ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ಹಮ್ಮಿಕೊಂಡಿರುವ ‘ಐಯಾಮ್ ಬ್ಯಾಡ್ಮಿಂಟನ್’ ಎಂಬ ಅರಿವು ಕಾರ್ಯಕ್ರಮಕ್ಕೆ ಭಾರತದ ಪಿ.ವಿ.ಸಿಂಧು ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ.
ಕಳಂಕರಹಿತ ಆಟದಲ್ಲಿ ತೊಡಗಿಸಿಕೊಳ್ಳುವಂತೆ ಆಟಗಾರರನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶ. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ‘ಯಾವುದೇ ಕ್ರೀಡೆಯಲ್ಲಿ ಕಳಂಕವಿಲ್ಲದೆ ಆಡುವುದು ಮುಖ್ಯವಾಗಿದ್ದು ಈ ಸಂದೇಶಕ್ಕೆ ನಾವು–ರಾಯಭಾರಿಗಳೆಲ್ಲರೂ ದನಿಗೂಡಿಸುತ್ತಿದ್ದೇವೆ’ ಎಂದು ಹೇಳಿದರು.
ಬಿಡಬ್ಲ್ಯುಎಫ್ ಐದು ವರ್ಷಗಳ ಹಿಂದೆ ನೀತಿ ಘಟಕವನ್ನು ಸ್ಥಾಪಿಸಿತ್ತು. ಅದರ ಧ್ಯೇಯಗಳನ್ನು ಆಟಗಾರರಿಗೆ ತಲುಪಿಸಲು ಈ ಬಾರಿ ಟೊಂಕಕಟ್ಟಿ ನಿಂತಿದ್ದು ಅದಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕೆನಡಾದ ಮೈಕೆಲಿ ಲೀ, ಚೀನಾದ ಜೆಂಗ್ ಶೀ ವೀ, ಹ್ವಾಂಗ್ ಯಾ ಕ್ವಾಂಗ್, ಇಂಗ್ಲೆಂಡ್ನ ಜ್ಯಾಕ್ ಶೆಫರ್ಡ್, ಜರ್ಮನಿಯ ವಲೆಸ್ಕಾ ನೊಬ್ಲಾಚ್, ಮಾರ್ಕ್ ಜೆಬ್ಲೆರ್ ಹಾಗೂ ಹಾಂಗ್ಕಾಂಗ್ನ ಚಾನ್ ಹೋ ಯೆನ್ ಕೂಡ ರಾಯಭಾರಿ ಆಗಿದ್ದಾರೆ.ಬಿಡಬ್ಲ್ಯುಎಫ್ ಮುಖ್ಯಸ್ಥ ಪಾಲ್ ಎರಿಕ್ ಹೋಯೆರ್,ಬಿಡಬ್ಲ್ಯುಎಫ್ ಪ್ಯಾರಾ ಬ್ಯಾಡ್ಮಿಂಟನ್ ಅಥ್ಲೀಟ್ಸ್ ಕಮಿಷನರ್ ರಿಚರ್ಡ್ ಪೆರೋಟ್, ಸೈನಾ ನೆಹ್ವಾಲ್, ವಿಕ್ಟರ್ ಅಕ್ಸೆಲ್ಸನ್, ಹೇಂದ್ರ ಸತ್ಯವಾನ್, ಕ್ರಿಸ್ಟಿನಾ ಪೆಡರ್ಸನ್, ಚೆನ್ ಲಾಂಗ್, ಮಿಸಾಕಿ ಮಸುಟೊಮೊ ಮತ್ತು ಅಕಾಯ ಟಕಹಾಶಿ2016ರಿಂದ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.