ಮಂಗಳೂರು: ಸುರತ್ಕಲ್ನ ಸಸಿಹಿತ್ಲು ಸಮುದ್ರದಲ್ಲಿ ಗುರುವಾರ ಆರಂಭವಾಗಲಿರುವ ಮೂರು ದಿನಗಳ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್ಷಿಪ್ನ ನಾಲ್ಕು ವಿಭಾಗಗಳಲ್ಲಿ 70 ಸರ್ಫರ್ಗಳು ಪಾಲ್ಗೊಳ್ಳಲಿದ್ದಾರೆ.
ಮೂಲ್ಕಿಯ ಮಂತ್ರ ಸರ್ಫಿಂಗ್ ಕ್ಲಬ್ ಆಶ್ರಯದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್ ಆಯೋಜಿಸಿರುವ ನಾಲ್ಕನೇ ಆವೃತ್ತಿಯ ಚಾಂಪಿಯನ್ಷಿಪ್ ಇದಾಗಿದ್ದು ದೇಶದ ಪ್ರಮುಖ 10 ಮಂದಿ ಸರ್ಫರ್ಗಳ ಪೈಕಿ ಏಳು ಮಂದಿ ಪಾಲ್ಗೊಳ್ಳುತ್ತಿರುವುದರಿಂದ ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ.
ಸತೀಶ್ ಸರವಣನ್, ರೂಬನ್ ವಿ., ಶ್ರೀಕಾಂತ್ ಡಿ, ಸೂರ್ಯ ಪಿ., ಸಂಜಯ್ ಕುಮಾರ್ ಎಸ್., ನಿತೀಶ್ ವರುಣ್, ಮಣಿಕಂಠನ್, ಸೃಷ್ಟಿ ಸೆಲ್ವಂ ಅವರೊಂದಿಗೆ ಈಚೆಗೆ ತಣ್ಣೀರುಬಾವಿಯಲ್ಲಿ ನಡೆದ ರಾಷ್ಟ್ರಮಟ್ಟದ ಸರ್ಫಿಂಗ್ನಲ್ಲಿ ಗಮನ ಸೆಳೆದಿದ್ದ ಮಂಗಳೂರು ಸರ್ಫ್ ಕ್ಲಬ್ನ ಸಿಂಚನಾ ಡಿ.ಗೌಡ, ಗೋವಾದ ಸುಗರ್ ಶಾಂತಿ ಮುಂತಾದವರು ನಿರೀಕ್ಷೆಯಿಂದ ಕಣಕ್ಕೆ ಇಳಿಯಲಿದ್ದಾರೆ. ಅಮೋಘ ಸಾಮರ್ಥ್ಯದ ಮೂಲಕ ಮಿಂಚುತ್ತಿರುವ ಕಿಶೋರ್ ಕುಮಾರ್ ಬಾಲಕರ ವಿಭಾಗದಲ್ಲಿ ಭರವಸೆ ಮೂಡಿಸಿದ್ದಾರೆ.
ಪುರುಷ ಮತ್ತು ಮಹಿಳಾ ವಿಭಾಗ, 16 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಭಾರತ ಸರ್ಫಿಂಗ್ ಫೆಡರೇಷನ್ನ ಉಪಾಧ್ಯಕ್ಷ ರಾಮ್ ಮೋಹನ್ ಪರಾಂಜಪೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.