ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಬೆಳಗ್ಗೆ 10.12ರಿಂದ ಮಧ್ಯಾಹ್ನ 1.31ರವರೆಗೆ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಲಿದೆ.
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ, ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು, ಸೂರ್ಯ ಒಂದು ಬಳೆಯಂತೆ ಕಾಣುವಸೌರ ವಿದ್ಯಮಾನ ಇದಾಗಿದ್ದು,ಉತ್ತರ ಭಾರತದ ರಾಜಸ್ಥಾನ, ಹರಿಯಾಣ, ಉತ್ತರಾಖಂಡದ ಕೆಲಭಾಗಗಳಲ್ಲಷ್ಟೇ ಪೂರ್ಣ ಪ್ರಮಾಣದ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ.ದಕ್ಷಿಣ ಭಾರತದಲ್ಲಿ ಪಾರ್ಶ್ವ ಸೂರ್ಯಗ್ರಹಣ ಕಾಣಿಸಿಕೊಳ್ಳಲಿದೆ.
ಶೇಕಡ 40ರಷ್ಟು 11.47ರ ವೇಳೆಗೆ ಕಾಣಿಸಿಕೊಳ್ಳಲಿದ್ದು, ಬರಿಗಣ್ಣಿನಿಂದ ಇದನ್ನು ವೀಕ್ಷಿಸುವುದು ಅಪಾಯಕಾರಿ. ಗ್ರಹಣ ವೀಕ್ಷಣೆಗೆ ಎಂದೇ ತಯಾರಿಸಲಾಗಿರುವ ವಿಶೇಷ ಕನ್ನಡಕಗಳನ್ನು ಬಳಸಿ ಇದನ್ನು ನೋಡಬೇಕು ಎಂದು ನಗರದ ಜವಾಹರಲಾಲ್ ನೆಹರೂ ತಾರಾಲಯ ತಿಳಿಸಿದೆ.
ಕೋವಿಡ್–19 ಕಾರಣದಿಂದಾಗಿ ಈ ವರ್ಷ ತಾರಾಲಯದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ಬದಲಾಗಿ ತಾರಾಲಯದ ವೆಬ್ಸೈಟ್, ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನಲ್ನಲ್ಲಿಆನ್ಲೈನ್ ಮೂಲಕ ಗ್ರಹಣದ ವಿಡಿಯೊ ವೀಕ್ಷಿಸಬಹುದು ಎಂದು ತಿಳಿಸಿದೆ.
ಗ್ರಹಣದ ಅವಧಿಯಲ್ಲಿ ರಾಜ್ಯದ ಹಲವು ದೇವಾಲಯಗಳು ಮುಚ್ಚಿರಲಿವೆ. ಆಫ್ರಿಕಾ, ಆಗ್ನೇಯ ಯುರೋಪ್, ಮಧ್ಯ ಪ್ರಾಚ್ಯ, ಏಷ್ಯಾ (ಉತ್ತರ, ಪೂರ್ವ ರಷ್ಯಾ ಹೊರತುಪಡಿಸಿ), ಇಂಡೊನೇಷ್ಯ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.