ಬ್ಯಾಸ್ಕೆಟ್ಬಾಲ್
ಬೆಂಗಳೂರು: ಜಿಎಸ್ಟಿ–ಕಸ್ಟಮ್ಸ್ ತಂಡವು ಎಂ.ಸಿ. ಶ್ರೀನಿವಾಸ ಸ್ಮರಣಾರ್ಥ ಟ್ರೋಫಿಗೆ ನಡೆಯುತ್ತಿರುವ ರಾಜ್ಯ ಬಿ ಡಿವಿಷನ್ ಲೀಗ್ ಪುರುಷರ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಶುಕ್ರವಾರ ಬಾಷ್ ತಂಡವನ್ನು 82–51 ಅಂಕಗಳಿಂದ ಮಣಿಸಿತು.
ನಗರದ ಕಂಠೀರವ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜಿಎಸ್ಟಿ ತಂಡದ ಪರ ಭುವನ್ (18 ಅಂಕ) ಮತ್ತು ಪ್ರೇಮ್ (14 ಅಂಕ) ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬಾಷ್ ತಂಡದ ಅರವಿಂದ್ (19 ಅಂಕ) ಮತ್ತು ವಿಜಯ್ (12 ಅಂಕ) ಗುರಿ ಎಸೆತದಲ್ಲಿ ಗಮನಸೆಳೆದರು.
ಹೋರಾಟ ಕಂಡ ಇನ್ನೊಂದು ಪಂದ್ಯದಲ್ಲಿ ರಾಜಮಹಲ್ ಬಿ.ಸಿ. ತಂಡ 85–73 ಅಂಕಗಳಿಂದ (ವಿರಾಮ: 41–23) ಬೆಂಗಳೂರು ವ್ಯಾನ್ಗಾರ್ಡ್ಸ್ ತಂಡವನ್ನು ಸೋಲಿಸಿತು. ಶಿಶಿರ್ (21 ಅಂಕ), ಮಿಥಿಲ್ (19 ಅಂಕ) ಅವರು ರಾಜಮಹಲ್ ತಂಡದ ಗೆಲುವಿನ ರೂವಾರಿಯಾದರು. ಅಕ್ಷಣ್ ರಾವ್ (30) ಮತ್ತು ನಿಹಾಲ್ (21) ಅವರ ಆಟ ವ್ಯಾನ್ಗಾರ್ಡ್ ಗೆಲುವಿಗೆ ಸಾಲಲಿಲ್ಲ.
ಮತ್ತೊಂದು ಪಂದ್ಯದಲ್ಲಿ ವಿಮಾನಪುರ ಎಸ್ಸಿ ತಂಡ 58–45 ಅಂಕಗಳಿಂದ ದೇವಾಂಗ ಯೂನಿಯನ್ ತಂಡವನ್ನು ಮಣಿಸಿತು. ವಿಮಾನಪುರ ತಂಡದ ಪರ ಆದಿತ್ಯ ಪೊನ್ನಪ್ಪ (14 ಅಂಕ), ನಿಶಾಂತ್ (10 ಅಂಕ) ಉತ್ತಮವಾಗಿ ಆಡಿದರು. ದೇವಾಂಗ ಪರ ವಿಷ್ಣು (11), ಕೀರ್ತಿ (10) ಗಮನ ಸೆಳೆದರು.
ಮಂಡ್ಯ ಜಿಲ್ಲಾ ತಂಡ 48–44 ಅಂಕಗಳಿಂದ ಭಾರತ್ ಎಸ್ಯು ತಂಡವನ್ನು ಸೋಲಿಸಿತು. ಮಂಡ್ಯ ಪರ ಶಶಾಂಕ್ ಗೌಡ (13 ಅಂಕ) ಮತ್ತು ರಾಘವೇಂದ್ರ (12 ಅಂಕ) ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಭಾರತ್ ತಂಡದ ಪರ ಅಕ್ಷಯ್ ಪ್ರಸಾದ್ (14 ಅಂಕ) ಮತ್ತು ಹರ್ಷಿಲ್ (10 ಅಂಕ) ವಿಫಲ ಹೋರಾಟ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.