ADVERTISEMENT

ಜೈಪುರ ರಾಷ್ಟ್ರೀಯ ಕುಸ್ತಿ ಟೂರ್ನಿಯಲ್ಲಿ ಸ್ಪರ್ಧಿಸಿ: ಸಾಕ್ಷಿ ಮಲಿಕ್

ಪಿಟಿಐ
Published 18 ಜನವರಿ 2024, 22:08 IST
Last Updated 18 ಜನವರಿ 2024, 22:08 IST
ಸಾಕ್ಷಿ ಮಲಿಕ್
ಸಾಕ್ಷಿ ಮಲಿಕ್   

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ನ ಅಡ್‌ಹಾಕ್ ಸಮಿತಿಯು ಜೈಪುರದಲ್ಲಿ ಅಯೋಜಿಸಿರುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕುಸ್ತಿಪಟುಗಳು ಸ್ಪರ್ಧಿಸಿ. ಆದರೆ  ಅಮಾನತುಗೊಂಡಿರುವ ಸಂಜಯ್ ಸಿಂಗ್ ನೇತೃತ್ವದ ಸಮಿತಿಯು ಪುಣೆಯಲ್ಲಿ ನಡೆಸಲಿರುವ ಟೂರ್ನಿಯಲ್ಲಿ ಬೇಡ ಎಂದು ಒಲಿಂಪಿಯನ್ ಸಾಕ್ಷಿ ಮಲಿಕ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹೇಳಿಕೆ ನೀಡಿರುವ ಅವರು, ‘ಅಡ್‌ಹಾಕ್ ಸಮಿತಿಯು ನಡೆಸಲಿರುವ ಟೂರ್ನಿಯು ಅಧಿಕೃತವಾಗಿದೆ. ಅಮಾನತುಗೊಂಡಿರುವ ಸಮಿತಿಯಿಂದ ನಡೆಸುವ ಟೂರ್ನಿಯಲ್ಲಿ ಭಾಗವಹಿಸಬೇಡಿ’ ಎಂದಿದ್ದಾರೆ.

ಜೈಪುರದಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್ ಫೆ.2ರಿಂದ 5ರವರೆಗೆ ನಡೆಯಲಿದೆ.

ADVERTISEMENT

ಈಚೆಗೆ ಡಬ್ಲ್ಯುಎಫ್‌ಐಗೆ ನಡೆದಿದ್ದ ಚುನಾವಣೆಯಲ್ಲಿ ಸಂಜಯ್ ಸಿಂಗ್ ಗುಂಪು ಗೆಲುವು ಸಾಧಿಸಿತ್ತು. ಆದರೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ತರಾತುರಿಯಲ್ಲಿ ಘೋಷಿಸಿದ್ದು ನಿಯಮಬಾಹಿರ ಎಂದು  ಆಕ್ಷೇಪಿಸಿದ್ದ ಕೇಂದ್ರ ಕ್ರೀಡಾ ಸಚಿವಾಲಯವು ಸಂಜಯ್ ಅಧ್ಯಕ್ಷತೆಯ ಆಡಳಿತ ಸಮಿತಿಯನ್ನು ಅಮಾನತುಗೊಳಿಸಿತ್ತು.

ಇದರಿಂದಾಗಿ ಭಾರತ ಒಲಿಂಪಿಕ್ ಸಂಸ್ಥೆ (ಐಒಎ)ಯು ಭೂಪಿಂದರ್ ಸಿಂಗ್ ಬಜ್ವಾ ನೇತೃತ್ವದ ಅಡ್‌ಹಾಕ್ ಸಮಿತಿಯನ್ನು ರಚಿಸಿತ್ತು.

ಆದರೆ ಕೆಲವು ಕುಸ್ತಿಪಟುಗಳು ಪುಣೆಯಲ್ಲಿ ನಡೆಯಲಿರುವ ಟೂರ್ನಿಗೆ ಹೋಗುವುದಾಗಿ ಈಗಾಗಲೇ ಘೋಷಿಸಿದ್ದಾರೆ. 

‘ಡಬ್ಲ್ಯುಎಫ್‌ಐ ಪುಣೆಯಲ್ಲಿ ಸಂಘಟಿಸಲಿರುವ ಟೂರ್ನಿಯಲ್ಲಿ ಆಡುತ್ತೇವೆ. ನಮ್ಮ ಅಖಾಡದ ಎಲ್ಲರೂ ಅಲ್ಲಿಗೆ ಹೋಗುತ್ತೇವೆ. ಈ ವಿವಾದವು ಹರಿಯಾಣಕ್ಕೆ ಮಾತ್ರ ಸೀಮಿತವಾಗಿದೆ. ದೆಹಲಿ, ಪಂಜಾಬ್ ಮತ್ತು ರಾಜಸ್ಥಾನದ ಎಲ್ಲ ಕುಸ್ತಿಪಟುಗಳೂ ಪುಣೆಗೆ ಹೋಗುತ್ತಿದ್ದಾರೆ‘ ಎಂದು ರೋಹ್ಟಕ್‌ನ ಹೆಸರು ಹೇಳಲು ಇಚ್ಛಿಸದ ಮಹಿಳಾ ಕುಸ್ತಿಪಟು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.