ADVERTISEMENT

ಅಶಿಸ್ತು ಸಹಿಸುವುದಿಲ್ಲ: ಹಸನ್‌

ಪಿಟಿಐ
Published 4 ನವೆಂಬರ್ 2018, 12:58 IST
Last Updated 4 ನವೆಂಬರ್ 2018, 12:58 IST

ನವದೆಹಲಿ: ‘ಭಾರತದಲ್ಲಿ ಆಯೋಜನೆಯಾಗಿರುವ ಹಾಕಿ ವಿಶ್ವಕಪ್‌ ವೇಳೆ ಅಶಿಸ್ತು ತೋರುವುದನ್ನು ನಾನು ಸಹಿಸುವುದಿಲ್ಲ’ ಎಂದು ಪಾಕಿಸ್ತಾನ ತಂಡದ ಆಟಗಾರರಿಗೆ ಕೋಚ್‌ ಹಸನ್‌ ಸರ್ದಾರ್‌ ಎಚ್ಚರಿಕೆ ನೀಡಿದ್ದಾರೆ.

2014ರ ಡಿಸೆಂಬರ್‌ನಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡ ಆತಿಥೇಯ ಭಾರತವನ್ನು ಮಣಿಸಿತ್ತು. ಪಂದ್ಯ ಗೆದ್ದ ನಂತರ ಪೋಷಾಕು ತೆಗೆದು ಅಸಭ್ಯವಾಗಿ ವರ್ತಿಸಿದ್ದ ಪಾಕ್‌ ಆಟಗಾರರು, ಭಾರತದ ಅಭಿಮಾನಿಗಳು ಕುಳಿತಿದ್ದ ಗ್ಯಾಲರಿಯತ್ತ ಹೋಗಿ ಅಶ್ಲೀಲ ಸಂಜ್ಞೆಗಳನ್ನು ಮಾಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಪಾಕ್‌ ತಂಡದ ಮೊಹಮ್ಮದ್‌ ತೌಸಿಕ್‌ ಮತ್ತು ಅಲಿ ಅಮ್ಜದ್‌ ಅವರ ಮೇಲೆ ಒಂದು ಪಂದ್ಯ ನಿಷೇಧ ಹೇರಿದ್ದ ಅಂತರರಾಷ್ಟ್ರೀಯ ಹಾಕಿ ಸಂಸ್ಥೆ, ಶಫಕತ್‌ ರಸೂಲ್‌ಗೆ ಎಚ್ಚರಿಕೆ ನೀಡಿತ್ತು.

ADVERTISEMENT

ಪಾಕ್‌ ಆಟಗಾರರು ಮತ್ತು ಹಾಕಿ ಸಂಸ್ಥೆ ಬಹಿರಂಗ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದ ಹಾಕಿ ಇಂಡಿಯಾ ಬಳಿಕ ಹಾಕಿ ಇಂಡಿಯಾ ಲೀಗ್‌ನಲ್ಲಿ (ಎಚ್‌ಐಎಲ್‌) ಭಾಗವಹಿಸದಂತೆ ಪಾಕ್‌ ಆಟಗಾರರ ಮೇಲೆ ನಿಷೇಧ ಹೇರಿತ್ತು.

‘ತಂಡದಲ್ಲಿರುವ ಎಲ್ಲರೂ ಶಿಸ್ತು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದ್ದೇನೆ. ಟೂರ್ನಿಯ ವೇಳೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. 2014ರ ಕಹಿ ಘಟನೆಯನ್ನು ಎಲ್ಲರೂ ಮರೆತಿದ್ದಾರೆ. ಈ ಬಾರಿ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಭಾರತಕ್ಕೆ ಬಂದಿದ್ದೇವೆ. ಅದರತ್ತ ಮಾತ್ರ ನಮ್ಮ ಆಟಗಾರರು ಚಿತ್ತ ಹರಿಸಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.