ADVERTISEMENT

ಮೈಸೂರಿನಲ್ಲಿ ನುಡಿಜಾತ್ರೆ

ಕೆ.ಓಂಕಾರ ಮೂರ್ತಿ
Published 24 ನವೆಂಬರ್ 2017, 9:23 IST
Last Updated 24 ನವೆಂಬರ್ 2017, 9:23 IST
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಪ್ರಧಾನ ವೇದಿಕೆಯ ಮಹಾದ್ವಾರ –ಪ್ರಜಾವಾಣಿ ಚಿತ್ರ
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಪ್ರಧಾನ ವೇದಿಕೆಯ ಮಹಾದ್ವಾರ –ಪ್ರಜಾವಾಣಿ ಚಿತ್ರ   

ಮೈಸೂರು: ಸದಾ ಕಾಲ ಪ್ರವಾಸಿಗರಿಂದ ಗಿಜಿಗುಡುವ ಅರಮನೆಗಳ ನಗರಿಯಲ್ಲಿ ಈಗ ಕನ್ನಡದ್ದೇ ಧ್ಯಾನ. ಕನ್ನಡಿಗರ ಸ್ವಾಭಿಮಾನ, ಹೆಮ್ಮೆ, ಸಡಗರ, ನವೋಲ್ಲಾಸ, ಶ್ರದ್ಧೆ, ಭಕ್ತಿಯ ನುಡಿಜಾತ್ರೆಗೆ ಮಲ್ಲಿಗೆ ನಗರಿ ಸಿಂಗಾರಗೊಂಡಿದೆ. ಅಕ್ಷರ ತೋರಣ ಕಟ್ಟಲು ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದಾರೆ.

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುನ್ನುಡಿ ಬರೆಯಲಿದ್ದಾರೆ. ಇತ್ತ ಕನ್ನಡದ ಮನಸ್ಸುಗಳ ಚಿತ್ತವೆಲ್ಲಾ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಅವರ ಮಾತುಗಳತ್ತ ನೆಟ್ಟಿದೆ. ಸಾಂಸ್ಕೃತಿಕ ನಗರಿಯಲ್ಲಿ 26 ವರ್ಷಗಳ ಬಳಿಕ ಸಮ್ಮೇಳನ ನಡೆಯುತ್ತಿದ್ದು, ಕನ್ನಡಧ್ವಜಗಳು ಅತಿಥಿಗಳನ್ನು ಕೈ ಬೀಸಿ ಕರೆಯುತ್ತಿವೆ. ಜ್ಞಾನಪೀಠ ಪುರಸ್ಕೃತರ ಕಟೌಟ್‌ಗಳು ಆತ್ಮೀಯ ಸ್ವಾಗತ ಕೋರುತ್ತಿವೆ. ಪ್ರಮುಖ ವೃತ್ತಗಳಲ್ಲಿ ‘ಹಚ್ಚೇವು ಕನ್ನಡದ ದೀಪ’ ಗೀತೆಯ ಸಾಲುಗಳು ಪ್ರತಿಧ್ವನಿಸುತ್ತಿವೆ.

ಮಹಾರಾಜ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ಇನ್ನು ಮೂರು ದಿನ ಕನ್ನಡದ ಹಣತೆ ಬೆಳಗಲಿದೆ. ನಾಡು, ನುಡಿ, ಕಲೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ಪಸರಿಸುವ ಪ್ರಯತ್ನ ನಡೆಯಲಿದೆ.

ADVERTISEMENT

ಮೆರವಣಿಗೆ ಮೆರುಗು: ಮಲ್ಲಿಗೆಯಿಂದ ಅಲಂಕೃತಗೊಂಡ ತೆರೆದ ಜೀಪಿನಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. 30 ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಸಾರೋಟಿನಲ್ಲಿ ಸಾಗಲಿದ್ದಾರೆ. ಮೆರವಣಿಗೆ ಬೆಳಿಗ್ಗೆ 9 ಗಂಟೆಗೆ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಆರಂಭವಾಗಲಿದ್ದು, ಸುಮಾರು 5,000 ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಭಾಗವಹಿಸಲಿದ್ದಾರೆ. 600 ಕಲಾವಿದರು ಕಲಾವೈಭವ ಕಟ್ಟಿಕೊಡಲಿದ್ದಾರೆ. 8 ಸ್ತಬ್ಧಚಿತ್ರಗಳು ಹಾಗೂ ಎತ್ತಿನ ಗಾಡಿಗಳು ಇರಲಿವೆ.

83 ಕಲಾವಿದರಿಂದ ನಾಡಗೀತೆ: 83ನೇ ಸಮ್ಮೇಳನ ಇದಾಗಿರುವುದರಿಂದ ಉದ್ಘಾಟನಾ ಸಮಾರಂಭದಲ್ಲಿ 83 ಕಲಾವಿದರು ನಾಡಗೀತೆಗೆ
ದನಿಯಾಗಲಿದ್ದಾರೆ.

ಅತಿ ಹೆಚ್ಚು ಗೋಷ್ಠಿಗಳು...
ಮೈಸೂರು: ಮೂರು ದಿನ ಒಟ್ಟು 22 ಗೋಷ್ಠಿಗಳು ನಡೆಯಲಿದ್ದು, ಹಿಂದಿನ ಸಮ್ಮೇಳನಗಳಿಗೆ ಹೋಲಿಸಿದರೆ ಇದೇ ಅಧಿಕ.

ರಾಜ್ಯದ ವಿವಿಧ ಭಾಗಗಳ ಸಾಹಿತಿಗಳು, ಕವಿಗಳು, ಚಿಂತಕರು ಮತ್ತು ವಿಮರ್ಶಕರು ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ.

ಮಹಾರಾಜ ಕಾಲೇಜು ಮೈದಾನದ ಪ್ರಧಾನ ವೇದಿಕೆಯಲ್ಲಿ 10 ಗೋಷ್ಠಿಗಳು ನಡೆಯಲಿವೆ. ಸಮಾನಾಂತರ ವೇದಿಕೆಗಳಾದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ 9 ಮತ್ತು ಕಲಾಮಂದಿರದಲ್ಲಿ 3 ಗೋಷ್ಠಿ ಆಯೋಜಿಸಲಾಗಿದೆ. ರಾಯಚೂರು ಸಮ್ಮೇಳನದಲ್ಲಿ ಒಟ್ಟು 16 ಗೋಷ್ಠಿಗಳು ನಡೆದಿದ್ದವು.

ಮೈಸೂರ್ ಪಾಕ್, ರಸಬಾಳೆ..
ಮೈಸೂರು:
ಸಮ್ಮೇಳನದಲ್ಲಿ ಅಕ್ಷರ ಮೆರವಣಿಗೆ ಮಾತ್ರವಲ್ಲ; ನಿತ್ಯ ಮೂರು ಹೊತ್ತು ತರಹೇವಾರಿ ಖಾದ್ಯಗಳೂ ಲಭ್ಯ.

ಸ್ಥಳೀಯ ಖಾದ್ಯಗಳಾದ ಮೇಲುಕೋಟೆ ಪುಳಿಯೋಗರೆ, ಕಡಲೆಹುಳಿ, ಸಿಹಿ, ಖಾರಾ ಪೊಂಗಲ್‌, ಹುಚ್ಚೆಳ್‌ ಚಟ್ನಿ, ಕಜ್ಜಾಯ, ಮೈಸೂರು ಪಾಕ್‌, ನಂಜನಗೂಡಿನ ರಸಬಾಳೆ ಹಣ್ಣಿಗೆ ಮಹತ್ವ ನೀಡಲಾಗುತ್ತಿದೆ.

ಅಲ್ಲದೆ, ಮೆಂತ್ಯ ಸೊಪ್ಪಿನ ಬಾತ್‌, ವಾಂಗೀಬಾತ್‌, ಬಿಸಿಬೇಳೆ ಬಾತ್‌ ಸೇರಿದಂತೆ ವಿವಿಧ ರೀತಿಯ ಬಾತ್‌, ಅಕ್ಕಿರೊಟ್ಟಿ, ಅಕ್ಕಿ ಪಾಯಸ, ಹೋಳಿಗೆ ತುಪ್ಪ, ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ತರಕಾರಿ ಬಿರಿಯಾನಿ ಬಡಿಸಲಾಗುತ್ತದೆ.

ಝಗಮಗಿಸಲಿರುವ ಮೈಸೂರು
ಮೈಸೂರು: ಸಮ್ಮೇಳನ ಪ್ರಯುಕ್ತ ನಗರದ ರಸ್ತೆಗಳು, ವೃತ್ತಗಳು ಹಾಗೂ ಪಾರಂಪರಿಕ ಕಟ್ಟಡಗಳು ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸುತ್ತಿವೆ.

ಸಮ್ಮೇಳನದ ಮೆರವಣಿಗೆ ಸಾಗಲಿರುವ ಹಾದಿಯುದ್ದಕ್ಕೂ ಎಲ್‌ಇಡಿ ಬಲ್ಬುಗಳನ್ನು ಅಳವಡಿಸಲಾಗಿದೆ. ನ. 27ರ ವರೆಗೆ ನಿತ್ಯ ಸಂಜೆ ವೇಳೆ ಈ ದೀಪಗಳು ಬೆಳಗಲಿದ್ದು, ಅಕ್ಷರ ಜಾತ್ರೆಗೆ ಮೆರುಗು ತುಂಬುತ್ತಿವೆ. ಹೀಗಾಗಿ, ನಗರದಲ್ಲಿ ನಾಡಹಬ್ಬ ದಸರಾ ವೈಭವದ ವಾತಾವರಣ ಮರುಕಳಿಸಿದೆ.

**

ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ವಸತಿ ಹಾಗೂ ಊಟದ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ವೇದಿಕೆಗಳನ್ನು ಉತ್ತಮವಾಗಿ ನಿರ್ಮಿಸಲಾಗಿದೆ
–ಡಾ.ವೈ.ಡಿ.ರಾಜಣ್ಣ, ಜಿಲ್ಲಾ ಕಸಾಪ ಅಧ್ಯಕ್ಷ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.