ADVERTISEMENT

ಮಳೆ ಬರಲಿ ಲೋಕದ ಎಲ್ಲರ ಮನೆಯ ಮೇಲೆ

ಸುಬ್ಬು ಹೊಲೆಯಾರ್
Published 20 ಡಿಸೆಂಬರ್ 2014, 19:30 IST
Last Updated 20 ಡಿಸೆಂಬರ್ 2014, 19:30 IST
ಚಿತ್ರ: ಡಾ. ಸಿ. ರವೀಂದ್ರನಾಥ್‌
ಚಿತ್ರ: ಡಾ. ಸಿ. ರವೀಂದ್ರನಾಥ್‌   

ಮುದ್ದು ಮುದ್ದಾದ ವೈದಿಕ ಹಕ್ಕಿಯೊಂದು
ನನ್ನ ಮೆದುಳ ಕುಕ್ಕುತ್ತಿತ್ತು
ಇದ ಕಂಡ ಶೂದ್ರಾದಿ ಹಕ್ಕಿಗಳು
ಹೃದಯವನ್ನೇ ಹೊರಗೆಳೆದು ದೇಹದಿಂದ
ಕುಟುಕತೊಡಗಿದಾಗ,

ನನ್ನ ಹೃದಯ ಮಾತನಾಡಿತು
ಪ್ರಿಯ ಶರಣರು ಶರಣಾಗದ ಶೂದ್ರಾದಿ ವೈದಿಕರೇ
ನೋವಾಗದಿರಲಿ ನಿಮ್ಮ ಕೊಕ್ಕುಗಳಿಗೆ ಅಂದೆ,

ನನ್ನ ಇನ್ನಷ್ಟು ಕುಕ್ಕತೊಡಗಿದ್ದವು
ಸುಂದರ ಅಸ್ಥಿಪಂಜರವಾದೆ.

ನನ್ನ ಅಸ್ಥಿ ಮಾತನಾಡಿತು
ಹೊಟ್ಟೆ ತುಂಬಿತಲ್ಲಾ ಬಿಟ್ಟುಬಿಡಿರಣ್ಣ ಅಂದೆ.

ಅಸ್ಥಿಯನ್ನು ಹಾರಿಸಿಕೊಂಡು
ಹೋದವು ಹದ್ದುಗಳ ಹಾಗೆ

ಅಲ್ಲೇ ಹರಿದಾಡಿಕೊಂಡಿದ್ದ ಇರುವೆಗೆ
ಸೇರಿಕೊಂಡಿತು ನನ್ನ ಉಸಿರು

ಹೂವಾದೆ, ಹಣ್ಣಾದೆ, ಮಣ್ಣಾದೆ
ಅನ್ನವಾದೆ, ಅರಿವಾದೆ, ಉಪ್ಪಾದೆ
ತೆಪ್ಪವಾದೆ, ನೋವಾಗದ ಚಪ್ಪಲಿಯಾದೆ
ಈಗ ಹೇಳಿ ನನ್ನ ಕೇರಿ ಯಾವ ಉಪಗ್ರಹಕ್ಕೆ ಸೇರಿದ್ದು

ನಾನು ಗೆದ್ದಿದ್ದೇನೆಂದು ಸೋತಿದ್ದೇನೆಂದು
ತಲೆ ಎತ್ತದೆ ತೆನೆ ಬಾಗಿದ ಹಾಗೆ
ಮಧ್ಯಮ ಮಾರ್ಗದ ಕಾಲುದಾರಿಯಲ್ಲಿ ನಡೆಯುತ್ತಿದ್ದೇನೆ

ಹೆಣ್ಣುಗಳ ಹಬ್ಬ ಈಗ
ದುಃಖದ ಅಂಗಡಿಯಲ್ಲಿ
ಕಣ್ಣೀರು ಮಾರಾಟಕ್ಕಿದೆ.
ಗಲ್ಲದ ಮೇಲೆ ಗಂಡಸರಿದ್ದಾರೆ,
ನಿನ್ನ ನೋವಿಗೂ ಬೆಲೆ ಬಂದಿದೆ,
ಎಂದು ತಿಳಿಯಬೇಡ.
ಒಡೆದುಹಾಕು ಗಲ್ಲವನ್ನು
ಪುರುಸೊತ್ತು ಮಾಡಿಕೊಳ್ಳಬೇಕು ಕಣ್ಣೀರಿಗೆ ಗೆಳತಿ.

ಎಲ್ಲರ ಮನೆಯ ಮಕ್ಕಳು ಅಳುತ್ತವೆ ಜಗತ್ತಿನಲ್ಲಿ
ನನ್ನ ಕೇರಿಯ ಮಕ್ಕಳು
ಯಾವುದೋ ಉಪಗ್ರಹದ ಜೀವಿಗಳಂತೆ
ಸದಾ ನಗುತ್ತಿರುತ್ತವೆ. ಇನ್ನೊಂದು ಕೇರಿಯ
ಮಕ್ಕಳ ನೋಡಿ,
ನನಗೆ ಖುಷಿ ಇವು ಚಂದ್ರ ಬೆಳಕನ್ನೇ
ಹಿಡಿಯುವುದನ್ನ ನೋಡಿ

ರಕ್ತ ಪರೀಕ್ಷಿಸಬೇಕಿಲ್ಲ
ನನ್ನ ದೇಶದ ಜನರ
ಕಾಯಿಲೆ ಏನೆಂದು ನನಗೆ ಗೊತ್ತು
ಬೇಕಾಗಿರುವುದು ಅವರಿಗೆ
ಮುಗುಳ್ನಗೆಗೆ, ಒಂದು ಮಾತ್ರೆ ಅಷ್ಟೆ.

ಸಾಕ್ಷಿ ತೋರಿಸುತ್ತಿದ್ದಾರೆ ಬಾಬಾ ಸಾಹೇಬರು
ತುಂಬುತೋಳಿನ ತೋರುಬೆರಳಲ್ಲಿ,
ನಾವು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದೇವೆ ಗೆಳೆಯ.

ಮರೆಯಲಾರೆ ಇತಿಹಾಸವನ್ನ,
ಮಳೆ ಬರಲಿ ಲೋಕದ ಎಲ್ಲರ ಮನೆಯ ಮೇಲೆ
ಪ್ರಾರ್ಥಿಸುತ್ತೇನೆ,
ನನ್ನ ಹೊಡೆದವರ ಕೈಗೆ ನೋವಾಗದಿರಲಿ ಎಂದು
ನಾನು ಮಾತ್ರ ಇರುವೆ, ಈ ನೆಲದ ಹೂವಾಗಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.