ಬೆಟ್ಟದೂರಲಿ ನಡೆಯುತ್ತಿತ್ತು
ಬೆಟ್ಟದವ್ವನ ಜಾತ್ರೆಯು
ಕಾಡಿನ ಪ್ರಾಣಿಗಳೆಲ್ಲವು ಸೇರಿ
ಹೊರಟವು ಜಾತ್ರೆಯ ನೋಡಲು
ಜೇನನು ಮಾರಿ ಕೂಡಿದ ಹಣವನು
ಹೊತ್ತು ಕರಡಿಯು ಹೊರಟಿತ್ತು
ನೇರಳೆ ಹಣ್ಣಲಿ ಗಳಿಸಿದ ರೊಕ್ಕವ
ಎಣಿಸುತ ಮಂಗವು ನಡೆದಿತ್ತು
ತಾತನ ಗಂಟನು ಪಡೆದಾ ಒಂಟೆ
ಮೆಲ್ಲನೆ ಹೆಜ್ಜೆಯು ಹಾಕಿತ್ತು
ಕಳ್ಳ ಬುದ್ಧಿಯ ಗುಳ್ಳೆ ನರಿಯದು
ಸಂಚನು ಹೆಣೆಯುತ ಸಾಗಿತ್ತು
ಕಬ್ಬನು ಕೊಟ್ಟು ಕಾಸನು ಹೊಂದಿದ
ಆನೆಯು ಎಲ್ಲಕು ಮುಂದಿತ್ತು
ಹುಲ್ಲನು ಸಾಗಿಸಿ ನೋಟನು ಎಣಿಸಿದ
ಜಿಂಕೆಯು ಟಣ್ಣನೆ ಜಿಗಿದಿತ್ತು
ಗರ್ಜನೆಗೈದು ಚಂದಾ ಎತ್ತಿ
ಸಿಂಹವು ಗುಂಪಲಿ ಸೇರಿತ್ತು
ಗುಹೆಯಲಿ ದೊರೆತ ನಿಧಿಯನು ಹಿಡಿದು
ಹುಲಿಯದು ಗತ್ತಲಿ ಕೂಡಿತ್ತು
ಚಿರತೆ ಜಿರಾಫೆ ಘೇಂಡಾ ಜೀಬ್ರಾ
ಓಡುತ ಬಂದು ಸೇರಿದವು
ಮೊಲ ಸಾರಂಗ ಹಾವು ಮುಂಗುಸಿ
ದಾರಿಯ ಮಧ್ಯೆ ಕೂಡಿದವು
ಬೆಟ್ಟದೂರನು ಕಾಡಿನ ಬಳಗವು
ತಲುಪಲು ಸಂತಸ ಪಟ್ಟವು
ಬೆಟ್ಟದವ್ವನ ದರುಶನ ಪಡೆದು
ಜಾತ್ರೆಯ ನೋಡಲು ತೆರಳಿದವು
ಸಂಜೆಯ ಹೊತ್ತಲಿ ಬೆಟ್ಟದವ್ವನ
ತೇರಿನ ಸಡಗರ ಕಂಡವು
ಇರುಳಲಿ ಸರ್ಕಸ್ ನಾಟಕ ನೋಡಿ
ಭರ್ಜರಿ ರಂಜನೆ ಪಡೆದವು
ಬಗೆಬಗೆ ತಿಂಡಿ ವಸ್ತುವಿಗಾಗಿ
ಹಣವನು ಖರ್ಚು ಮಾಡಿದವು
ತಂದಿಹ ಕಾಸು ಆಗಲು ಖಾಲಿ
ಕಾಡಿನ ದಾರಿಯ ಹಿಡಿದವು
ಬೆಟ್ಟದವ್ವನ ದೊಡ್ಡ ಜಾತ್ರೆಯು
ಮೃಗಗಳ ಮನವನು ತಣಿಸಿತ್ತು
ಸಮರಸ ಭಾವವು ಪ್ರಾಣಿಗಳಲ್ಲಿ
ಉಕ್ಕುವ ಹಾಗೆ ಮಾಡಿತ್ತು.
–ಸೋಮಲಿಂಗ ಬೇಡರ ಆಳೂರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.