ಬೆಂಗಳೂರು: ಮೈಸೂರಿನಲ್ಲಿ ಇರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರವು (ಸಿಎಫ್ಟಿಆರ್ಐ), ‘ಟೆಫ್’ ಹೆಸರಿನ ಹೊಸ ಆಹಾರ ಧಾನ್ಯ ಪರಿಚಯಿಸಿದೆ.
ಇಥಿಯೊಪಿಯಾ ಮೂಲದ ಈ ಧಾನ್ಯವು ಕಂದು ಮತ್ತು ಬಿಳಿ ಬಣ್ಣದಲ್ಲಿ ಇರಲಿದೆ. ಈ ಧಾನ್ಯವು ಬರ ನಿರೋಧಕ ಬೆಳೆಯಾಗಿದೆ. ಪ್ರತಿ ಎಕರೆಗೆ 200ರಿಂದ 250 ಕೆಜಿಗಳಷ್ಟು ಇಳುವರಿ ನೀಡಲಿದೆ. ಇದನ್ನು ಮುಂಗಾರು ಮತ್ತು ಹಿಂಗಾರು ಋತುಗಳಲ್ಲಿ ಬೆಳೆಯಬಹುದಾಗಿದೆ ಎಂದು ‘ಸಿಎಫ್ಟಿಆರ್ಐ’ ತಿಳಿಸಿದೆ.
ರಾಜ್ಯದ ಒಣ ಪ್ರದೇಶದಲ್ಲಿರುವ ಜಿಲ್ಲೆಗಳಲ್ಲಿ ಬೆಳೆಯಲೂ ಇದು ಸೂಕ್ತವಾಗಿದೆ. ರಾಜ್ಯದಲ್ಲಿ ಈ ಧಾನ್ಯದ ಉಪಯುಕ್ತತೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ‘ಸಿಎಫ್ಟಿಆರ್ಐ’ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ.
‘ಟೆಫ್’ ಧಾನ್ಯಕ್ಕೆ ಹೊಂದಿಕೊಳ್ಳುವಂತಹ ಪಾಕ ವಿಧಾನಗಳನ್ನು ಭಾರತೀಯ ಸಾಂಪ್ರದಾಯಿಕ ಆಹಾರಗಳಿಗೆ ಹೊಂದುವಂತೆ ಅಭಿವೃದ್ಧಿಪಡಿಸಲು ಕೂಡ ಯೋಜಿಸಿದೆ.
ಶ್ರೀ ಶ್ರೀ ರವಿಶಂಕರ್ ಅವರು ತಮ್ಮ ಆಶ್ರಮದಲ್ಲಿ ಈ ಧಾನ್ಯ ಬಿಡುಗಡೆ ಮಾಡಿದರು. ರೈತರಿಗೆ ಇದರ ಉಪಯುಕ್ತತೆ ಮನದಟ್ಟು ಮಾಡಿಕೊಡಲು ‘ಸಿಎಫ್ಟಿಆರ್ಐ’, ಶ್ರೀ ಶ್ರೀ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮದ ಜತೆ ಒಪ್ಪಂದ ಮಾಡಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.