ಹಾಕಿ
ಭುವನೇಶ್ವರ: ಆಕ್ರಮಣಕಾರಿ ಆಟವಾಡಿದ ವಿಶ್ವ ಚಾಂಪಿಯನ್ ಜರ್ಮನಿ ತಂಡ ಮಂಗಳವಾರ ನಡೆದ ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಭಾರತ ತಂಡವನ್ನು 4–1 ಗೋಲುಗಳಿಂದ ಸದೆಬಡಿಯಿತು.
ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ರಕ್ಷಣೆಯಲ್ಲಿ ಲೋಪಗಳು ಕಂಡುಬಂದವು. ವಿಶೇಷವಾಗಿ ಅಂತಿಮ ಕ್ವಾರ್ಟರ್ನಲ್ಲಿ ಜರ್ಮನಿಯ ಗುಣಮಟ್ಟದ ಆಟಕ್ಕೆ ಭಾರತ ಸಾಟಿಯಾಗಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ತಂಡಕ್ಕೆ ಈ ಬಾರಿಯ ಪ್ರೊ ಲೀಗ್ನಲ್ಲಿ ಮೂರು ಪಂದ್ಯಗಳಲ್ಲಿ ಇದು ಎರಡನೇ ಸೋಲು.
ಫ್ಲೋರಿಯನ್ ಸ್ಪರ್ಲಿಂಗ್ ಏಳನೇ ನಿಮಿಷ ಜರ್ಮನಿಗೆ ಮುನ್ನಡೆ ಒದಗಿಸಿದರು. ಆದರೆ ಗುರ್ಜಂತ್ ಸಿಂಗ್ 13ನೇ ನಿಮಿಷ ಗೋಲು ಗಳಿಸಿ ಸ್ಕೋರ್ ಸಮ ಮಾಡಿದರು. ಥಿಯಸ್ ಪ್ರಿಂಝ್ ಅವರು ಮರು ನಿಮಿಷವೇ ಜರ್ಮನಿ ತಂಡಕ್ಕೆ ಮುನ್ನಡೆ ಒದಗಿಸಿದರು. ಮೊದಲ ಕ್ವಾರ್ಟರ್ನಲ್ಲಿ ಜರ್ಮನಿ 2–1 ಮುನ್ನಡೆ ಪಡೆಯಿತು.
ಎರಡು ಮತ್ತು ಮೂರನೇ ಕ್ವಾರ್ಟರ್ನಲ್ಲಿ ಗೋಲುಗಳು ಬರಲಿಲ್ಲ. ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಜರ್ಮನಿ ಅಂತಿಮ ಕ್ವಾರ್ಟರ್ನಲ್ಲಿ ಮತ್ತೆ ಎರಡು ಗೋಲು ಗಳಿಸಿ ಪ್ರಾಬಲ್ಯ ಮೆರೆಯಿತು. ಮೈಕೆಲ್ ಸ್ಟ್ರುತೋಫ್ 48ನೇ ನಿಮಿಷ ಗೋಲು ಗಳಿಸಿ ಜರ್ಮನಿ ಮುನ್ನಡೆಯನ್ನು 3–1ಕ್ಕೆ ಏರಿಸಿದರು. ಏಳು ನಿಮಿಷಗಳ ನಂತರ ರಫೇಲ್ ಹಾರ್ಟ್ಕೊಫ್ ಅವರು ಗೋಲು ಗಳಿಸಿ ಜರ್ಮನಿ ಗೆಲುವಿನ ಅಂತರವನ್ನು 4–1ಕ್ಕೆ ಹೆಚ್ಚಿಸಿದರು.
ಹಿರಿಯ ಡಿಫೆಂಡರ್ ಅಮಿತ್ ರೋಹಿದಾಸ್ ತಂಡವನ್ನು ಮುನ್ನಡೆಸಿದರು. ತಂಡದ ಪೂರ್ಣಾವಧಿ ನಾಯಕ ಹರ್ಮನ್ಪ್ರೀತ್ ಸಿಂಗ್ ಅವರು ಏಕೆ ಆಡಲಿಲ್ಲ ಎಂಬುದು ಸ್ಪಷ್ಟವಾಗಿಲ್ಲ. ಎರಡನೇ ಪಂದ್ಯದಲ್ಲೂ ಹರ್ಮನ್ಪ್ರೀತ್ ವಿಶ್ರಾಂತಿ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.