ಒಂದು ಬಿರು ಬೇಸಿಗೆಯ ಮಧ್ಯಾಹ್ನ ತಡೆಯಲಾರದಷ್ವು ಬಾಯಾರಿಕೆಯಾಗಿತ್ತು. ತೆಂಗಿನಮರ ಹತ್ತುವುದರಲ್ಲಿ ನಿಸ್ಸೀಮಳಾದ ನನ್ನ ತಂಗಿಗೆ ಮರಹತ್ತಲು ಹೇಳಿ, ಅವಳ ಕಾಲಿಗೆ ನನ್ನ ಕೈಗಳಿಂದ ಮೆಟ್ಟಲು ನೀಡುತ್ತಿದ್ದೆ. ಆ ಸುಡುಬಿಸಿಲಿಗೆ ಬೆಂದು ಬೆಂಡಾಗಿದ್ದ ತೆಂಗಿನ ಸೋಗೆ ಮಟ್ಟೆಗಳಿಗೆ ಕೈಹಾಕುತ್ತಿದ್ದಂತೆ, ಮೂರು ಎಡೆಮಟ್ಟೆಗಳು ಒಂದರ ನಂತರ ಮತ್ತೊಂದು ಉದುರಿಬಿದ್ದವು. ನಾಲ್ಕನೆಯದರ ಜೊತೆಗೆ ನನ್ನ ತಂಗಿಯೂ ಧರೆಗುರುಳಿದಳು.
ಬಿದ್ದ ರಭಸಕ್ಕೆ ಕೆಳದವಡೆಯ ಮುಂದಿನ ಮೂರು ಹಲ್ಲುಗಳು ಒಳಬಾಗಿಕೊಂಡು ಬಾಯಿಯಿಂದ ರಕ್ತ ಸುರಿಯಲಾರಂಭಿಸಿತು. ಅಮ್ಮನ ಏಟಿಗೆ ಭಯಗೊಂಡ ನಾನು ಇನ್ನು ಮುಂದೆ ಅವಳು ಹೇಳುವ ಎಲ್ಲಾ ಮಾತುಗಳನ್ನು ಕೇಳುವ ಭರವಸೆ ನೀಡಿ, ಇದನ್ನು ಯಾರ ಬಳಿಯೂ ಹೇಳದಂತೆ ಪುಸಲಾಯಿಸಿದೆ. ಬಾಗಿದ ಹಲ್ಲುಗಳನ್ನು ಎಳೆದು ಅದುಮಿ ಸರಿಯಾಗಿ ಕೂರಿಸಿದೆ. ಒಂದೆರೆಡು ದಿನ ನೋವಿದ್ದದ್ದು ಬಿಟ್ಟರೆ ಮತ್ತೇನೂ ಆಗಲಿಲ್ಲ.
ಈಗ ಶಿಕ್ಷಕಿಯಾಗಿರುವ ಅವಳಿಗೆ ಇತ್ತೀಚೆಗೆ ಹಲ್ಲುನೋವು ಕಾಣಿಸಿಕೊಂಡಿತು. ದಂತವೈದ್ಯರ ಬಳಿ ತೋರಿಸಿದಾಗ ಆ ಮೂರು ಹಲ್ಲುಗಳ ಬೇರುಗಳು ಸತ್ತುಹೋಗಿದ್ದು – ಅವುಗಳನ್ನು ಕೀಳಿಸಿ, ಬೇರೆ ಹಲ್ಲುಗಳನ್ನು ಕಟ್ಟಿಸಿಕೊಂಡು ಕ್ಯಾಪ್ ಹಾಕಿಸಿಕೊಳ್ಳಲು ಹೇಳಿದರು. ಆಕೆ ನೋವಿನಿಂದ ನರಳುವಾಗ ಆಕೆಯ ಪತಿ, ‘ನಿನಗೆ ಅಕ್ಕ ಅಂದರೆ ತುಂಬಾ ಇಷ್ಟ ಅಲ್ಲವಾ, ಈಗ ಪ್ರತಿ ಅಗಳು ಅಗಿಯುವಾಗ ಅಕ್ಕಾ, ಅಕ್ಕಾ ಅನ್ನು. ನಿನ್ನ ಹಲ್ಲುಗಳು ಉದುರಲಿಕ್ಕೆ ಅವರೇ ಕಾರಣವಾಗಿರುವುದರಿಂದ ಚಿಕಿತ್ಸೆಗಾಗುವ ವೆಚ್ಚವನ್ನು ಅವರೇ ಕೊಡಬೇಕು’ ಎಂದು ರೇಗಿಸುತ್ತಾರೆ. ತಂಗಿಯ ಪಾಡು ನೆನಪಿಸಿಕೊಂಡರೆ ನನ್ನ ಮನಸ್ಸಿನಲ್ಲಿ ಮುಜುಗರ, ವಿಷಾದ ಮೂಡುತ್ತದೆ.
–ಲೋಲಾಕ್ಷಿ ಎಸ್. ನಾಯಕ್, ಹಾಸನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.