ADVERTISEMENT

ಕಲಾಕಾರರ ಕೈಯಲ್ಲಿ ಅರಳಿದ ಪ್ರಕೃತಿ

ಕಲಾಪ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2015, 19:52 IST
Last Updated 27 ಆಗಸ್ಟ್ 2015, 19:52 IST
ಕಲಾಕಾರರ ಕೈಯಲ್ಲಿ ಅರಳಿದ ಪ್ರಕೃತಿ
ಕಲಾಕಾರರ ಕೈಯಲ್ಲಿ ಅರಳಿದ ಪ್ರಕೃತಿ   

ಹಸಿರನ್ನೇ ಹೊದ್ದು ಮಲಗಿದ ಸುಂದರ ಗದ್ದೆ ಬಯಲುಗಳು, ಸೂರ್ಯಾಸ್ತದ ಸಂಭ್ರಮಕ್ಕೆ ಕೆಂಪಾದ ನೀರಿನ ಪದರ, ಅಲೆಯ ಅಬ್ಬರಕ್ಕೆ ಸಿಲುಕಿ ನರ್ತಿಸುವ ನೀರು, ಅಲ್ಲೆಲ್ಲೋ ಮರದ ಮೇಲೆ ಕೂತ ಕೋಗಿಲೆಯ ತಂಪಾದ ಗಾನ, ಚಿಲಿಪಿಲಿಗುಟ್ಟುವ ಗುಬ್ಬಚ್ಚಿಗಳ ನಿನಾದ, ಜೋರಾಗಿ ಸುರಿದ ವರುಣನ ಅರ್ಭಟ ತಣ್ಣಗಾಗಿ ಎಲೆಯ ತುದಿಯಲ್ಲಿ ತೊಟ್ಟಿಕ್ಕುತ್ತಿರುವ ಹನಿ ಇವೆಲ್ಲವೂ ಹಳ್ಳಿಯ ಸುಂದರ ಪ್ರಾಕೃತಿಕ ದ್ರಶ್ಯಕಾವ್ಯಗಳು.

ಪಟ್ಟಣದಲ್ಲೇ ಹುಟ್ಟಿ ಬೆಳೆದ ಅದೆಷ್ಟೋ ಮಂದಿ ಹಳ್ಳಿಯ ಮುಖವನ್ನೇ ನೋಡಿರುವುದಿಲ್ಲ. ಎಲ್ಲೋ ಫೋಟೊದಲ್ಲೋ, ಚಿತ್ರಗಳಲ್ಲೋ ಹಳ್ಳಿಯ ಸುಂದರ ವಾತಾವರಣವನ್ನು ನೋಡಿರುತ್ತಾರೆ. ಅಂತಹವರಿಗಾಗಿಯೇ ಜಯನಗರದ  ‘ಮ್ಯಾಗ್ನಿಟ್ಯೂಡ್ ಆರ್ಟ್‌ ಗ್ಯಾಲರಿ’ ಒಂದು ತಿಂಗಳ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದೆ.

‘ನೇಚರ್‌ ಸ್ಕೇಪ್‌’ ಎಂಬ ಹೆಸರಿನ ಈ ಚಿತ್ರಕಲಾ ಪ್ರದರ್ಶನ ಆಗಸ್ಟ್‌ 30ರವರೆಗೆ ನಡೆಯಲಿದ್ದು, ಈ ಪ್ರದರ್ಶನದಲ್ಲಿ ಆಯಿಲ್‌ ಪೇಂಟಿಂಗ್‌, ಆಕ್ರಿಲಿಕ್‌ ಮುಂತಾದ ಪ್ರಕಾರಗಳ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಹಳ್ಳಿಯೊಂದಿಗೆ ಮನುಷ್ಯ ಜೀವನವೂ ಹೇಗೆ ಸಂಬಂಧ ಇರಿಸಿಕೊಂಡಿದೆ, ಪ್ರಾಣಿ ಪಕ್ಷಿಗಳು ಪರಿಸರದ ನಡುವಿನ ಸಂಬಂಧ ಹೀಗೆ ಪ್ರಾಕೃತಿಕ ಸಂಬಂಧವನ್ನು ಸಾರುವ ಕಲಾವಿದರ ಚಿತ್ರಗಳು ಅಲ್ಲಿ ನೆರೆದ ಕಲಾ ರಸಿಕರ ಮನಸ್ಸಿಗೆ ಮುದ ನೀಡುವಂತಿದ್ದವು.


ನೀಲ್, ವನಿಲ್‌, ರಾಘವೇಂದ್ರ ರಚಿಸಿದ ವಿವಿಧ ಕಲಾಕೃತಿಗಳು ಕಣ್ಮನ ಸೆಳೆಯುವಂತಿದ್ದವು. ‘ಬೆಂಗಳೂರಿನಂತಹ ಸಿಟಿಗಳಲ್ಲಿ ಹುಟ್ಟಿ ಬೆಳೆದ ಜನರಿಗೆ ಪಕೃತಿ ಹಾಗೂ ಪ್ರಾಣಿ ಪಕ್ಷಿಗಳ ಬಗ್ಗೆ ಅರಿವಿರುವುದಿಲ್ಲ. ಪ್ರಕೃತಿ ಹಾಗೂ ಮಾನವನ ನಡುವಿನ ಕೊಂಡಿಯನ್ನು ಸಾರುವ ಈ ಚಿತ್ರಗಳು  ಬೆಂಗಳೂರಿಗರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ. ಅಪಾರ್ಟ್‌ಮೆಂಟ್‌ ಹಾಗೂ ವಿಲ್ಲಾಗಳ ಮಾಲೀಕರು ಇಂತಹ ಚಿತ್ರಗಳನ್ನು ಖರೀದಿಸುತ್ತಾರೆ’ ಎನ್ನುವುದು ಸಂಯೋಜಕರ ನುಡಿ.

ಪ್ರದರ್ಶನದ ಸಮಯ: ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT