ಬೆಂಗಳೂರು : ಕೋವಿಡ್–19 ಸೋಂಕಿನಿಂದ ಚೇತರಿಸಿಕೊಂಡ ಕೆಲವೇ ದಿನಗಳ ಬಳಿಕ ಎಡಭುಜದ ಮೇಲೆ ಊತ ಕಾಣಿಸಿಕೊಂಡ ಕಾರಣ ಭಾರತ ಹಾಕಿ ತಂಡದ ಆಟಗಾರ ಸುರೇಂದರ್ ಕುಮಾರ್ ಅವರನ್ನು ಗುರುವಾರ ರಾತ್ರಿ ಇಲ್ಲಿನ ಆಸ್ಪತ್ರೆಗೆಮತ್ತೆ ದಾಖಲಿಸಲಾಗಿದೆ.
ಕೋವಿಡ್ ಸೋಂಕಿಗೆ ತುತ್ತಾಗಿದ್ದ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್, ಜಸ್ಕರನ್ ಸಿಂಗ್, ವರುಣ್ ಕುಮಾರ್, ಗೋಲ್ಕೀಪರ್ ಕೃಷ್ಣಬಹಾದ್ದೂರ್ ಪಾಠಕ್ ಹಾಗೂ ಮನ್ದೀಪ್ ಸಿಂಗ್ ಅವರು ಎಸ್.ಎಸ್.ಸ್ಪರ್ಶ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಗುಣಮುಖರಾದ ಅವರು ಸೋಮವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.
ಸುರೇಂದರ್ ಅವರುತಮಗೆ ಭುಜದ ಮೇಲೆ ಊತ ಕಾಣಿಸಿಕೊಂಡ ಕುರಿತು ವೈದ್ಯರಿಗೆ ಮಾಹಿತಿ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಮತ್ತೆ ಎಸ್.ಎಸ್.ಸ್ಪರ್ಶ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಸುರೇಂದರ್ ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಯಮಿತ ಆನ್ಲೈನ್ ತಪಾಸಣೆ ವೇಳೆ ಸುರೇಂದರ್ ಅವರು ಊತ ಕಾಣಿಸಿಕೊಂಡ ಕುರಿತು ವೈದ್ಯರಿಗೆ ತಿಳಿಸಿದರು. ಸದ್ಯ ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ. ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳಿಲ್ಲ.ಕೋವಿಡ್ ಹಿನ್ನೆಲೆಯಲ್ಲಿ ಅಥವಾ ಬೇರೆ ಕಾರಣದಿಂದ ಊತ ಕಾಣಿಸಿಕೊಂಡಿದೆಯೊ ಎಂಬುದನ್ನು ವೈದ್ಯರು ಪರೀಕ್ಷಿಸಲಿದ್ದಾರೆ‘ ಎಂದು ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಮೂಲಗಳು ತಿಳಿಸಿವೆ.
ಸುರೇಂದರ್ ಹಾಗೂ ಇತರ ಆಟಗಾರರುಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಬೆಂಗಳೂರಿನಲ್ಲಿರುವ ಸಾಯ್ ಕೇಂದ್ರದಲ್ಲೇ ಪ್ರತ್ಯೇಕವಾಸದಲ್ಲಿದ್ದರು.
ಆಗಸ್ಟ್ 12 ಹಾಗೂ 12ರಂದು ಆರು ಆಟಗಾರರಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು.
ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು, ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಲ್ಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.