ADVERTISEMENT

ಕಲಿಕೆಯ ಬೆಳಕು; ಕೆಲಸದ ಖಾತರಿ

ಇ.ಎಸ್.ಸುಧೀಂದ್ರ ಪ್ರಸಾದ್
Published 21 ಆಗಸ್ಟ್ 2011, 19:30 IST
Last Updated 21 ಆಗಸ್ಟ್ 2011, 19:30 IST
ಕಲಿಕೆಯ ಬೆಳಕು; ಕೆಲಸದ ಖಾತರಿ
ಕಲಿಕೆಯ ಬೆಳಕು; ಕೆಲಸದ ಖಾತರಿ   

ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ, ಪ್ರೌಢ, ಎಂಜಿನಿಯರಿಂಗ್ ಹಾಗೂ ವೃತ್ತಿ ಕೌಶಲ ತರಬೇತಿ ಉತ್ತೇಜಿಸುವ ಸಲುವಾಗಿ ಆರಂಭವಾದ ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಶಿಕ್ಷಣ ಸಂಸ್ಥೆ ಈಗ  ಕೌಶಲ ವೃದ್ಧಿಗಾಗಿ ಅಪೆರಲ್, ಟ್ರೈನರ್ ಹಾಗೂ ಫಿಟ್ಟರ್ ಕೋರ್ಸ್‌ಗಳನ್ನು ಆರಂಭಿಸಿದೆ. ಫೇಲಾದವರಿಗೂ ಉದ್ಯೋಗ ಕಲ್ಪಿಸುವ ಹೊಸ ಪ್ರಯೋಗಕ್ಕೆ ಅದು ಸಜ್ಜಾಗಿದೆ.

ಅಪೆರಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ತಿಂಗಳ ಟೈಲರಿಂಗ್ ಕೋರ್ಸನ್ನು ಇಲ್ಲಿ ನಡೆಸಲಾಗುತ್ತಿದೆ. ಇದರೊಂದಿಗೆ ಟರ್ನರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳ ಟೂಲ್ ಹಾಗೂ ಡೈ ತಯಾರಿಕೆ ಹಾಗೂ 2 ವರ್ಷಗಳ ಫಿಟ್ಟರ್ ಕೋರ್ಸ್‌ಗಳನ್ನೂ ಇಲ್ಲಿ ನಡೆಸಲಾಗುತ್ತಿದೆ.

ಅಪೆರಲ್ ವಿಭಾಗದ ತರಬೇತಿ ಪಡೆಯಲು ಕನಿಷ್ಠ 7ನೇ ತರಗತಿ ಪಾಸಾಗಿರಬೇಕು. ಆದರೆ ಟೂಲ್, ಡೈ ತಯಾರಿಕೆ ಹಾಗೂ ಫಿಟ್ಟರ್ ತರಬೇತಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಕಡ್ಡಾಯ.

`ದೊಡ್ಡಬಳ್ಳಾಪುರ ಜವಳಿ ಕ್ಷೇತ್ರಕ್ಕೆ ಹೆಸರುವಾಸಿ. ಜವಳಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ದೇಶ ವಿದೇಶಗಳ ನಾನಾ ಕಂಪೆನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಈ ಕ್ಷೇತ್ರಕ್ಕೆ ಬೇಕಾದ ನುರಿತ ಕೆಲಸಗಾರರನ್ನು  ಆರ್.ಎಲ್.ಜಾಲಪ್ಪ ಇನ್‌ಸ್ಟಿಟ್ಯೂಟ್ ಆಫ್ ಅಪೆರಲ್ ಟ್ರೈನಿಂಗ್ ರೂಪಿಸುತ್ತಿದೆ. ಆರ್‌ಎಲ್‌ಜೈಟಿ ಹಾಗೂ ಐಎಲ್‌ಎಫ್‌ಎಸ್ ಸಹಭಾಗಿತ್ವದಲ್ಲಿ ಒಂದು ತಿಂಗಳ ತರಬೇತಿ ನೀಡಲಾಗುತ್ತಿದೆ~ ಎಂದು ಶಿಕ್ಷಣ ಸಂಸ್ಥೆಯ ನಿರ್ದೇಶಕ ನಾಗೇಂದ್ರ ಸ್ವಾಮಿ ಹೇಳುತ್ತಾರೆ.

ಶೇ. 100ರಷ್ಟು ನೌಕರಿ ಖಾತರಿ ಇರುವ ಈ ಕೋರ್ಸ್‌ಗಳಲ್ಲಿ ಅಪೆರಲ್‌ಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರದ ಅಪೆರಲ್ ಪಾರ್ಕ್‌ನಲ್ಲೇ ಕೆಲಸ ಲಭ್ಯ. ಇನ್ನು ಟೂಲ್, ಡೈ ಮೇಕರ್ ಹಾಗೂ ಫಿಟ್ಟರ್ ಟ್ರೈನಿಗಳಿಗೆ ಎಲ್ ಅಂಡ್ ಟಿ, ವೋಲ್ವೊ, ಬ್ಲೂ ಸ್ಟಾರ್ ಕಂಪೆನಿಗಳು ಕೆಲಸ ನೀಡುತ್ತಿವೆ.

ಪ್ಲೇಸ್ಮೆಂಟ್ ಹಬ್
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಸೇರಿದಂತೆ ನಾಲ್ಕು ಜಿಲ್ಲೆಗಳ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ `ಪ್ಲೇಸ್ಮೆಂಟ್ ಹಬ್~ ಆರಂಭಿಸಲು ಸಕಲ ಸಿದ್ಧತೆಗಳು ಇಲ್ಲಿ ನಡೆದಿವೆ. ಎಸ್ಸೆಸೆಲ್ಸಿ, ಪಿಯುಸಿ, ಪದವಿಯಲ್ಲಿ ಅನುತ್ತೀರ್ಣರಾದ ಹಾಗೂ ಕಡುಬಡತನದಿಂದ ಓದನ್ನು ಮುಂದುವರಿಸಲಾಗದ ಅಭ್ಯರ್ಥಿಗಳಿಗೆ ಕೆಲಸ ಕೊಡಿಸುವುದು ಈ ಯೋಜನೆಯ ಉದ್ದೇಶ. ಇದಕ್ಕೆಂದೇ ಕೆಲ ಕಂಪೆನಿಗಳೊಂದಿಗೆ ಸಂಸ್ಥೆ ಮಾತುಕತೆ ನಡೆಸಿದೆ.

ಗ್ರಾಮೀಣ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ
`ಗ್ರಾಮೀಣ ಪ್ರದೇಶಕ್ಕೆ ವಿಶೇಷ ಒತ್ತು ನೀಡುವ ದೃಷ್ಟಿಯಿಂದ ಇಲ್ಲಿರುವ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇ. 22ರಿಂದ 25ರಷ್ಟು ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಹೀಗೆ ದಾಖಲಾದ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ಇನ್ನು ಗ್ರಾಮೀಣ ಪ್ರದೇಶದ ಹಿಂದುಳಿದ ವರ್ಗಗಳ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರ ಭವಿಷ್ಯ ರೂಪಿಸುವ ದೃಷ್ಟಿಯಿಂದ ಅವರಿಗೆ ಇಲ್ಲಿ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಉಳಿದುಕೊಳ್ಳಲು ಹಾಸ್ಟೆಲ್ ವ್ಯವಸ್ಥೆ, ಊಟ, ಬಟ್ಟೆ ಸೇರಿದಂತೆ ಅವರ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಎಲ್ಲಾ ಶೈಕ್ಷಣಿಕ ಸೌಲಭ್ಯದ ಜವಾಬ್ದಾರಿಯನ್ನು ಸಂಸ್ಥೆಯೇ ಹೊತ್ತುಕೊಳ್ಳಲಿದೆ~ ಎಂದು ಸಂಸ್ಥೆಯ ಪ್ಲೇಸ್ಮೆಂಟ್ ಅಧಿಕಾರಿ ಯತೀಶ ಹೇಳುತ್ತಾರೆ
ಆರ್‌ಎಲ್‌ಜೆಐಟಿ ಎಂಜಿನಿಯರಿಂಗ್ ವಿಭಾಗ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

ಇಲ್ಲಿನ ವಿದ್ಯಾರ್ಥಿಗಳು ಕಂಡುಹಿಡಿದ ಸೌರ ಹಾಗೂ ಇಂಧನ ಶಕ್ತಿಯಿಂದ ಚಲಿಸುವ ಕಾರು ಹಾಗೂ ಕಳೆ ಕೀಳುವ ಯಂತ್ರ ಕ್ಷೇತ್ರದ ಗಮನ ಸೆಳೆದಿದೆ. ಜತೆಗೆ ಇಲ್ಲಿರುವ ಸುಸಜ್ಜಿತ ಸಂಶೋಧನಾ ಕೇಂದ್ರದಲ್ಲಿ ದೈನಂದಿನ ಬದುಕಿಗೆ ಅನುಕೂಲವಾಗುವಂಥ ಅದರಲ್ಲೂ ವಿಶೇಷವಾಗಿ ಕೃಷಿಗೆ ಅನುಕೂಲವಾಗುವ ಯಂತ್ರೋಪಕರಣಗಳನ್ನು ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿ ಪ್ರದರ್ಶನಕ್ಕಿಟ್ಟಿದ್ದಾರೆ.  `ಪ್ರಾಜೆಕ್ಟ್ ಬ್ಯಾಂಕ್~ನಲ್ಲಿ ದೇಶದ ಯಾವುದೇ ಮೂಲೆಯಲ್ಲಿ ಮಾಡಲಾದ ಉತ್ತಮ ಪ್ರಾಜೆಕ್ಟ್ ಪ್ರತಿಗಳನ್ನು ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.