ADVERTISEMENT

ಜೆಹಾನ್‌ಗೂ ಶೀಘ್ರ ಕಾಲ ಕೂಡಿಬರಲಿದೆ: ಎಫ್‌ಎಂಎಸ್‌ಸಿಐ

ಅರ್ಜುನ ಪ್ರಶಸ್ತಿ: ಐಶ್ವರ್ಯಾ ಪಿಸ್ಸೆಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 20:00 IST
Last Updated 5 ಜೂನ್ 2020, 20:00 IST

ನವದೆಹಲಿ: ಅರ್ಜುನ ಪ್ರಶಸ್ತಿಗೆ ಫಾರ್ಮುಲಾ ವನ್‌ ಭರವಸೆಯ ಜೆಹಾನ್‌ ದಾರುವಾಲಾ ಬದಲಿಗೆ ಆಫ್‌ ರೋಡ್‌ ರೇಸರ್‌ ಐಶ್ವರ್ಯಾ ಪಿಸ್ಸೆ ಅವರನ್ನು ಶಿಫಾರಸು ಮಾಡಿರುವ ಭಾರತ ಮೋಟರ್‌ ಸ್ಪೋರ್ಟ್ಸ್‌ ಕ್ಲಬ್‌ಗಳ ಒಕ್ಕೂಟದ (ಎಫ್‌ಎಂಎಸ್‌ಸಿಐ) ನಿರ್ಧಾರ ಹು‌ಬ್ಬೇರುವಂತೆ ಮಾಡಿದೆ.

ಆದರೆ ತನ್ನ ನಿರ್ಧಾರ ಸಮರ್ಥಿಸಿಕೊಂಡಿರುವ ಎಫ್‌ಎಂಎಸ್‌ಸಿಐ, 21 ವರ್ಷದ ರ‍್ಯಾಲಿ ಚಾಲಕನಿಗೂ ‘ಶೀಘ್ರವೇ ಕಾಲ ಕೂಡಿಬರಲಿದೆ’ ಎಂದು ಹೇಳಿದೆ.

ಜೆಹಾನ್‌, ಅವರು ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದ ರೇಸ್‌ ಚಾಲಕ ಎನಿಸಿದ್ದರು. ಪ್ರಶಸ್ತಿ ನಾಮಕರಣಕ್ಕೆ ನಾಲ್ಕು ವರ್ಷಗಳ ಸಾಧನೆ ಪರಿಗಣಿಸಲಾಗುತ್ತದೆ.

ADVERTISEMENT

ಎಫ್‌ಎಂಎಸ್‌ಸಿಐ, ಐಶ್ವರ್ಯಾ ಜೊತೆಗೆ ಬೈಕ್‌ ರೇಸರ್‌ ಸಿ.ಎಸ್‌.ಸಂತೋಷ್‌, 2016ರ ಕಾರ್ಟಿಂಗ್‌ ಚಾಂಪಿಯನ್‌ ಶಹಾನ್‌ ಅಲಿ ಮೊಹ್ಸಿನ್‌ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿತ್ತು.

ಮೂರು ವರ್ಷ ಕಡೆಗಣಿಸಿದ ಬಳಿಕ, ಕಳೆದ ವರ್ಷ ಕೊನೆಗೂ ಗೌರವ್‌ ಗಿಲ್‌ ಅವರಿಗೆ ಅರ್ಜುನ ಪ್ರಶಸ್ತಿ ಒಲಿದಿತ್ತು.

ನಾರಾಯಣ್‌ ಕಾರ್ತಿಕೇಯನ್‌ ಮತ್ತು ಕರುಣ್‌ ಚಾಂದೋಕ್‌ ಮಾತ್ರ ಫಾರ್ಮುಲಾ ವನ್‌ನಲ್ಲಿ ಭಾಗವಹಿಸಿರುವ ಭಾರತೀಯರೆನಿಸಿದ್ದಾರೆ. ಈಗ ಜೆಹಾನ್‌ ಆ ಸಾಧನೆಯ ಸನಿಹದಲ್ಲಿದ್ದಾರೆ.

ಪ್ರಶಸ್ತಿಗೆ ಅವರಿಗೂ ಶೀಘ್ರದಲ್ಲೇ ಕಾಲ ಕೂಡಿಬರಲಿದೆ ಎಂದು ಎಫ್‌ಎಂಎಸ್‌ಸಿಐ ಉಪಾಧ್ಯಕ್ಷ ಶಿವು ಶಿವಪ್ಪ ತಿಳಿಸಿದರು.

ಜೆಹಾನ್‌, ನ್ಯೂಜಿಲೆಂಡ್‌ ಗ್ಯಾನ್‌ಪ್ರಿ ಗೆದ್ದ ಮೊದಲ ಭಾರತೀಯ ಎನಿಸಿದ್ದರು. 2017ರಲ್ಲಿ ಅವರು ಇದನ್ನು ಸಾಧಿಸಿದ್ದರು.

24 ವರ್ಷದ ಪಿಸ್ಸೆ, ಸಂತೋಷ್‌ ಅವರಂತೆ ದ್ವಿಚಕ್ರ ವಿಭಾಗದ ರೈಡರ್‌ ಆಗಿದ್ದಾರೆ. ಅವರು ಕಳೆದ ವರ್ಷ ವಿಶ್ವ ಮಟ್ಟದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ನಾಲ್ಕು ಸುತ್ತುಗಳ ಬಳಿಕ ಎಫ್‌ಐಎಂ ವಿಶ್ವಕಪ್‌ ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.