ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕೋವಿಡ್–19 ಪರೀಕ್ಷೆಗೆ ಒಳಗಾದ ವೇಳೆ ಭಾರತದ ಕಿದಂಬಿ ಶ್ರೀಕಾಂತ್ ಅವರ ಮೂಗಿನಿಂದ ರಕ್ತಸ್ರಾವವಾಯಿತು. ಇದರಿಂದ ಟೂರ್ನಿಯ ಆರೋಗ್ಯಾಧಿಕಾರಿಗಳ ಮೇಲೆ ಕಿಡಿಕಾರಿರುವ ಅವರು, ತಮಗೆ ಕಳಪೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನಮ್ಮ ಕಾಳಜಿಯ ಹೊಣೆಯನ್ನು ನಾವೇ ಹೊತ್ತುಕೊಂಡು ಟೂರ್ನಿಗೆ ಆಗಮಿಸಿದ್ದೇವೆ. ನಾನು ನಾಲ್ಕು ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೇನೆ. ಯಾವ ಪರೀಕ್ಷೆಯೂ ಸಮರ್ಪಕವಾಗಿ ನಡೆದಿದೆ ಎಂದು ನನಗನಿಸುತ್ತಿಲ್ಲ. ಇದನ್ನು ಒಪ್ಪಲಾಗದು‘ ಎಂದು ಶ್ರೀಕಾಂತ್ ಟ್ವೀಟ್ ಮಾಡಿದ್ದಾರೆ.
27 ವರ್ಷದ ಶ್ರೀಕಾಂತ್, ಟೂರ್ನಿಯ ಮೊದಲ ಪಂದ್ಯದಲ್ಲಿ ಬುಧವಾರ ಭಾರತದವರೇ ಆದ ಸೌರಭ್ ವರ್ಮಾ ವಿರುದ್ಧ ಕಣಕ್ಕಿಳಿಯಬೇಕಿತ್ತು.
ಮೂಗಿನಿಂದ ರಕ್ತ ಸುರಿಯುತ್ತಿರುವ ಚಿತ್ರವನ್ನು ಶ್ರೀಕಾಂತ್ ಅವರು ಟ್ವಟರ್ನಲ್ಲಿ ಹಂಚಿಕೊಂಡಿದ್ದಾರೆ.
‘ಶ್ರೀಕಾಂತ್ ಅವರ ಆರೋಗ್ಯದ ಕುರಿತು ವೈದ್ಯರು ನಿಗಾ ವಹಿಸಿದ್ದಾರೆ. ಥಾಯ್ಲೆಂಡ್ ಬ್ಯಾಡ್ಮಿಂಟನ್ ಸಂಸ್ಥೆಯಿಂದ ನಾವು ವೈದ್ಯಕೀಯ ವರದಿಯನ್ನು ನಿರೀಕ್ಷಿಸುತ್ತಿದ್ದೇವೆ‘ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ಹೇಳಿದೆ.
ಸೈನಾ ನೆಹ್ವಾಲ್ ಅವರಿಗೆ ಕೋವಿಡ್ ದೃಢಪಟ್ಟ ಕಾರಣ ಅವರ ಪತಿ ಪರುಪಳ್ಳಿ ಕಶ್ಯಪ್ ಅವರೂ ಟೂರ್ನಿಯಿಂದ ಹಿಂದೆ ಸರಿಯಬೇಕಿದೆ.
‘ಭಾರತ ತಂಡದ ಎಲ್ಲ ಆಟಗಾರರನ್ನು ಪ್ರಸ್ತುತ ತಾವಿರುವ ಹೋಟೆಲ್ನ ಕೋಣೆಗಳಲ್ಲಿ ಸ್ವಯಂ-ಪ್ರತ್ಯೇಕವಾಸದಲ್ಲಿರಿಸಲಾಗಿದೆ‘ ಎಂದು ಬಿಡಬ್ಲ್ಯುಎಫ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.