ADVERTISEMENT

ಆತಿಥೇಯರಿಗೆ ಆಘಾತ ನೀಡಿದ ಭಾರತ

ಹಾಕಿ: ಬೆಲ್ಜಿಯಂ ಪ್ರವಾಸದ ನಾಲ್ಕನೇ ಪಂದ್ಯದಲ್ಲೂ ಗೆದ್ದ ಮನಪ್ರೀತ್‌ ಬಳಗ

ಪಿಟಿಐ
Published 1 ಅಕ್ಟೋಬರ್ 2019, 20:00 IST
Last Updated 1 ಅಕ್ಟೋಬರ್ 2019, 20:00 IST
ಅಮಿತ್‌ ರೋಹಿದಾಸ್‌ (ನೀಲಿ ಪೋಷಾಕು)
ಅಮಿತ್‌ ರೋಹಿದಾಸ್‌ (ನೀಲಿ ಪೋಷಾಕು)   

ಆ್ಯಂಟ್‌ವರ್ಪ್‌, ಬೆಲ್ಜಿಯಂ: ಭಾರತದ ಪುರುಷರ ಹಾಕಿ ತಂಡದವರು ಬೆಲ್ಜಿಯಂ ಪ್ರವಾಸದಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮನಪ್ರೀತ್‌ ಸಿಂಗ್‌ ಬಳಗವು 2–1 ಗೋಲುಗಳಿಂದ ಹಾಲಿ ವಿಶ್ವ ಚಾಂಪಿಯನ್‌ ಬೆಲ್ಜಿಯಂ ತಂಡವನ್ನು ಪರಾಭವ ಗೊಳಿಸಿತು. ಇದರೊಂದಿಗೆ ಸತತ ನಾಲ್ಕನೇ ಗೆಲುವು ದಾಖಲಿಸಿತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಭಾರತ ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 10ನೇ ನಿಮಿಷದಲ್ಲಿ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಲಭಿಸಿತು. ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಅಮಿತ್‌ ರೋಹಿದಾಸ್‌, ಆತಿಥೇಯರ ಖಾತೆ ತೆರೆದರು.

ADVERTISEMENT

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಬೆಲ್ಜಿಯಂ ತಂಡವು ನಂತರ ಪರಿಣಾಮಕಾರಿಯಾಗಿ ಆಡಿತು. 33 ನೇ ನಿಮಿಷದಲ್ಲಿ ನಾಯಕ ಫೆಲಿಕ್ಸ್‌ ಡೆನಾಯೆರ್‌ ಗೋಲು ಬಾರಿಸಿ 1–1 ಸಮಬಲಕ್ಕೆ ಕಾರಣರಾದರು.

ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಸಮಬಲದಿಂದ ಸೆಣಸಿದವು. ಹೀಗಾಗಿ ಯಾರಿಗೂ ಮುನ್ನಡೆಯ ಗೋಲು ಗಳಿಸಲು ಆಗಲಿಲ್ಲ. ನಿರ್ಣಾಯಕ ಎನಿಸಿದ್ದ ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ತಂಡ ಮೇಲುಗೈ ಸಾಧಿಸಿತು. 52ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಸಿಮ್ರನ್‌ಜೀತ್‌ ಸಿಂಗ್‌, ಪ್ರವಾಸಿ ಪಾಳಯದಲ್ಲಿ ಸಂತಸ ಉಕ್ಕಿ ಹರಿಯುವಂತೆ ಮಾಡಿದರು.

ಉಭಯ ತಂಡಗಳ ನಡುವಣ ಮತ್ತೊಂದು ಪಂದ್ಯ ಗುರುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.