ಬೆಂಗಳೂರು: ದಿವಿಜ್ ಶರಣ್ ಮತ್ತು ಯೂಕಿ ಭಾಂಬ್ರಿ ಅವರಿಗೆ ಸೋಮವಾರ ಆರಂಭವಾಗಲಿರುವ ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ನೀಡಲಾಗಿದೆ. ಆದಿಲ್ ಕಲ್ಯಾಣ್ಪುರಿ ಮತ್ತು ಮುಕುಂದ್ ಶಶಿಕುಮಾರ್ ಅವರಿಗೂ ಈ ಮೂಲಕ ಪ್ರವೇಶ ಲಭಿಸಿದೆ.
ಡಬಲ್ಸ್ ವಿಭಾಗದಲ್ಲಿ ಭಾರತದ ಜೀವನ್ ನೆಡುಂಚೆಳಿಯನ್ ಮತ್ತು ಪುರವ್ ರಾಜ ಜೋಡಿ ಅಗ್ರ ಶ್ರೇಯಾಂಕ ಪಡೆದುಕೊಂಡಿದ್ದಾರೆ.
‘ಟೂರ್ನಿಯ ಮೊದಲ ವಾರದಲ್ಲಿ ಅತ್ಯಂತ ಕಠಿಣ ಪೈಪೋಟಿ ಕಂಡುಬರುವ ಸಾಧ್ಯತೆ ಇದೆ. ಆಟಗಾರರು, ವಿಶೇಷವಾಗಿ ಭಾರತದವರು ಉತ್ತಮ ಸಾಧನೆ ಮಾಡುವ ಸಾಧ್ಯತೆ ಇದ್ದು ರ್ಯಾಂಕಿಂಗ್ನಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ’ ಎಂದು ಟೂರ್ನಿಯ ನಿರ್ದೇಶಕ ಸುನಿಲ್ ಯಜಮಾನ್ ತಿಳಿಸಿದರು.
‘ಕ್ರೀಡಾಂಗಣದ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಆಸನಗಳಲ್ಲಿ ಮಾತ್ರ ಭರ್ತಿ ಮಾಡಲು ಅವಕಾಶವಿದೆ. ಆದರೂ ಟೆನಿಸ್ ಪ್ರೇಮಿಗಳು ಅತ್ಯುತ್ಸಾಹದಿಂದ ಪಂದ್ಯಗಳನ್ನು ವೀಕ್ಷಿಸುವ ನಿರೀಕ್ಷೆ ಇದೆ. ಕ್ರೀಡಾಂಗಣ ಪ್ರವೇಶಿಸುವವರು ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕಾದುದು ಕಡ್ಡಾಯ’ ಎಂದು ಸುನಿಲ್ ವಿವರಿಸಿದರು.
ಪ್ರಜ್ಞೇಶ್ ಗುಣೇಶ್ವರನ್ ಮತ್ತು ರಾಮನಾಥನ್ ರಾಮ್ಕುಮಾರ್ ಅವರು ನೇರ ಅರ್ಹತೆ ಗಳಿಸಿರುವ ಭಾರತದ ಆಟಗಾರರಾಗಿದ್ದು ಸಾಕೇತ್ ಮೈನೇನಿ, ಎಸ್.ಡಿ. ಪ್ರಜ್ವಲ್ ದೇವ್ ಮತ್ತು ಋಷಿ ರೆಡ್ಡಿಗೆ ವೈಲ್ಡ್ ಕಾರ್ಡ್ ನೀಡಲಾಗಿದೆ. ನಿಕ್ಕಿ ಪೂಣಚ್ಚ, ಕರಣ್ ಸಿಂಗ್, ಆದಿಲ್ ಕಲ್ಯಾಣ್ಪುರ್ ಮತ್ತು ಅರ್ಜುನ್ ಖಾಡೆ ಅವರು ಅರ್ಹತಾ ಸುತ್ತಿನಲ್ಲಿ ಆಡಬೇಕಾಗಿದೆ.
ವಿಶ್ವ ರ್ಯಾಂಕಿಂಗ್ನಲ್ಲಿ 80ನೇ ಸ್ಥಾನದಲ್ಲಿರುವ ಜೆಕ್ ಗಣರಾಜ್ಯದ ಜಿರಿ ವೆಸೆಲಿ ಅವರಿಗೆ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕ ನೀಡಲಾಗಿದೆ. 93ನೇ ರ್ಯಾಂಕಿಂಗ್ನ ಸ್ಟೆಫನೊ ಟ್ರಾವಗ್ಲಿಯಾ ಅವರಿಗೆ ದ್ವಿತೀಯ ಶ್ರೇಯಾಂಕ ಮತ್ತು ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವುಕಿಚ್ ಮತ್ತು ಹ್ಯೂಗೊ ಗ್ರೇನಿಯರನ್ ಅವರಿಗೆ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಶ್ರೇಯಾಂಕ ಲಭಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.