ಫುಟ್ಬಾಲ್
ನವದೆಹಲಿ: ಭಾರತ ಪುರುಷರ ಫುಟ್ಬಾಲ್ ತಂಡವು ಜೂನ್ 4ರಂದು ಥಾಯ್ಲೆಂಡ್ ಜೊತೆ ಆ ದೇಶದಲ್ಲಿ ಫಿಫಾ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯವನ್ನು ಆಡಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಬುಧವಾರ ತಿಳಿಸಿದೆ.
ಭಾರತ ತಂಡವು ಪ್ರಸ್ತುತ ಎಎಫ್ಸಿ ಏಷ್ಯನ್ ಕಪ್ 2027 ಕ್ವಾಲಿಫೈಯರ್ನ ಫೈನಲ್ ಸುತ್ತಿನ ಸ್ಪರ್ಧೆಗೆ ಸಜ್ಜಾಗುತ್ತಿದೆ. ಥಮ್ಮಸತ್ ಕ್ರೀಡಾಂಗಣದಲ್ಲಿ ನಡೆಯಲಿರುವ ಸೌಹಾರ್ದ ಪಂದ್ಯವು ಜೂನ್ 10ರಂದು ಹಾಂಗ್ಕಾಂಗ್ ವಿರುದ್ಧದ ಅರ್ಹತಾ ಸುತ್ತಿನ ಪಂದ್ಯಕ್ಕೆ ಪೂರ್ವಸಿದ್ಧತೆಯ ಭಾಗವಾಗಿದೆ.
ಪ್ರಸ್ತುತ ಫಿಫಾ ರ್ಯಾಂಕಿಂಗ್ನಲ್ಲಿ ಭಾರತ 127ನೇ ಸ್ಥಾನದಲ್ಲಿದ್ದರೆ, ಥಾಯ್ಲೆಂಡ್ ತಂಡವು 99ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಈತನಕ ಒಟ್ಟು 26 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಏಳು ಬಾರಿ ಭಾರತ, 12 ಸಲ ಥಾಯ್ಲೆಂಡ್ ಗೆದ್ದಿದ್ದರೆ, ಉಳಿದ ಏಳು ಪಂದ್ಯಗಳು ಡ್ರಾಗೊಂಡಿವೆ.
ಭಾರತ ತಂಡದ ಪೂರ್ವಸಿದ್ಧತಾ ಶಿಬಿರವು ಮೇ 18ರಂದು ಕೋಲ್ಕತ್ತದಲ್ಲಿ ಪ್ರಾರಂಭವಾಗಲಿದೆ. ಮೇ 29ರಂದು ತಂಡವು ಥಾಯ್ಲೆಂಡ್ಗೆ ತೆರಳಲಿದೆ. ಸೌಹಾರ್ದ ಪಂದ್ಯದ ನಂತರ ತಂಡವು ಹಾಂಗ್ಕಾಂಗ್ಗೆ ಪ್ರಯಾಣ ಬೆಳೆಸಲಿದೆ.
ಸಿ ಗುಂಪಿನಲ್ಲಿರುವ ಇತರ ತಂಡಗಳಾದ ಬಾಂಗ್ಲಾದೇಶ ಮತ್ತು ಸಿಂಗಪುರ ವಿರುದ್ಧ ಭಾರತ ಸೆಣಸಲಿದೆ. ಎಲ್ಲಾ ನಾಲ್ಕು ತಂಡಗಳು ಪ್ರಸ್ತುತ ತಲಾ ಒಂದು ಅಂಕ ಹೊಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.