ನೋಯ್ಡಾ: ಕರ್ನಾಟಕದ ಮೂವರು ಪ್ರಮುಖ ಆಟಗಾರರನ್ನು ಒಳಗೊಂಡಿರುವ ತಂಡಗಳ ನಡುವಿನ ಕದನದಲ್ಲಿ ತಮಿಳ್ ತಲೈವಾಸ್ ತಂಡ ಭರ್ಜರಿ ಜಯ ಗಳಿಸಿತು. ಇಲ್ಲಿನ ಶಹೀದ್ ವಿಜಯ್ ಸಿಂಗ್ ಪಾಠಕ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ತಲೈವಾಸ್ ಆತಿಥೇಯ ಯು.ಪಿ.ಯೋಧಾಸ್ ಎದುರು 46–26ರಿಂದ ಗೆದ್ದಿತು.
ಸುಖೇಶ್ ಹೆಗ್ಡೆ ಅವರು ಇರುವ ತಲೈವಾಸ್ ಮತ್ತು ರಿಷಾಂಕ್ ದೇವಾಡಿಗ ಅವರ ನಾಯಕತ್ವದ ಯೋಧಾಸ್ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಆರಂಭದಲ್ಲೇ ಆಧಿಪತ್ಯ ಸ್ಥಾಪಿಸಿದ ತಲೈವಾಸ್ ತಂಡ ಅಜಯ್ ಠಾಕೂರ್, ಜಸ್ವೀರ್ ಸಿಂಗ್ ಮತ್ತು ಸುಖೇಶ್ ಮೂಲಕ ಪಾಯಿಂಟ್ಗಳನ್ನು ಕಲೆ ಹಾಕಿತು. ಕನ್ನಡಿಗ ಪ್ರಶಾಂತ್ ಕುಮಾರ್ ರೈ ಯೋಧಾಸ್ ಪರ ಮಿಂಚಿದರು.
ಮೊದಲಾರ್ಧದ ಮುಕ್ತಾಯಕ್ಕೆ ತಂಡ 26–11ರ ಮುನ್ನಡೆ ಸಾಧಿಸಿತು. ತವರಿನ ಪ್ರೇಕ್ಷಕರ ಮುಂದೆ ಗೆಲುವಿಗಾಗಿ ಪೈಪೋಟಿ ನಡೆಸಿದ ಯೋಧಾಸ್ ದ್ವಿತೀಯಾರ್ಧದ ಆರಂಭದ ಎರಡು ನಿಮಿಷ ಉತ್ತಮ ಆಟವಾಡಿತು. ನಂತರ ತಲೈವಾಸ್ ಹಿಡಿತ ಸಾಧಿಸಿತು.
ತಲೈವಾಸ್ ಪರ ಸುಖೇಶ್ ಮತ್ತು ಅಜಯ್ ಠಾಕೂರ್ ತಲಾ ಒಂಬತ್ತು ಪಾಯಿಂಟ್ ಗಳಿಸಿದರೆ ಮಂಜೀತ್ ಚಿಲ್ಲಾರ್ ಎಂಟು ಪಾಯಿಂಟ್ ಕಲೆ ಹಾಕಿದರು. ಅಮಿತ್ ಹೂಡ ಆರು ಪಾಯಿಂಟ್ ಗಳಿಸಿದರು. ಯೋಧಾಸ್ಗೆ ಪ್ರಶಾಂತ್ ಕುಮಾರ್ ರೈ ಏಳು ಪಾಯಿಂಟ್ ಗಳಿಸಿಕೊಟ್ಟರು. ರಿಷಾಂಕ್ ಮಿಂಚಲು ವಿಫಲರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.