ADVERTISEMENT

ರಿಲೆ ತಂಡದ ಮೇಲೆ ವಿಶ್ವಾಸ

ಪಿಟಿಐ
Published 19 ಸೆಪ್ಟೆಂಬರ್ 2019, 20:34 IST
Last Updated 19 ಸೆಪ್ಟೆಂಬರ್ 2019, 20:34 IST
ಹಿಮಾ ದಾಸ್‌
ಹಿಮಾ ದಾಸ್‌   

ನವದೆಹಲಿ: ‘ಪ್ರತಿಭಾನ್ವಿತ ಓಟಗಾರ್ತಿ ಹಿಮಾ ದಾಸ್‌ ಅನುಪಸ್ಥಿತಿಯ ಹೊರತಾಗಿಯೂ ದೋಹಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 4x400 ಮಿಶ್ರ ರಿಲೇ ತಂಡ ಫೈನಲ್ ತಲುಪುವ ವಿಶ್ವಾಸವಿದೆ’ ಎಂದು ಭಾರತ ತಂಡದ ಡೆಪ್ಯುಟಿ ಚೀಫ್‌ ಕೋಚ್‌ ರಾಧಾಕೃಷ್ಣನ್‌ ನಾಯರ್‌ ಗುರುವಾರ ಇಲ್ಲಿ ಹೇಳಿದರು.

ಇದೇ 27ರಂದು ಆರಂಭ ವಾಗುವ ವಿಶ್ವ ಅಥ್ಲೆಟಿಕ್‌ ಕೂಟದಲ್ಲಿ ಕಾಡುತ್ತಿದ್ದ ಬೆನ್ನು ನೋವಿನಿಂದಾಗಿ ಹಿಮಾ ಅವರು ಪಾಲ್ಗೊಳ್ಳುವುದಿಲ್ಲ ಎಂದು ಬುಧವಾರ ಪ್ರಕಟಿಸಲಾಗಿತ್ತು. ಹೊಸದಾಗಿ ಪರಿಚಯಿಸಲಾದ ಮಿಕ್ಸೆಡ್‌ ರಿಲೇ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಕ್ಕೆ, ಈಗ ಅವರ ಗೈರು ಹಿನ್ನಡೆಯಾಗಿದೆ.

‘ಹಿಮಾ ಅಲಭ್ಯತೆಯಿಂದ ಹೆಚ್ಚು ವ್ಯತ್ಯಾಸವಾಗದು. ನಾವು ಸಕಾರಾತ್ಮಕವಾಗಿ ಇರಬೇಕಾಗುತ್ತದೆ.4x400 ಮಿಶ್ರ ರಿಲೇ ತಂಡ ಫೈನಲ್‌ ತಲುಪುವುದೆಂಬ ನಂಬಿಕೆ ಇನ್ನೂ ಇದೆ’ ಎಂದು ನಾಯರ್‌ ತಿಳಿಸಿದ್ದಾರೆ.

ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ನ ರಿಲೇ ಸ್ಪರ್ಧೆಗಳಲ್ಲಿ ಮೊದಲ ಎಂಟು ಸ್ಥಾನ ಗಳಿಸುವ ತಂಡಗಳು ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲಿವೆ. ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ (3ನಿ.15.71 ಸೆ.ಗಳ) ಸಾಧನೆಯಿಂದ ಭಾರತ 14ನೇ ಕ್ರಮಾಂಕದ ತಂಡವಾಗಿ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿದೆ. ಬಹರೇನ್‌ ಮೊದಲ ಸ್ಥಾನ ಪಡೆದಿದ್ದರೂ, ಆಥ್ಲೀಟುಗಳು ಉದ್ದೀಪನ ಮದ್ದು ಸೇವನೆ ಮಾಡಿದ್ದುಖಚಿತವಾದ ಕಾರಣ ಮೊದಲ ಸ್ಥಾನವನ್ನು ಭಾರತಕ್ಕೆ ನೀಡಲಾಗಿತ್ತು. ಮುಹಮ್ಮದ್‌ ಅನಾಸ್‌, ಅರೋಕ್ಯ ರಾಜೀವ್, ಎಂ.ಆರ್‌.ಪೂವಮ್ಮ ಮತ್ತು ಹಿಮಾ ದಾಸ್‌ ಆವರನ್ನೊಳಗೊಂಡ ತಂಡ ಜಕಾರ್ತಾದಲ್ಲಿ ಭಾಗವಹಿಸಿತ್ತು.

ಇದೇ ವೇಳೆ ಐಎಎಎಫ್‌ ದೋಹಾ ಕೂಟದಲ್ಲಿ ಭಾಗವ ಹಿಸುವ ಭಾರತ ತಂಡದ ಅಥ್ಲೀ ಟುಗಳ ಪೂರ್ವಭಾವಿ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಇದರಲ್ಲಿ 26 ಮಂದಿಯ ಹೆಸರಿದೆ. ನಿರೀಕ್ಷಿಸಿದಂತೆ ಹಿಮಾ ದಾಸ್‌ ಹೆಸರು ಈ ಪಟ್ಟಿಯಲ್ಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.