ಕೊಯಮತ್ತೂರು: ದೇಶದ ಪ್ರಮುಖ ರೇಸರ್ಗಳಲ್ಲಿ ಒಬ್ಬರಾದ ವಿಷ್ಣು ಪ್ರಸಾದ್ ಮತ್ತು ಯುವ ಪ್ರತಿಭೆ ಬೆಂಗಳೂರಿನ ಚಿರಾಗ್ ಘೋರ್ಪಡೆ ಇಲ್ಲಿ ಶನಿವಾರ ಆರಂಭಗೊಂಡ ಎಫ್ಎಂಎಸ್ಸಿಐ ರಾಷ್ಟ್ರೀಯ ರೇಸ್ ಚಾಂಪಿಯ್ಷಿಪ್ನಲ್ಲಿ ಮಿಂಚು ಹರಿಸಿದ್ದಾರೆ. ಮೊದಲ ದಿನದ ರೇಸ್ಗಳಲ್ಲಿ ಇವರಿಬ್ಬರು ತಮ್ಮ ವಿಭಾಗಗಳಲ್ಲಿ ಗೆಲುವು ಸಾಧಿಸಿದರು.
ಜಿಕ್ಸರ್ ಕಪ್ಗಾಗಿ ನಡೆದ ರೇಸ್ನಲ್ಲಿ ಸೈಯದ್ ಮುಜಮಿಲ್ ಅಲಿ ಅವರು ಚಾಕಚಕ್ಯತೆ ಮೆರೆದು ಮೊದಲ ದಿನದ ಗೌರವ ತಮ್ಮದಾಗಿಸಿಕೊಂಡರು.
ಚಾಂಪಿಯನ್ಷಿಪ್ನ ಮೊದಲ ಸುತ್ತಿನಲ್ಲಿ ಕುಡಿ ಮೀಸೆಯ ರೇಸರ್ಗಳ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. 27 ಮಂದಿ ‘ಕಿಶೋರ’ ಪ್ರತಿಭೆಗಳು ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಟ್ರ್ಯಾಕ್ಗೆ ಇಳಿದಿದ್ದರು. ಈ ಪೈಕಿ 14 ವರ್ಷದ ಚಿರಾಗ್ ಪ್ರಮುಖರಾಗಿದ್ದರು. ರೇಸ್ ಪ್ರಿಯರ ನಿರೀಕ್ಷೆಗೆ ತಕ್ಕಂತೆ ವಾಹನ ಚಲಾಯಿಸಿದ ಅವರು ಗೆದ್ದು ನಗೆ ಬೀರಿದರು.
ಆರೋಹ್ ರವೀಂದ್ರ ಮತ್ತು ಮೊಹಮ್ಮದ್ ರಯಾನ್ ಅವರನ್ನು ಹಿಂದಿಕ್ಕಿದ ಚಿರಾಗ್ 13:37.912 ನಿಮಿಷಗಳಲ್ಲಿ ಗುರಿ ಮುಟ್ಟಿದರು. 14ನೇ ಜನ್ಮದಿನ ಸಂಭ್ರಮದಲ್ಲಿದ್ದ ಚಿರಾಗ್ ವೇಗ ಮತ್ತು ಚಾಲನಾ ಕೌಶಲದ ಮೂಲಕ ಪ್ರೇಕ್ಷಕರನ್ನು ಎದೆ ಝಲ್ಲೆನ್ನುವಂತೆ ಮಾಡಿದರು.
ಮೊದಲನೇ ದಿನದ ಫಲಿತಾಂಶಗಳು
ನೋವಿಸ್ ಕಪ್: ರೇಸ್–1: ಚಿರಾಗ್ ಘೋರ್ಪಡೆ (ಮೊಮೆಂಟಮ್ ಮೋಟರ್ ಸ್ಪೋರ್ಟ್ಸ್)–1, ಆರೋಹ್ ರವೀಂದ್ರ (ಮೊಮೆಂಟಮ್ ಮೋಟರ್ ಸ್ಪೋರ್ಟ್ಸ್)–2, ಮೊಹಮ್ಮದ್ ರಯಾನ್ (ಎಂಸ್ಪೋರ್ಟ್)–3; ರೇಸ್–2: ಚಿರಾಗ್ ಘೋರ್ಪಡೆ–1, ಆರೋಹ್ ರವೀಂದ್ರ–2, ಪರೀಕ್ಷಿತ್ ದರ್ದಳ್ಳಿ (ಡಿಟಿಎಸ್ ರೇಸಿಂಗ್)–3; ಜಿಕ್ಸರ್ ಕಪ್: ರೇಸ್–1: ಸೈಯದ್ ಮುಜಮಿಲ್ ಅಲಿ–1, ತನಯ್ ಗಾಯಕವಾಡ್–2, ಅಮೂಲ್ ಅಂಗಡಿ–3; ಎಲ್ಬಿಜಿ ಫಾರ್ಮುಲಾ 4: ರೇಸ್–1: ವಿಷ್ಣು ಪ್ರಸಾದ್ (ಎಂ ಸ್ಪೋರ್ಟ್)–1, ರೋಹಿತ್ ಖನ್ನಾ (ಡಾರ್ಕ್ ಡಾನ್ ರೇಸಿಂಗ್)–2, ಅಶ್ವಿನ್ ದತ್ತ (ಡಾರ್ಕ್ ಡಾನ್ ರೇಸಿಂಗ್)–3.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.