ADVERTISEMENT

ಜಗಳ ಮರೆಸಿದ ಕನ್ನಡ!

​ಪ್ರಜಾವಾಣಿ ವಾರ್ತೆ
Published 13 ಮೇ 2017, 19:30 IST
Last Updated 13 ಮೇ 2017, 19:30 IST

ಒಂದು ದಶಕದ ಹಿಂದೆ ರಾಜಸ್ತಾನದ ಉದಯ್‌ಪುರ್ ನಗರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದೆ. ಒಂದು ದಿನ ನಾನು ಮತ್ತು ನಮ್ಮ ಹಿರಿಯ ಪ್ರೊಫೆಸರ್‌ ನಗರದ ಮಧ್ಯಭಾಗದ ಹೋಟೆಲಿಗೆ ಊಟಕ್ಕೆಂದು ತೆರಳಿದ್ದೆವು. ಊಟದ ನಂತರ ಹೊರಬಂದು ನೋಡಿದರೆ, ನಮ್ಮ ಪ್ರೊಫೆಸರ್‌ ಕಾರು ಹಿಂದೆ ತೆಗೆಯಲು ಆಗದಂತಾಗಿತ್ತು. ಸುತ್ತಲೂ ಕಾರುಗಳಿದ್ದವು.

ಹೋಟೆಲಿನವರು ಎಲ್ಲಾ ಕಾರುಗಳನ್ನು ರಸ್ತೆಗೆ ಹೋಗಲು ಒಬ್ಬೊಬ್ಬರಾಗಿ ಕಳಿಸುತ್ತಿದ್ದರು. ನಮ್ಮ ಪ್ರೊಫೆಸರ್ ಕಾರು ರೀವರ್ಸ್‌ಗೇರ್‌ನಲ್ಲಿ ಮೆಲ್ಲಗೆ ಸಾಗುವ ಬದಲು ಒಂದೇ ಬಾರಿಗೆ ಜೋರಾಗಿ ಚಲಿಸಿಮ ಹಿಂದಿನ ಕಾರಿನ ಬಂಪರ್‌ಗೆ ಗುದ್ದಿತು. ಗುದ್ದಿಸಿಕೊಂಡ ಕಾರಿನ ಒಳಗಿದ್ದವರೆಲ್ಲ (4–5 ಜನ) ಕಾರಿನಿಂದ ಇಳಿದು ನಮ್ಮ ಪ್ರೊಫೆಸರ್‌ರನ್ನು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡು ಬೈಯಲು ಪ್ರಾರಂಭಿಸಿದರು.

ಸ್ವಲ್ಪ ಸಮಯದಲ್ಲೇ ಅಲ್ಲಿ ನೂರಾರು ಜನ ಸೇರಿದರು. ನಮ್ಮ ಪ್ರೊಫೆಸರ್ ಸಮಾಧಾನದಿಂದ ‘ತಪ್ಪಾಯಿತು, ಅದರ ರಿಪೇರಿ ಹಣ ಕೊಡ್ತೀನಿ’ ಎಂದರೂ ಆ ಕಾರಿನವರು ಕೇಳುತ್ತಿರಲಿಲ್ಲ. ಕೊನೆಗೆ ಬೇಸತ್ತ ಪ್ರೊಫೆಸರ್‌ – ‘ಬರ್ರೀ, ನಾವು ಕಾರು ಇಲ್ಲೇ ಬಿಟ್ಟು ಪೊಲೀಸ್ ಸ್ಟೇಷನ್ನಿಗೆ ಹೋಗೋಣ’ ಎಂದು ಕನ್ನಡದಲ್ಲಿ ನನಗೆ ಹೇಳಿದರು.

ತಕ್ಷಣ ಕಾರಿನವನು, ‘ಸಾರ್ ನೀವು ಕನ್ನಡದವ್ರ, ಯಾವೂರು?’ ಎಂದ. ತಕ್ಷಣ ನಮ್ಮ ಮುಖವು ಕಮಲದಂತೆ ಅರಳಿ, ಪರಸ್ಪರ ಪರಿಚಯವಾಯಿತು. ಅವರು ದಾವಣಗೆರೆ, ಮಂಡ್ಯ ಎಂದೆಲ್ಲ ಹೇಳಿದರು. ಜಗಳದ ವಾತಾವರಣ ತಿಳಿಯಾಗಿ, ಜನರೆಲ್ಲ ನಮ್ಮನ್ನು ಆಶ್ಚರ್ಯದಿಂದ ನೋಡುತ್ತಿದ್ದರು.

ದೂರದ ನಾಡಲ್ಲಿ ಕನ್ನಡ ಭಾಷೆ ನಮ್ಮನ್ನೆಲ್ಲ ಬೆಸೆದಿತ್ತು. ಅದು ನಿಜಕ್ಕೂ ಮರೆಯಲಾಗದ ಜಗಳವಾಗಿತ್ತು. ಇಂದಿಗೂ ಒಮ್ಮೊಮ್ಮೆ ಬೇರೆ ರಾಜ್ಯಕ್ಕೆ ಹೋಗಿದ್ದಾಗ ಕನ್ನಡದವರು ಪರಸ್ಪರ ಕನ್ನಡದಲ್ಲಿ ಕಿತ್ತಾಡುವಾಗ ಈ ಘಟನೆ ನೆನಪಾಗುತ್ತದೆ.
-ಡಾ. ಸಂತೋಷ್ ಹೊಳಲ್ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT