕೆ ಸೋಲುಣಿಸಿದ್ದವು.
ಶುಕ್ರವಾರ ಭಾರತವು ಮತ್ತೆ ಬೆಲ್ಜಿಯಂ ತಂಡ ಹಾಗೂ ಶನಿವಾರ ಗ್ರೇಟ್ ಬ್ರಿಟನ್ ಬಳಗವನ್ನು ಎದುರಿಸಲಿದೆ. ಬ್ರಿಟನ್ ತಂಡವು 10 ಪಂದ್ಯಗಳಿಂದ 25 ಹಾಗೂ ಭಾರತವು 19 ಅಂಕಗಳನ್ನು ಗಳಿಸಿದೆ.
ಗುರುವಾರ ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಹರ್ಮನ್ಪ್ರೀತ್, ‘ಹೋದ ವಾರದ ಎರಡು ಸೋಲುಗಳ ಬಗ್ಗೆ ಚಿಂತೆ ಇಲ್ಲ. ನಮ್ಮ ಯೋಜನೆಯಂತೆಯೇ ಆಡುತ್ತೇವೆ. ಗೋಲು ಗಳಿಸುವ ಅವಕಾಶಗಳನ್ನು ಫಲಪ್ರದಗೊಳಿಸಿಕೊಳ್ಳುವುದು ಮುಖ್ಯ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ಇನ್ನೂ ಅವಕಾಶ ಇದೆ‘ ಎಂದರು.
’ನಮ್ಮ ಎರಡೂ ಎದುರಾಳಿ ತಂಡದವರು ವಿಭಿನ್ನ ಶೈಲಿಯಲ್ಲಿಯೇ ಆಡುತ್ತಾರೆ. ಬೆಲ್ಜಿಯಂ ತಂಡವು ಝೋನಲ್ ತಂತ್ರಗಾರಿಕೆ ಹಾಗೂ ಬ್ರಿಟನ್ ಮ್ಯಾನ್ ಟು ಮ್ಯಾನ್ ತಂತ್ರ ಅನುಸರಿಸುವುದು ಹೆಚ್ಚು. ಕಳೆದೆರಡೂ ಪಂದ್ಯಗಳಲ್ಲಿ ನಾವು ಈ ಅಂಶ ತಿಳಿದುಕೊಂಡಿದ್ದೇವೆ. ಅದಕ್ಕೆ ತಕ್ಕನಾಗಿ ಪ್ರತಿತಂತ್ರ ರೂಪಿಸುತ್ತೇವೆ‘ ಎಂದರು.
ಪ್ರೊ ಲೀಗ್ ಟೂರ್ನಿಯ ಇತಿಹಾಸದಲ್ಲಿ ಹರ್ಮನ್ಪ್ರೀತ್ ಅವರು 35 ಗೋಲುಗಳನ್ನು ಗಳಿಸಿದ್ದಾರೆ.
ಸಂವಾದದಲ್ಲಿ ಹಾಜರಿದ್ದ ಉಪನಾಯಕ ಹಾರ್ದಿಕ್ ಸಿಂಗ್, ‘ತಂಡದಲ್ಲಿರುವ ಯುವ ಆಟಗಾರರಿಗೆ ಲಯಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕು. ಆದರೆ ಹೊಸಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ತೋರಲು ಇದು ಉತ್ತಮ ವೇದಿಕೆಯಾಗಿದೆ. ಸುಖಜೀತ್, ಕಾರ್ತಿ ಮತ್ತು ಅಭಿಷೇಕ್ ಅವರು ಲಂಡನ್ನಲ್ಲಿ ಮೊದಲ ಬಾರಿಗೆ ಆಡಲಿದ್ದಾರೆ. ಸಂಜಯ್ ಅವರಿಗೂ ಪದಾರ್ಪಣೆಯ ಅವಕಾಶ ಲಭಿಸಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.