ADVERTISEMENT

ಭಾವಿ ಅಮ್ಮನಿಗೆ ಕಾಡುವ ಅಜೀರ್ಣ

ಡಾ.ಕೆ.ಎಸ್‌.ಪಲ್ಲವಿ
Published 16 ಜನವರಿ 2015, 19:30 IST
Last Updated 16 ಜನವರಿ 2015, 19:30 IST

ಶಕ್ತಿಯಿಲ್ಲದೆ ನಾವು ನಮ್ಮ ಜೀವನವನ್ನು ನೆಡೆಸಲು ಅಸಾಧ್ಯ. ಜೀವನವೇನು ಈ ಪ್ರಪಂಚವೇ ನಡೆಯಲು ಸಾಧ್ಯವಿಲ್ಲ. ಯಾವುದೇ ಕೆಲಸವನ್ನು ಮಾಡಲೂ ನಮಗೆ ಶಕ್ತಿ ಬೇಕೇ ಬೇಕಾಗಿರುತ್ತದೆ. ಆದ್ದರಿಂದ ಈ ಜಗತ್ತಿಗೆ ಮೂಲ ಕಾರಣವಾದ ಶಕ್ತಿಯನ್ನು ಸ್ತ್ರೀಗೆ ಹೋಲಿಸಿ ಅದನ್ನು ಆದಿಶಕ್ತಿ ಎಂದಿರುತ್ತಾರೆ. ಆದಿಶಕ್ತಿಯ ರೂಪವಾದ ಸ್ತ್ರೀಗೂ ಕೂಡ ತನ್ನ ಜೀವನವನ್ನು ನಡೆಸಲು ಶಕ್ತಿಬೇಕಿರುತ್ತದೆ. ಅದು ಅವಳಿಗೆ ಸಿಗುವುದು ಅವಳ ಜೀರ್ಣಕ್ರಿಯೆಯಿಂದ.

ಜೀರ್ಣಶಕ್ತಿಯು ಸರಿಯಾಗಿದ್ದಲ್ಲಿ ಅವಳು ಸೇವಿಸಿದ ಆಹಾರದ ಸಂಪೂರ್ಣ ಪೌಷ್ಟಿಕಾಂಶ ಅವಳಿಗೆ ದೊರೆಯುತ್ತದೆ. ಆದರೆ ಹೆಣ್ಣು ತಾನು ಗರ್ಭಧರಿಸಿದಾಗ ಅವಳ ಜೀರ್ಣಕ್ರಿಯೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತವೆ ಹಾಗೂ ಇದರಿಂದ ಆಕೆ ಬಹಳ ತೊಂದರೆಗಳನ್ನು ಅನುಭವಿಸುತ್ತಾಳೆ.

ಗರ್ಭಿಣಿಯರಲ್ಲಿ ಜೀರ್ಣದ ತೊಂದರೆ ಸಾಮಾನ್ಯವಾದದ್ದು. ಇದಕ್ಕೆ ಕಾರಣ ದೇಹದಲ್ಲಾಗುವ ವ್ಯತ್ಯಾಸಗಳು. ಮಗು ದೊಡ್ಡದಾದ ಹಾಗೂ ಜಠರದ ಮೇಲೆ ಅದರಿಂದಾಗುವ ಒತ್ತಡ. ಪ್ರತಿ 10 ರಲ್ಲಿ 8 ಗರ್ಭಿಣಿಯರಿಗೆ ಜೀರ್ಣಕ್ರಿಯೆಯ ತೊಂದರೆ ಅವರ ಗರ್ಭಾವಸ್ಥೆಯಲ್ಲಿ ಖಂಡಿತ ಕಾಡುತ್ತದೆ.

ಲಕ್ಷಣಗಳು
ಗರ್ಭಿಣಿಯರಲ್ಲಿ ಅಜೀರ್ಣದ ಲಕ್ಷಣವು ಸಾಮಾನ್ಯರಂತೆ ಇದ್ದು, ಹೆಚ್ಚಿನ ತೊಂದರೆ ಹಾಗೂ ಭಯವನ್ನು ಉಂಟುಮಾಡುವುದು ಅದರಿಂದಾಗುವ ಹೊಟ್ಟೆನೋವು ಮತ್ತು ಎದೆ ನೋವು. ಊಟದ ನಂತರ ನಾವು ಅಜೀರ್ಣದ ಲಕ್ಷಣಗಳನ್ನು ಹೆಚ್ಚಿನದಾಗಿ ಗಮನಿಸಬಹುದಾಗಿರುತ್ತದೆ. ಕೆಲವೊಮ್ಮೆ ಸಮಯ ತಪ್ಪಿ ಊಟ ಮಾಡಿದಾಗ ಕೂಡ ಅಜೀರ್ಣವಾಗುತ್ತದೆ. ಗರ್ಭಾವಸ್ಥೆಯ ಯಾವ ಸಮಯದಲ್ಲಾದರೂ ಅಜೀರ್ಣ ಬರಬಹುದಾಗಿರುತ್ತದೆ ಆದರೆ ಇದು ಅತಿ ಹೆಚ್ಚು ಕಾಡುವುದು ಕೊನೆಯ ತಿಂಗಳುಗಳಲ್ಲಿ.

*ಮೈ ಭಾರವಾಗುವು, ಹೊಟ್ಟೆ ತುಂಬಿದ ಹಾಗೆ ಇರುವುದು
*ಎದೆ ಉರಿ, ಹೊಟ್ಟೆ ಉರಿ, ಹುಳಿ ತೇಗು, ತೇಗಿನೊಂದಿಗೆ ವಾಸನೆ
*ಉಸಿರಿನ ದುರ್ವಾಸನೆ
*ತಿಂದ ಆಹಾರ ಬಾಯಿಗೆ ಬರುವುದು
*ಹೊಟ್ಟೆ ಉಬ್ಬರ, ವಾಕರಿಕೆ, ವಾಂತಿ, ತಲೆ ನೋವು
*ಊಟ ಸೇರದೇ ಇರುವುದು

*ಹಸಿವಾಗದೇ ಇರುವುದು
*ಮಲ ಬದ್ಧತೆ ಕೆಲವೊಮ್ಮೆ ಭೇದಿ
*ಸುಸ್ತು, ತಲೆ ತಿರುಗು
*ಹೊಟ್ಟೆ ನೋವು, ಎದೆ ನೋವು
*ಹೊಟ್ಟೆಯೊಳಗೆ ಶಬ್ದಬರುವುದು
ಅಜೀರ್ಣಕ್ಕೆ ಕಾರಣ, ಪರಿಹಾರ
ಜಠರದಲ್ಲಿರುವ ಜೀರ್ಣಕ್ಕೆ ಸಂಬಂಧಿಸಿರುವ ಆಮ್ಲಸ್ರಾವವು ಗಂಟಲಿಗೆ ಬರುವುದರಿಂದ ಎದೆ ಉರಿ, ಹೊಟ್ಟೆ ಉರಿ ಉಂಟಾಗುತ್ತದೆ. ಗರ್ಭಿಣಿಯರಲ್ಲಿ ಜಠರದ ಮೇಲೆ ಒತ್ತಡ ಹೆಚ್ಚಿರುವುದರಿಂದ ಈ ತೊಂದರೆ ಹೆಚ್ಚಾಗಿ  ಕಾಣಬಹುದಾಗಿದೆ.

*ಅತಿ ಹೆಚ್ಚು ಆಹಾರ ಸೇವನೆ
*ಕರೆದ ಪದಾರ್ಥ, ಸಿಹಿ ಖಾದ್ಯಗಳು, ಹಾಲಿನ ಉತ್ಪನ್ನಗಳು, ಮಾಂಸಾಹಾರ ಅತಿ ಹೆಚ್ಚು ಸೇವಿಸಿದಾಗ ಅಜೀರ್ಣ ಸಂಭವಿಸುತ್ತದೆ.
*ಖಾಲಿ ಹೊಟ್ಟೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ, ಟೀ ಕುಡಿಯುವುದರಿಂದ 
*ನೀರು ಕಡಿಮೆ ಕುಡಿಯುವುದರಿಂದ, ತಣ್ಣನೆಯ  ನೀರು ಸೇವಿಸುವುದರಿಂದ. ವಾಂತಿ, ವಾಕರಿಕೆ ಇರುವುದರಿಂದ ನೀರು ಕುಡಿಯಲು ಆಗದೆ ದೇಹಕ್ಕೆ ಆಹಾರ ಜೀರ್ಣವಾಗುವಷ್ಟು ನೀರು ಸೇರದೇ ಇರುವುದರಿಂದ

*ಆಹಾರ ಸೇವನೆಯ ಪ್ರಮಾಣ ಮತ್ತು ಸಮಯದ ವ್ಯತ್ಯಾಸದಿಂದ ಗರ್ಭಿಣಿಯರು ಹೆಚ್ಚು ಪೌಷ್ಟಿಕಾಂಶದ ಆಹಾರವನ್ನು ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು.
*ಪ್ರತಿ 3 ಗಂಟೆಗೊಮ್ಮೆಯಾದರೂ ಸ್ವಲ್ಪ ಲಘು ಆಹಾರ ಸೇವಿಸಬೇಕು.
ಲಘು ಆಹಾರದಲ್ಲಿ ತರಕಾರಿ ರಸ, ಹಣ್ಣು, ಹಣ್ಣಿನ ರಸ, ಬೆಲ್ಲದ ಪಾನಕ, ಮೊಳಕೆ ಕಟ್ಟಿದ ಕಾಳು, ಕೋಸಂಬರಿ, ಅಕ್ಕಿತೊಳೆದ ನೀರಿನೊಂದಿಗೆ ಬೆಲ್ಲ, ಕಡೆದ ಮಜ್ಜಿಗೆ ಮುಂತಾದವುಗಳನ್ನು ಸೇವಿಸುವುದು ಉತ್ತಮ. ಆಹಾರದಲ್ಲಿ ಹೆಚ್ಚು ತರಕಾರಿ, ಪಲ್ಯ, ಕೆಂಪು ಅಕ್ಕಿಯ ಬಸೆದ ಅನ್ನ, ಹೆಚ್ಚು ಮಸಾಲೆಯಿಲ್ಲದ ಆಹಾರ, ಖಾರ ಕಡಿಮೆಯಿರುವ ಹಿತವಾದ ಆಹಾರ, ಮೆತ್ತಗಿನ ಆಹಾರ ಸೇವಿಸುವುದು ಉತ್ತಮ.

*ಧೂಮಪಾನ, ಮದ್ಯಪಾನ ಮಾಡುವುದರಿಂದ ಅಜೀರ್ಣ.
*ಪ್ರತಿ ನಿತ್ಯ ಹಾಲು ಕುಡಿಯುವುದರಿಂದ ಹೊಟ್ಟೆ ಉರಿ, ಎದೆ ಉರಿಯನ್ನು ಕಡಿಮೆ ಮಾಡಬಹುದು.
*ಆಹಾರ ಸೇವಿಸಿದ ನಂತರ ನಿದ್ರೆ ಮಾಡದೆ ಸ್ವಲ್ಪ ವ್ಯಾಯಾಮ ಅಥವ ನಡಿಗೆ ಅಜೀರ್ಣದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ.
*ಪ್ರತಿ ನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಅಜೀರ್ಣವನ್ನು ತಡೆಯಬಹುದಾಗಿರುತ್ತದೆ.

*ನಮ್ಮ ದೇಹಕ್ಕೆ ಯಾವ ಆಹಾರವನ್ನು ಸೇವಿಸಿದರೆ ಅಜೀರ್ಣವಾಗುತ್ತದೆ ಎಂದು ಅರಿತು ಅದರಿಂದ ದೂರವಿರುವುದು ಉತ್ತಮ. ಉದಾಹರಣೆಗೆ ಕೆಲವರಿಗೆ ಮೊಳಕೆ ಕಟ್ಟಿದ ಕಾಳು, ಚಾಕೊಲೇಟ್‌, ಕುಕ್ಕರ್‌ನಲ್ಲಿ ಮಾಡಿದ ಅನ್ನ, ರಾಗಿ ಮುದ್ದೆ ಸೇವಿಸುವುದರಿಂದ ಕೆಲವರಿಗೆ ಅಜೀರ್ಣವುಂಟಾಗುತ್ತದೆ.
(ಆಯುರ್ವೇದ ಪರಿಹಾರಕ್ಕಾಗಿ ಮುಂದಿನ ವಾರ ನಿರೀಕ್ಷಿಸಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT