
ಕುದುರೆ ರೇಸ್
(ಪ್ರಜಾವಾಣಿ ಸಂಗ್ರಹ ಚಿತ್ರ)
ಬೆಂಗಳೂರು: ಐದು ಕುದುರೆಗಳಲ್ಲಿ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗ ‘ಗ್ಲ್ಯಾಂಡರ್ಸ್’ ಕಾಣಿಸಿಕೊಂಡ ಪರಿಣಾಮ ಬೆಂಗಳೂರು ಟರ್ಫ್ ಕ್ಲಬ್ನ ಚಳಿಗಾಲದ ರೇಸ್ಗಳು ರದ್ದಾಗುವ ಆತಂಕ ಎದುರಾಗಿದೆ.
ಈ ಮಧ್ಯೆ, ಶುಕ್ರವಾರದ ರೇಸ್ಗಳು ಆಡಳಿತಾತ್ಮಕ ಕಾರಣಗಳಿಂದ ರದ್ದಾಗಿವೆ ಎಂದು ಬಿಟಿಸಿ ಹೇಳಿಕೆ ನೀಡಿದೆ.
ಈ ಸೋಂಕು ಕಾಣಿಸಿಕೊಂಡ ಪರಿಣಾಮ ಈಗಾಗಲೇ ಹೈದರಾಬಾದ್ ಚಳಿಗಾಲದ ರೇಸ್ಗಳೂ ನಡೆಯುವುದು ಅನುಮಾನವಾಗಿದೆ.
ಸುಮಾರು ತಿಂಗಳ ಹಿಂದೆ ಹೈದರಾಬಾದಿನಲ್ಲಿ ಈ ಮಾರಕ ಸೋಂಕು ಕಾಣಿಸಿಕೊಂಡಿದ್ದು, 15 ಕುದುರೆಗಳು ಸಾವಿಗೀಡಾಗಿವೆ. ಕಾಯಿಲೆಯ ಭೀತಿ ಬೆಂಗಳೂರಿನಲ್ಲೂ ಅಧಿಕಾರಿಗಳಲ್ಲಿ ಕಳವಳ ಮೂಡಿಸಿದೆ. ವಾರದ ಹಿಂದೆ ಕೆಲವು ಕುದುರೆಗಳ ತಪಾಸಣೆ ನಡೆಸಿದಾಗ ಅವುಗಳಲ್ಲಿ ಜ್ವರ, ಕಫದ ಲಕ್ಷಣಗಳು ಕಾಣಿಸಿಕೊಂಡಿದ್ದವು.
ಈ ಕುದುರೆಗಳ ಮಾದರಿಗಳನ್ನು ಪರೀಕ್ಷೆಗಾಗಿ ಹೆಬ್ಬಾಳದ ಸರ್ಕಾರಿ ಪಶುವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಇವುಗಳಲ್ಲಿ ಐದು ಕುದುರೆಗಳಲ್ಲಿ ಸೋಂಕು ಖಚಿತಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಪರೀಕ್ಷೆಗೆ ಪಡೆದ ಮಾದರಿಗಳನ್ನು ಹರಿಯಾಣದ ಹಿಸಾರ್ನಲ್ಲಿರುವ ರಾಷ್ಟ್ರೀಯ ಅಶ್ವ ಸಂಶೋಧನಾ ಕೇಂದ್ರಕ್ಕೆ (ಎನ್ಆರ್ಸಿಇ) ಕಳುಹಿಸುವಂತೆ ಹೆಬ್ಬಾಳದ ಆಸ್ಪತ್ರೆಯು ಸಲಹೆ ನೀಡಿದೆ. ಶುಕ್ರವಾರ ಈ ಮಾದರಿಗಳನ್ನು ಕಳುಹಿಸಲಾಗಿದೆ.
ಬಿಟಿಸಿ ಚೇರ್ಮನ್ ಎಲ್.ಶಿವಶಂಕರ್ ಅವರ ಪ್ರತಿಕ್ರಿಯೆ ಕೇಳಿದಾಗ, ಸೋಂಕು ಕಾಣಿಸಿಕೊಂಡಿರುವುದನ್ನು ಖಚಿತಪಡಿಸಲೂ ಇಲ್ಲ. ತಳ್ಳಿಹಾಕಲೂ ಇಲ್ಲ. ‘ನಾವು ಈ ಬಗ್ಗೆ ತಜ್ಞರಿಂದ ಇನ್ನಷ್ಟು ಸಲಹೆ ಪಡೆಯುತ್ತೇವೆ. ಎನ್ಆರ್ಸಿಇಗೆ ಮಾದರಿ ಕಳುಹಿಸಲಾಗಿದೆ. ಫಲಿತಾಂಶ ಬಂದ ನಂತರ ಶಿಷ್ಟಾಚಾರ ಪಾಲಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.