ADVERTISEMENT

ಮಳೆಗಾಲದಲ್ಲಿ ಕೂದಲಿನ ರಕ್ಷಣೆಗೆ ಸೂತ್ರಗಳು

ಸ್ವಾಸ್ಥ್ಯ ಸೌಂದರ್ಯ

ಡಾ.ಚೈತ್ರ ವಿ.ಆನಂದ
Published 20 ಜೂನ್ 2014, 19:30 IST
Last Updated 20 ಜೂನ್ 2014, 19:30 IST

ಸೂಕ್ತ ಉತ್ಪನ್ನದ ಆಯ್ಕೆ: ನಿಮ್ಮ ಕೂದಲಿನ ಗುಣಕ್ಕೆ ತಕ್ಕ ಉತ್ಪನ್ನದ ಆಯ್ಕೆ ಮೊದಲ ಹೆಜ್ಜೆಯಾಗಿರಲಿ. ಸಾಧ್ಯವಿದ್ದಷ್ಟೂ ಸೌಮ್ಯಗುಣದ ಶಾಂಪೂನಿಂದ ಕೂದಲು ತೊಳೆಯುವುದು ಒಳಿತು. ಈ ದಿನಗಳಲ್ಲಿ ವೈದ್ಯಕೀಯವಾಗಿ ಪ್ರಮಾಣೀಕೃತವಾದ ಹಲವಾರು ಶಾಂಪೂವಿನಂಥ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇವು ಕೂದಲನ್ನು ರೇಷ್ಮೆಯಂತೆ ನುಣುಪು ಮತ್ತು ಹೊಳಪು ಎರಡನ್ನೂ ನೀಡುತ್ತವೆ. ಕೂದಲಿನ ಬುಡಕ್ಕೆ ಶಕ್ತಿ ನೀಡುತ್ತವೆ. ಸದೃಢಗೊಳಿಸಿ, ಪುನಃಶ್ಚೇತನಗೊಳಿಸುತ್ತವೆ. ಆದರೆ ಯಾವುದಕ್ಕೂ ನಿಮ್ಮ ಚರ್ಮ ವೈದ್ಯರನ್ನು ಅಥವಾ ಕುಟುಂಬ ವೈದ್ಯರನ್ನು ಸಂಪರ್ಕಿಸಿ ಮುಂದುವರಿಯುವುದು ಒಳಿತು.

ಮೇಲಿಂದ ಮೇಲೆ ತಲೆ ತೊಳೆಯುವುದು ಬೇಡ: ಮಳೆಯಲ್ಲಿ ನೆನೆಯದೇ ಇದ್ದಲ್ಲಿ, ವಾರದಲ್ಲಿ ಎರಡಕ್ಕಿಂತ ಹೆಚ್ಚು ಸಲ ತಲೆತೊಳೆಯುವುದು ಬೇಡ. ಇದು ನೈಸರ್ಗಿಕ ತೈಲವನ್ನು ತೊಳೆದು ಬುರುಡೆಯ ಚರ್ಮವನ್ನು ಶುಷ್ಕಗೊಳಿಸುವ ಸಾಧ್ಯತೆ ಇರುತ್ತದೆ. ಪ್ರತಿ ಸಲ ತಲೆತೊಳೆದಾಗಲೂ ಕಂಡೀಷ್ನರ್‌ ಬಳಸುವುದು ಒಳಿತು. ಇದರಿಂದ ಕೂದಲು ಅನಾವಶ್ಯಕವಾಗಿ ತುಂಡರಿಸುವುದನ್ನು ತಪ್ಪಿಸಬಹುದಾಗಿದೆ. ಅಲ್ಲದೇ ಹವಾಮಾನದಿಂದಾಗುವ ತೊಂದರೆಗಳನ್ನೂ ತಪ್ಪಿಸಬಹುದಾಗಿದೆ.

ಕೂದಲುದುರುವುದನ್ನು ತಪ್ಪಿಸಲು, ಸೀಳುವುದನ್ನು ತಪ್ಪಿಸಲು ಸಮತೋಲಿತ ಆಹಾರ ಸೇವನೆಯೂ ಅತ್ಯವಶ್ಯ. ಕೂದಲಿನ ಆರೈಕೆಗೆ ಆಹಾರವೂ ಮುಖ್ಯವಾಗಿದೆ. ವಿಟಾಮಿನ್ಸ್‌ಗಳು ಹಾಗೂ ಹಣ್ಣನ್ನು ಹೆಚ್ಚು ಹೆಚ್ಚು ಸೇವಿಸುವುದು ಒಳಿತು. ಮಳೆಗಾಲದಲ್ಲಿ ಕೂದಲನ್ನು ದೃಢಪಡಿಸಲು ಸಮತೋಲಿತ ಆಹಾರವನ್ನು ಬಳಸಲೇಬೇಕು. ನೀರಡಿಕೆಯಾಗದೇ ಇರುವುದು ಈ ಕಾಲದ ಇನ್ನೊಂದು ಸಮಸ್ಯೆಯಾಗಿದೆ. ಬಾಯಾರದಿದ್ದರೂ ದೇಹಕ್ಕೆ ನೀರಿನ ಅಗತ್ಯವಿದ್ದೇ ಇರುತ್ತದೆ. ಪ್ರತಿದಿನವೂ ನಾಲ್ಕರಿಂದ ಆರು ಲೀಟರ್‌ ನೀರನ್ನು ಸೇವಿಸಲೇಬೇಕು. ಇದರಿಂದ ಕೂದಲಿಗೆ ಪೋಷಣೆ ದೊರೆಯುತ್ತದೆ. 

ನಿಮ್ಮ ಊಟದಲ್ಲಿ ಬಯೊಟಿನ್‌, ಕಬ್ಬಿಣದಂಶ ಹಾಗೂ ಸಾಕಷ್ಟು ಪ್ರೋಟೀನುಗಳಿರುವಂತೆ ನೋಡಿಕೊಳ್ಳಿ. ಒಂದುವೇಳೆ ಈ ಅಂಶಗಳ ಕೊರತೆ ಕಂಡು ಬಂದಲ್ಲಿ, ಇವನ್ನು ಮಾತ್ರೆ ರೂಪದಲ್ಲಿಯೂ ಸ್ವೀಕರಿಸಬಹುದಾಗಿದೆ. ಆದರೆ ಮಾತ್ರೆಗಳನ್ನು ಸ್ವೀಕರಿಸುವ ಮುನ್ನ ಒಮ್ಮೆ ಕುಟುಂಬ ವೈದ್ಯರನ್ನು ಸಂಪರ್ಕಿಸಬೇಕು. ಅಥವಾ ಚರ್ಮವೈದ್ಯರೊಂದಿಗೆ ಸಮಾಲೋಚಿಸುವುದು ಒಳಿತು.

ಮಳೆಗಾಲದಲ್ಲಿ ತಲೆಗೆ ಎಣ್ಣೆ ಮಸಾಜ್‌ ಬೇಕೆಬೇಕು. ತಲೆ ಜಿಡ್ಡಾಗುವ ಆತಂಕದಿಂದ ಬಹುತೇಕ ಜನರು ತಲೆಗೆ ಎಣ್ಣೆಯನ್ನೇ ಬಳಸುವುದಿಲ್ಲ. ಆದರೆ ನೆಲ್ಲಿಕಾಯಿ ಅಂಶವಿರುವ ಯಾವುದೇ ಎಣ್ಣೆಯನ್ನು ಸುಖೋಷ್ಣವಾಗುವಷ್ಟು ಬಿಸಿ ಮಾಡಿ, ತಲೆ ಬುರುಡೆಗೆ ಮಸಾಜ್‌ ಮಾಡಬೇಕು. ಬುಡದಿಂದ ತುದಿಯವರೆಗೂ ಎಣ್ಣೆ ಲೇಪಿಸಬೇಕು. ನಲ್ವತ್ತೈದು ನಿಮಿಷಗಳ ನಂತರ ತಲೆತೊಳೆಯಬೇಕು.

ಎಣ್ಣೆಯ ಮಸಾಜ್‌ ಅಥವಾ ಕಂಡೀಷ್ನರ್‌ ನಂತರ ತಲೆಗೆ ಬಿಸಿ ಬಟ್ಟೆಯನ್ನು ಕಟ್ಟಿ ಉಷ್ಣ ಕೊಡುವುದು ಉತ್ತಮ ಪ್ರಯೋಗವಾಗಿದೆ. ಇದರಿಂದ ಕೂದಲಿನ ಬುಡಕ್ಕೆ ಅಗತ್ಯ ಪೋಷಕಾಂಶಗಳು ನೇರವಾಗಿ ದೊರೆಯುತ್ತವೆ. ಇಷ್ಟಕ್ಕೂ ದಿನವೊಂದಕ್ಕೆ ನೂರು ಕೂದಲು ಉದುರುವುದು ಸಾಮಾನ್ಯವಾಗಿದೆ. ಅದಕ್ಕಿಂತ ಹೆಚ್ಚಾದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳಿತು.
(ಮಾಹಿತಿಗೆ: 7676757575)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.