ಮಿದ್ನಾಪುರ (ಪಶ್ಚಿಮ ಬಂಗಾಳ): ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಚಪ್ಪರ ಕುಸಿದು ಗಾಯಗೊಂಡ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅಲ್ಲಿಗೆ ಭೇಟಿ ನೀಡಿದ ಮೋದಿಯವರಲ್ಲಿ ಆಟೋಗ್ರಾಫ್ ಕೇಳಿದ್ದಾರೆ.ಆಗ ಮೋದಿಯವರು ವಿನಯತೆಯಿಂದ ಆಕೆಗೆ ಆಟೋಗ್ರಾಫ್ ನೀಡುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸೋಮವಾರ ಮಿದ್ನಾಪುರದಲ್ಲಿ ಮೋದಿ ರ್ಯಾಲಿ ವೇಳೆ ಚಪ್ಪರ ಕುಸಿದು 67 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 13 ಮಹಿಳೆಯರಿದ್ದಾರೆ. ಮೋದಿ ಭಾಷಣ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಸಮಾರಂಭ ನಡೆದ ಮೈದಾನದ ಮುಖ್ಯದ್ವಾರದ ಸಮೀಪದಲ್ಲಿ ಈ ಚಪ್ಪರ ಹಾಕಲಾಗಿತ್ತು. ಭಾಷಣದ ನಡುವೆಯೇ ಟೆಂಟ್ ಕುಸಿಯುತ್ತಿರುವುದನ್ನು ಪ್ರಧಾನಿ ಗಮನಿಸಿದರು. ತಮ್ಮ ಬಳಿ ನಿಂತಿದ್ದ ವಿಶೇಷ ರಕ್ಷಣಾ ಪಡೆಯ (ಎಸ್ಪಿಜಿ) ಸಿಬ್ಬಂದಿಯನ್ನು ತಕ್ಷಣವೇ ಅಲ್ಲಿಗೆ ಧಾವಿಸುವಂತೆ ಸೂಚಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಪ್ಪರದ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ಎಸ್ಪಿಜಿ ಸಿಬ್ಬಂದಿಗೆ ಪ್ರಧಾನಿಯವರ ಆಪ್ತ ಸಿಬ್ಬಂದಿ ಮತ್ತು ಬಿಜೆಪಿಯ ಕಾರ್ಯಕರ್ತರು ನೆರವಾದರು. ಪ್ರಧಾನಿಯ ಬೆಂಗಾವಲು ಪಡೆಯಲ್ಲಿದ್ದ ಆಂಬುಲೆನ್ಸ್ನಲ್ಲಿಯೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ, ಮೋದಿ ಅವರು ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿದರು.
ಚಪ್ಪರ ಕುಸಿದ ಬಳಿಕವೂ ಮೋದಿ ಭಾಷಣ ಮುಂದುವರಿಸಿದರು. ಜನರು ಶಿಸ್ತಿನಿಂದ ವರ್ತಿಸಿದರು ಮತ್ತು ಗಾಯಗೊಂಡವರಿಗೆ ನೆರವಾದವರು ಎಂದು ಅಲ್ಲಿ ಸೇರಿದ್ದವರನ್ನು ಶ್ಲಾಘಿಸಿದರು.
ಗಾಯಗೊಂಡವರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕುಸಿಯಲು ಕಾರಣ
ಕೆಲವು ಜನರು ಚಪ್ಪರದ ಮೇಲೆ ಹತ್ತಿದ್ದೇ ಅದು ಕುಸಿಯಲು ಕಾರಣ. ಚಪ್ಪರದಿಂದ ಕೆಳಗೆ ಇಳಿಯುವಂತೆ ಪ್ರಧಾನಿ ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಆದರೆ ಜನರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
ಟ್ವೀಟ್ ಪ್ರತಿಕ್ರಿಯೆಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.