ಕೌಲಾಲಂಪುರ: ಭಾರತದ ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮುಖ್ಯ ಸುತ್ತಿಗೆ ಅರ್ಹತೆ ಪಡೆದರು. ಆದರೆ, ಎಸ್.ಶಂಕರ್ ಮುತ್ತುಸಾಮಿ ಸುಬ್ರಮಣಿಯನ್ ಮತ್ತು ತರುಣ್ ಮುನ್ನೇಪಲ್ಲಿ ಅವರು ಕ್ವಾಲಿಫೈಯರ್ ಹಂತವನ್ನು ದಾಟಲು ವಿಫಲವಾದರು.
32 ವರ್ಷ ವಯಸ್ಸಿನ ಕಿದಂಬಿ ಕ್ವಾಲಿಫೈಯರ್ ಹಂತದ ಎರಡನೇ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 9-21, 21-12, 21-6 ರಿಂದ ಚೀನಾ ತೈಪೆಯ ಹುವಾಂಗ್ ಯು ಕೈ ಅವರನ್ನು ಮಣಿಸಿದರು.
2021ರ ವಿಶ್ವ ಚಾಂಪಿಯನ್ಷಿಪ್ ಬೆಳ್ಳಿ ಪದಕ ವಿಜೇತ ಕಿದಂಬಿ ಆರಂಭಿಕ ಸುತ್ತಿನಲ್ಲಿ ಚೀನಾ ತೈಪೆಯ ಮತ್ತೊಬ್ಬ ಆಟಗಾರ ಕುವೋ ಕುವಾನ್ ಲಿನ್ 21-8, 21-13 ಅವರನ್ನು ಹಿಮ್ಮೆಟ್ಟಿಸಿದ್ದರು. ಭಾರತದ ಆಟಗಾರನಿಗೆ ಪ್ರಧಾನ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಚೀನಾದ ಎಲ್.ಯು. ಗುವಾಂಗ್ ಜು ಎದುರಾಳಿಯಾಗಿದ್ದಾರೆ.
ತರುಣ್ 13-21, 21-23ರಿಂದ ಥಾಯ್ಲೆಂಢ್ನ ಪಣಿಚ್ಚಫೋನ್ ತೀರರತ್ಸಕುಲ್ ವಿರುದ್ಧ ಪರಾಭವಗೊಂಡರು. ಶಂಕರ್ ಮುತ್ತುಸಾಮಿ 20-22, 20-22ರಿಂದ ಚೀನಾದ ಝು ಕ್ಸುವಾನ್ ಚೆನ್ ವಿರುದ್ಧ ಸೋಲಿ ಅನುಭವಿಸಿದರು.
ಮಹಿಳೆಯರ ಸಿಂಗಲ್ಸ್ ಕ್ವಾಲಿಫೈಯರ್ ಸುತ್ತಿನಲ್ಲಿ ಯುವ ಆಟಗಾರ್ತಿ ಅನ್ಮೋಲ್ ಖಾರ್ಬ್ 14-21, 18-21 ರಿಂದ ತೈಪೆಯ ಹಂಗ್ ಯಿ-ಟಿಂಗ್ ವಿರುದ್ಧ ಮುಗ್ಗರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.