ADVERTISEMENT

ಸಾಯ್‌ ಕೇಂದ್ರದಲ್ಲಿ ಅಥ್ಲೀಟ್‌ಗಳಿಗೆ ಸೋಂಕು

ಪಿಟಿಐ
Published 13 ಮೇ 2021, 14:40 IST
Last Updated 13 ಮೇ 2021, 14:40 IST
ಸಾಯ್ ಅಥ್ಲೆಟಿಕ್ಸ್‌ ಟ್ರ್ಯಾಕ್‌ –ಪ್ರಜಾವಾಣಿ ಚಿತ್ರ
ಸಾಯ್ ಅಥ್ಲೆಟಿಕ್ಸ್‌ ಟ್ರ್ಯಾಕ್‌ –ಪ್ರಜಾವಾಣಿ ಚಿತ್ರ   

ನವದೆಹಲಿ: ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ವೇಗನಡಿಗೆ ಅಥ್ಲೀಟ್‌ ಕೆ.ಟಿ.ಇರ್ಫಾನ್ ಒಳಗೊಂಡಂತೆ ಐವರು ಕ್ರೀಡಾಪಟುಗಳಿಗೆ ಕೋವಿಡ್‌–19 ಇರುವುದು ಗುರುವಾರ ದೃಢಪಟ್ಟಿದೆ. ಇವರೆಲ್ಲರೂ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಬೆಂಗಳೂರು ಪ್ರಾದೇಶಿಕ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದರು.

ಕಳೆದ ಶುಕ್ರವಾರ ಕ್ರೀಡಾಪಟುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಮರುದಿನ ವರದಿ ಬಂದಿದೆ. ನಾಲ್ವರು ಪುರುಷ ಮತ್ತು ಒಬ್ಬರು ಮಹಿಳಾ ಅಥ್ಲೀಟ್‌ಗೆ ಸೋಂಕು ಇರುವುದು ದೃಢಪಟ್ಟಿದ್ದು ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಮಹಿಳಾ ಅಥ್ಲೀಟ್ ಮನೆಯಿಂದ ಬಂದಿದ್ದರು. ಈ ಕ್ರೀಡಾಪಟುಗಳೆಲ್ಲರೂ ಏಪ್ರಿಲ್ 29ರಂದು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರು ಎಂದು ಸಾಯ್ ಮೂಲಗಳು ತಿಳಿಸಿವೆ.

ಇಬ್ಬರು ಅಥ್ಲೀಟ್‌ಗಳು ಲಸಿಕೆ ತೆಗೆದುಕೊಳ್ಳಲಿಲ್ಲ. ಅವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿದ್ದು ಶುಕ್ರವಾರ ವರದಿ ಬರಲಿದೆ ಎನ್ನಲಾಗಿದೆ.

ADVERTISEMENT

31 ವರ್ಷದ ಇರ್ಪಾನ್ 2019ರ ಆರಂಭದಲ್ಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು. ಜಪಾನ್‌ನ ನೋಮಿಯಲ್ಲಿ ನಡೆದಿದ್ದ ಏಷ್ಯನ್ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್‌ನ 20 ಕಿಲೋಮೀಟರ್ ನಡಿಗೆಯಲ್ಲಿ ನಾಲ್ಕನೇ ಸ್ಥಾನ ಗಳಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದರು.

ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಪ್ರಿಯಾಂಕ ಗೋಸ್ವಾಮಿ, ಮಧ್ಯಮ ದೂರ ಓಟಗಾರ ಜಿನ್ಸನ್ ಜಾನ್ಸನ್‌, ದೂರ ಅಂತರದ ಓಟಗಾರ್ತಿ ಪಾರುಲ್ ಚೌಧರಿ, ಸ್ಟೀಪಲ್ ಚೇಸ್ ಪಟು ಚಿಂತಾ ಯಾದವ್ ಮತ್ತು ವೇಗ ನಡಿಗೆಯ ಅಥ್ಲೀಟ್‌ ಏಕನಾಥ್ ಅವರಿಗೆ ಕಳೆದ ತಿಂಗಳು ಸೋಂಕು ತಗುಲಿತ್ತು. ವೇಗ ನಡಿಗೆಯ ಕೋಚ್‌ ರಷ್ಯಾದ ಅಲೆಕ್ಸಾಂಡರ್ ಅರ್ಟ್ಸಿಬಶೆವ್ ಅವರಿಗೂ ಆಗ ಸೋಂಕು ದೃಢಪಟ್ಟಿತ್ತು.

ಜಿನ್ಸನ್ ಜಾನ್ಸನ್ ಜೊತೆ ಇದ್ದ ಕಾರಣ ಇರ್ಫಾನ್ ಅವರನ್ನು ಆಗ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ವರದಿ ನೆಗೆಟಿವ್ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.