ನವದೆಹಲಿ: ಛಲದಂಕಮಲ್ಲ ರಂತೆ ಹೋರಾಡಿದ ಯು.ಪಿ. ಯೋಧಾ ತಂಡದ ಆಟಗಾರರು ಗುರುವಾರ ಇಲ್ಲಿ ನಡೆದ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಒಂದು ಪಾಯಿಂಟ್ ಅಂತರದಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯಿಸಿದರು.
ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಟೂರ್ನಿಯ ಈ ಪಂದ್ಯದ ಆರಂಭದಿಂದ ಕೊನೆಯವರೆಗೂ ರೋಚಕ ಕ್ಷಣಗಳುದಾಖಲಾದವು.
ತಂಡದ ಪ್ರಮುಖ ರೇಡರ್ಗಳಾದ ಶ್ರೀಕಾಂತ್ ಮತ್ತು ಪ್ರಶಾಂತಕುಮಾರ್ ರೈ ಅವರು ತಲಾ ಎಂಟು ಪಾಯಿಂಟ್ಗಳ ಕಾಣಿಕೆ ನೀಡಿದರು. ಅವರಿಗೆ ಉತ್ತಮ ಜೊತೆ ನೀಡಿದ ಸಚಿನ್ ಕುಮಾರ್ ಒಟ್ಟು ಆರು ಪಾಯಿಂಟ್ಗಳನ್ನು ತಂಡಕ್ಕೆ ಕಾಣಿಕೆ ನೀಡಿದರು.
ರಕ್ಷಣಾ ವಿಭಾಗದಲ್ಲಿ ಮಿಂಚಿದ ನಿತೀಶ್ ಕುಮಾರ್ ನಾಲ್ಕು ಪಾಯಿಂಟ್ಸ್ ಗಳಿಸಿದರು. ಜೀವಕುಮಾರ್ ಕೂಡ ಎರಡು ಪಾಯಿಂಟ್ಗಳ ಕಾಣಿಕೆ ನೀಡಿದರು. ತಂಡವು ರೇಡಿಂಗ್ನಲ್ಲಿ ಒಟ್ಟು 19 ಮತ್ತು ಟ್ಯಾಕಲ್ನಲ್ಲಿ ಒಂಬತ್ತು ಹಾಗೂ ಎರಡು ಆಲ್ಔಟ್ ಪಾಯಿಂಟ್ಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು.
ಆದರೆ, ಹರಿಯಾಣ ತಂಡದ ಆಟವೇನೂ ಕಳಪೆಯಾಗಿರಲಿಲ್ಲ. ಮೋನು ಗೋಯತ್ (11 ಪಾ) ವಿಕಾಸ್ ಖಂಡೋಲಾ (7 ಪಾ) ಮತ್ತು ನವೀನ್ (4 ಪಾ) ಅವರ ಅಮೋಘ ಆಟದಿಂದ ರೇಡಿಂಗ್ನಲ್ಲಿ ಒ್ಟು 22 ಪಾಯಿಂಟ್ಗಳನ್ನು ಕೊಳ್ಳೆ ಹೊಡೆಯಿತು.
ಸೂಪರ್ ರೇಡ್ನಲ್ಲಿ ಎರಡು, ಟ್ಯಾಕಲ್ನಲ್ಲಿ ಐದು ಮತ್ತು ಎರಡು ಹೆಚ್ಚುವರಿ ಅಂಕಗಳನ್ನೂ ಸಂಗ್ರಹಿಸಿತು. ಆದರೆ ಕೊನೆಯ ಕ್ಷಣದಲ್ಲಿ ಒಂದು ಪಾಯಿಂಟ್ ಮುನ್ನಡೆ ಸಾಧಿಸಿದ ಯೋಧಾ ಗೆದ್ದಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.