ADVERTISEMENT

ರೂಪಾಯಿ ಅಪಮೌಲ್ಯ:ಹೆಚ್ಚಿದ ಭೀತಿ

ಕೆ.ಜಿ ಕೃಪಾಲ್
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ಳೆದ ವಾರ ಷೇರು ಪೇಟೆಯಲ್ಲಿ ಆತಂಕಮಯ ವಾತಾವರಣ ಇತ್ತು. ಈ ರೀತಿ ವಾತಾವರಣ ನಿರ್ಮಾಣಕ್ಕೆ ಮುಖ್ಯ ಕಾರಣ ರೂಪಾಯಿಯ ಮೌಲ್ಯದಲ್ಲಾದ ಕುಸಿತ. ಸೋಮವಾರ ತಟಸ್ಥಮಯವಾಗಿದ್ದ ಪೇಟೆಗೆ ಮಂಗಳವಾರ ರೂಪಾಯಿ ಡಾಲರ್ ವಿರುದ್ಧ ದಾಖಲೆಯ ರೂ 58-98ಕ್ಕೆ ದಿನದ ಮಧ್ಯಂತರದಲ್ಲಿ ಕುಸಿದಾಗ ಪೇಟೆಯಲ್ಲಿ ಆತಂಕ ಮೂಡಿತು.

ಈ ಮಧ್ಯೆ ವಿವಿಧ ವಿಶ್ಲೇಷಕರು ರೂಪಾಯಿಯ ಮೌಲ್ಯ ರೂ 60 ದಾಟಬಹುದೆಂಬ ಅಭಿಪ್ರಾಯ ಮತ್ತಷ್ಟು ನಕಾರಾತ್ಮಕತೆ ಮೂಡಿಸಿತು. ಕೇವಲ ಭಾರತದ ರೂಪಾಯಿಯಷ್ಟೆ ಅಲ್ಲಾ ಏಶಿಯಾದ ಕರೆನ್ಸಿಗಳೆಲ್ಲಾ ಇಳಿಕೆಯಲ್ಲಿತ್ತು. ಚಿನ್ನದ ಆಮದಿನ ಮೇಲೆ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ದೇಶೀಯ ವಜ್ರಾಭರಣ ಕಂಪೆನಿಗಳ ಕಾರ್ಯವೈಖರಿ ಮೇಲೆ ನೇರ ಪರಿಣಾಮ ಬೀರುವ ಕಾರಣ ಟೈಟಾನ್ ಇಂಡಸ್ಟ್ರೀಸ್ ರೂ 270ರ ಹಂತದಿಂದ ಈ ವಾರರೂ202ರ ವರೆಗೂ ಕುಸಿಯಿತು.

ಮೇ ಅಂತ್ಯದಲ್ಲಿರೂ 300ರ ಸಮೀಪವಿದ್ದುದುರೂ202ರ ವರೆಗೂ ಕುಸಿದು ನಂತರ ಚೇತರಿಕೆಯಿಂದ ರೂ 224ರ ವರೆಗೂ ಏರಿಕೆ ಕಂಡಿತು. ಪ್ರಸಕ್ತ ವರ್ಷ ಕಂಪೆನಿಯು ಬೋನಸ್ ಷೇರು ವಿತರಿಸಲಿದೆ ಎಂಬ ಸುದ್ದಿಯಿಂದ ರೂ 888ರ ವರೆಗೂ ಏರಿಕೆ ಕಂಡಿದ್ದ ಬಾಟಾ ಇಂಡಿಯಾ ಷೇರಿನ ಬೆಲೆಯು ಈ ವಾರ ರೂ 750ರ ವರೆಗೂ ಕುಸಿದು ರೂ 811 ರಲ್ಲಿ ವಾರಾಂತ್ಯ ಕಂಡಿತು.

ತೋಲ್‌ಗೇಟ್ ತನಿಖೆಯಲ್ಲಿ ಸಿ.ಬಿ.ಐ. ಕ್ರಮದಿಂದ ಜಿಂದಾಲ್ ಸಮೂಹ ತತ್ತರಿಸಿತು. ಸಂವೇದಿ ಸೂಚ್ಯಂಕದ ಕಂಪೆನಿ ಜಿಂದಾಲ್ ಸ್ಟೀಲ್ ಅಂಡ್ ಪವಾರ್ರೂ287ರ ಹಂತದಿಂದ ಮಧ್ಯಂತರದಲ್ಲಿ ರೂ 202ರ ವರೆಗೂ ಕುಸಿದು ರೂ 242ರ ಸಮೀಪ ಅಂತ್ಯಗೊಂಡಿದೆ. ಇದೇ ತರಹ ವೈವಿದ್ಯಮಯ ಕಾರಣಗಳಿಂದ ಅಪೋಲೋ ಟೈರ್ಸ್‌, ಯುನೈಟೆಡ್ ಫಾಸ್ಪರಸ್, ಅದಾನಿ ಎಂಟರ್‌ಪ್ರೈಸಸ್, ಎಂ.ಎಂ.ಟಿ.ಸಿ. ಹಿಂದೂಸ್ಥಾನ್ ಕಾಪರ್‌ಗಳು ಭಾರಿ ಕುಸಿತ ಕಂಡಿವೆ. ತಾಂತ್ರಿಕ ವಲಯದ ಕಂಪೆನಿಗಳು, ಫಾರ್ಮ ಕಂಪೆನಿಗಳಲ್ಲಿ ಕೆಲವು ಏರಿಕೆಯಿಂದ ಮಿಂಚಿದವು.

ಒಟ್ಟಾರೆ ಎಸ್ ಅಂಡ್ ಪಿ ಸಂವೇದಿ ಸೂಚ್ಯಂಕವು 251 ಅಂಶಗಳಷ್ಟು ಇಳಿಕೆ ಕಂಡು ಮಧ್ಯಮ ಶ್ರೇಣಿ ಸೂಚ್ಯಂಕ 207 ಅಂಶಗಳಷ್ಟು, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 189 ಅಂಶಗಳಷ್ಟು ಇಳಿಕೆ ಕಾಣುವಂತೆ ಮಾಡಿದೆ. ಈ ವಾರ ಬದಲಾವಣೆಗಾಗಿ ವಿದೇಶೀ ವಿತ್ತೀಯ ಸಂಸ್ಥೆಗಳು ರೂ 2,923 ಕೋಟಿ ರೂಪಾಯಿ ಷೇರನ್ನು ಮಾರಾಟ ಮಾಡಿದರೆ ಸ್ಥಳೀಯ ಸಂಸ್ಥೆಗಳುರೂ 2,585 ಕೋಟಿ ಮೌಲ್ಯದ ಷೇರು ಖರೀದಿಸಿವೆ. ಷೇರು ಪೇಟೆ ಬಂಡವಾಳ ಮೌಲ್ಯವು ಹಿಂದಿನವಾರದ ರೂ 66.09 ಲಕ್ಷ ಕೋಟಿಯಿಂದ ರೂ 64.52 ಲಕ್ಷ ಕೋಟಿಗೆ ಕುಸಿದಿದೆ.

ವಹಿವಾಟಿನಿಂದ ಹಿಂದಕ್ಕೆ
ಸೆಬಿ, ಕಂಪೆನಿಗಳಲ್ಲಿ ಕನಿಷ್ಠ ಶೇ 25 ರಷ್ಟು ಭಾಗಿತ್ವವನ್ನು ಸಾರ್ವಜನಿಕರಿಗೆ ನೀಡಬೇಕೆಂಬ ನಿಯಮ ಜಾರಿಗೊಳಿಸಲು ಜೂನ್ 3 ರವರೆಗೂ ಕಾಲಾವಕಾಶ ನೀಡಿತ್ತು. ಸುಮಾರು 105 ಕಂಪೆನಿಗಳು ಈ ನಿಯಮ ಜಾರಿಗೊಳಿಸಲಾಗಲಿಲ್ಲ. ಈ ಕಾರಣ ಜೂನ್ 4 ರಂದು ಇಂತಹ ಕಂಪೆನಿಗಳ ಮೇಲೆ ಕ್ರಮ ಜರುಗಿಸುವುದಾಗಿ ಪ್ರಕಟಿಸಿತು. ಈ ಕಂಪೆನಿಗಳಲ್ಲಿ ಶಾಂತಿ ವಿಜಯ್ ಜುವೆಲ್ಸ್ ಲಿ. ಕಂಪೆನಿಯೂ ಒಂದು.

ಈ ಕಂಪೆನಿಯ ಪ್ರವರ್ತಕರು ಪ್ರತಿ ಷೇರಿಗೆರೂ100 ರಂತೆ 5,45,000 ಷೇರುಗಳನ್ನು ಮೇ 24 ರಂದು ಆಫರ್ ಫಾರ್ ಸೇಲ್ ಗವಾಕ್ಷಿಯ ಮೂಲಕ ಮಾರಾಟ ಮಾಡಲು ವಿಫಲರಾದರು. ಈಗ ಈ ಕಂಪೆನಿಯ ಷೇರು ವಿನಿಮಯ ಕೇಂದ್ರದ ವಹಿವಾಟಿನಿಂದ  ಡಿ- ಲೀಸ್ಟ್ ಮಾಡಲು ನಿರ್ಧರಿಸಿದೆ.

ಮುಖ ಬೆಲೆ ಸೀಳಿಕೆ ವಿಚಾರ
-ಅಡ್ವಾಂಟ್ ಇಂಡಿಯಾ ಕಂಪೆನಿ ಷೇರಿನ ಮುಖಬೆಲೆಯನ್ನುರೂ10 ರಿಂದರೂ2ಕ್ಕೆ ಸೀಳಲು ಜುಲೈ 9 ನಿಗದಿತ ದಿನವಾಗಿದೆ.
-ಹನಂಗ್ ಟಾಯ್ಸ ಅಂಡ್ ಟೆಕ್ಸ್‌ಟೈಲ್ ಕಂಪೆನಿ ಷೇರಿನ ಮುಖಬೆಲೆಯನ್ನುರೂ10 ರಿಂದರೂ5ಕ್ಕೆ ಸೀಳಲಿದೆ.
-ಫಸ್ಟ್ ಫೈನಾನ್ಶಿಯಲ್ ಸರ್ವಿಸಸ್ ಕಂಪೆನಿಯ ಷೇರಿನ ಬೆಲೆಯನ್ನುರೂ10 ರಿಂದರೂ1ಕ್ಕೆ ಸೀಳುವ ಬಗ್ಗೆ 15 ರಂದು ಪರಿಶೀಲಿಸಲಿದೆ.

ವಿತರಣೆ ಕಾರ್ಯಕ್ರಮ
ಸುಂದರಂ ಪ್ಲೇಟಸ್ ಕಂಪೆನಿಯು 12,64,501 ಷೇರುಗಳನ್ನು ಪ್ರತಿ ಷೇರಿಗೆ ರೂ 297.50 ಯಂತೆ ವಿತ್ತೀಯ ಸಂಸ್ಥೆಗಳಿಗೆ ವಿತರಣೆ ಮಾಡುವ ಮೂಲಕ ಲೀಸ್ಟಿಂಗ್ ಅಗ್ರೀಮೆಂಟ್‌ನ ನಿಯಮ 22ರ ಪ್ರಕಾರ ಅಗತ್ಯವಿರುವ ಶೇ 25ರ ಕನಿಷ್ಟ ಸಾರ್ವಜನಿಕ ಭಾಗಿತ್ವವನ್ನು ಹೊಂದುವ ಮೂಲಕ ಪರಿಪಾಲಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದೇ ರೀತಿ 12,13,630 ಷೇರನ್ನು ಪ್ರತಿ ಷೇರಿಗೆರೂ545 ರಂತೆ ವಿತರಿಸಿದ್ದು ಈ ಷೇರುಗಳು 11 ರಿಂದ ವಹಿವಾಟಿಗೆ ಬಿಡುಗಡೆಯಾಗಿವೆ.

ಮಾರಾಟದ ಕರೆ
-ಎಂಎಂಟಿಸಿ ಕಂಪೆನಿಯು ಗುರುವಾರದಂದು 9.33 ಕೋಟಿ ಷೇರನ್ನು ಆಫರ್ ಫಾರ್ ಸೇಲ್ ಗವಾಕ್ಷಿಯ ಮೂಲಕ ಪ್ರತಿ ಷೇರಿಗೆರೂ60ರ ಕನಿಷ್ಠ ಬೆಲೆಯಲ್ಲಿ ವಿತರಿಸಿತು. ಈ ಕಾರಣ ಪೇಟೆಯಲ್ಲಿ ಷೇರಿನ ಬೆಲೆಯುರೂ 230ರ ಹಂತದಿಂದರೂ171ರ ವರೆಗೂ ಕುಸಿದಿದೆ.
-ಎನ್. ಬಿ. ಫುಟ್‌ವೇರ್ ಕಂಪೆನಿ 14 ರಂದುರೂ2 ರಂತೆ 8.21 ಲಕ್ಷ ಷೇರನ್ನು ಈ ಗವಾಕ್ಷಿಯ ಮೂಲಕ ವಿತರಿಸಿದೆ.
-ಬ್ಲೂ ಬ್ಲೆಂಡ್ ಇಂಡಿಯಾ ಕಂಪೆನಿ 17 ರಂದು ಪ್ರತಿ ಷೇರಿಗೆರೂ13 ರಂತೆ 6.6 ಲಕ್ಷ ಷೇರು ಆ ಮೂಲಕ ವಿತರಿಸಲಿದೆ.

ಎನ್.ಎಂ.ಡಿ.ಸಿ. ವಿಸ್ತರಣೆ
ಎನ್.ಎಂ.ಡಿ.ಸಿ. ಕಂಪೆನಿಯು ಜಿಂಬಾಬ್ವೆಯ ಮೊಸಿ 2 ಎ ಟುನ್ಯ ಡೆವೆಲಪ್‌ಮೆಂಟ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಎನ್.ಎಂ.ಡಿ.ಸಿ. ಕಂಪೆನಿಯು ಜಿಂಬಾಬ್ವೆಯಲ್ಲಿ ಕಬ್ಬಿಣ, ಕಲ್ಲಿದ್ದಲು, ಚಿನ್ನ ಮತ್ತು ಕ್ರೋಮ್ ಸಮೂಹದ ಎಕ್ಸ್‌ಪ್ಲೋರೇಷನ್‌ಗೆ ಸ್ಟ್ರಟಿಜಿಕ್ ಪಾರ್ಟನರ್ ಆಗಲಿದೆ.

ಜಿಂಬಾಬ್ವೆಯ ಕಂಪೆನಿಯ ಅಲ್ಲಿನ ಮಿನಿಸ್ಟ್ರಿ ಆಫ್ ಟೂರಿಸಂ ಅಂಡ್ ಹಾಸ್ಪಿಟಾಲಿಟಿ ಇಂಡಸ್ಟ್ರಿಯ ಅಧೀನದಲ್ಲಿರುವುದರಿಂದ ಈ ಒಪ್ಪಂದಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಜಾಗತಿಕ ಮಟ್ಟದಲ್ಲಿ ಎನ್.ಎಂ.ಡಿ.ಸಿ. ಕಾರ್ಯಾಚರಣೆ ವಿಸ್ತರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ತಗಾದೆ ಇತ್ಯರ್ಥ
ಸನ್‌ಫಾರ್ಮಾಸ್ಯುಟಿಕಲ್ಸ್ ವಿರುದ್ಧ ಫೈಜರ್ ಕಂಪೆನಿಯ ಭಾಗವಾದ ವೈಯತ್ ಮತ್ತು ಅಟ್ಲಾಂಟಾ ಫಾರ್ಮಗಳ ತಗಾದೆಯನ್ನು ಅಂಮೆರಿಕಾದಲ್ಲಿನ ನ್ಯಾಯಾಲಯದಿಂದ ಹಿಂಪಡೆಯಲು ಒಪ್ಪಂದ ಮಾಡಿಕೊಂಡಿದೆ. ಈ ಇತ್ಯರ್ಥಕ್ಕಾಗಿ 550 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತವನ್ನು ಸನ್‌ಫಾರ್ಮಾ ಕಂಪೆನಿ ತೆರಲಿದೆ.

ತೆರೆದ ಕರೆ
ಹಿಂದೂಸ್ಥಾನ್ ಯುನಿಲೀವರ್ ಕಂಪೆನಿಯ ಪ್ರವರ್ತಕರಾದ ಯುನಿ ಲೀವರ್‌ಗೆ 5.4 ಶತಕೋಟಿ ಡಾಲರ್ ವಿನಿಯೋಗಿಸಿ ಶೇ 22.53ರ ಭಾಗಿತ್ವವನ್ನು ತೆರೆದ ಕರೆ ಮೂಲಕ ಕೊಳ್ಳಲು ಸೆಬಿ ಅನುಮತಿಸಿದೆ. ಸಧ್ಯ ಶೇ 52.48ರ ಭಾಗಿತ್ವ ಹೊಂದಿರುವುದನ್ನು ಈ ತೆರೆದ ಕರೆ ಮೂಲಕ ಅದನ್ನು ಶೇ 75ಕ್ಕೆ ಹೆಚ್ಚಿಸಿ ಕೊಳ್ಳುವ ಪ್ರಯತ್ನದಲ್ಲಿದೆ.

ADVERTISEMENT

ಯೂನಿಲೀವರ್ ಕಂಪೆನಿ ಈ ತೆರೆದ ಕರೆಯು ಜೂನ್ 21 ರಿಂದ ಜುಲೈ 4ರ ವರೆಗೂ ನಡೆಯಲಿದ್ದು, ಪ್ರತಿ ಷೇರಿಗೆ ಯೂನಿಲೀವರ್ ಕಂಪೆನಿಯು ರೂ. 600 ರಂತೆ ಕೊಳ್ಳಲಿದೆ.

ಲಾಭಾಂಶ ರಹಿತ ವಹಿವಾಟು
ಯುಕೋ ಬ್ಯಾಂಕ್ 17 ರಿಂದ, ದೇನಾ ಬ್ಯಾಂಕ್ 20ರಿಂದ, ವಿಜಯಾ ಬ್ಯಾಂಕ್ 21 ರಿಂದ, ಎಕ್ಸೈಡ್ ಇಂಡಸ್ಟ್ರೀಸ್ 27 ರಿಂದ ಲಾಭಾಂಶ ರಹಿತ ವಹಿವಾಟು ನಡೆಸಲಿವೆ. ಪ್ರತಿ ಷೇರಿಗೆ ರೂ. 10 ರಂತೆ ಲಾಭಂಶ ನೀಡಲಿರುವ ಬ್ಯಾಂಕ್ ಆಫ್ ಇಂಡಿಯಾ ರೂ. 8 ರಂತೆ ಲಾಭಾಂಶ ನೀಡಲಿರುವ ಯೂನಿಯನ್ ಬ್ಯಾಂಕ್, ರೂ. 7.50 ಯಂತೆ ಲಾಭಾಂಶ ನೀಡಲಿರುವ ಹ್ಯಾವೆಲ್ಸ್ ಇಂಡಿಯ 20 ರಿಂದ ಲಾಭಾಂಶ ರಹಿತ ವಹಿವಾಟು ನಡೆಸಲಿವೆ.

ವಾರದ ವಿಶೇಷ
ಷೇರು ಪೇಟೆಯಲ್ಲಿ ಸ್ಥಿರತೆ ಕಾಣಬೇಕಾದರೆ ಸಣ್ಣ ಹೂಡಿಕೆದಾರರು ಭಾಗವಹಿಸಬೇಕು. ಸಣ್ಣ ಹೂಡಿಕೆದಾರರು ಈಗಿನ ಪೇಟೆಯ ರಭಸದ ಏರಿಳಿತಗಳಿಗಾಗಲೇ ಸಿಲುಕಿಕೊಂಡಿರುವರು. 2009ರ ನಂತರದಲ್ಲಿ ಕೊಂಡಂತಹ ಷೇರುಗಳು, ಅದರಲ್ಲೂ ಅಗ್ರಮಾನ್ಯ ಕಂಪೆನಿ ಷೇರುಗಳ ದರಗಳಲ್ಲಿ ಹೆಚ್ಚಿನವು ಶೇ 50ಕ್ಕೂ ಹೆಚ್ಚಿನ ಕುಸಿತ ಕಂಡಿವೆ.

ಎಂಜಿನಿಯರ್ಸ್ ಇಂಡಿಯಾ 2010ರ ಮಧ್ಯೆ ಅವಧಿಯಲ್ಲಿ ರೂ 340ರ ಸುಮಾರಿನಲ್ಲಿದ್ದುದು ಈಗ ರೂ150ರ ಸಮೀಪವಿದೆ. ಎನ್.ಎಂ.ಡಿ.ಸಿ.ರೂ 260 ರಿಂದ ಈಗ ರೂ110ರ ಹಂತದಿಂದ ಈಗ ರೂ 135ರ ಸಮೀಪಕ್ಕೆ ಕುಸಿದಿದೆ. ಹೀಗಿರುವಾಗ ಸಣ್ಣ ಹೂಡಿಕೆದಾರರಿಗೆ ಸುರಕ್ಷತೆ ಇಲ್ಲದಾಗಿದೆ.

ಈ ಹಿಂದೆ ಷೇರು ಪೇಟೆಗಳು ನಿಸ್ತೇಜಮಯವಾಗಿದ್ದಾಗ ಕೆನರಾ ಬ್ಯಾಂಕ್ ಮತ್ತು ಮಾರುತಿ ಸುಜುಕಿಗಳು ಆರಂಭಿಕ ಷೇರು ವಿತರಣೆಯನ್ನು ಆಕರ್ಷಕ ಬೆಲೆಯಲ್ಲಿ ವಿತರಣೆ ಮಾಡಿದುದರಿಂದ ಭಾರಿ ಸಂಖ್ಯೆಯಲ್ಲಿ ಸಣ್ಣ ಹೂಡಿಕೆದಾರರು ಪೇಟೆಯನ್ನು ಪ್ರವೇಶಿಸಿ ಪೇಟೆಗಳಿಗೆ ಚೈತನ್ಯ ತುಂಬಿದರು. ಇಂತಹ ಪುನಶ್ಚೇತನಗೊಳಿಸುವಿಕೆಗೆ ಅವಕಾಶಗಳು ಈಗ ಇದ್ದರೂ ಸರ್ಕಾರ ಆ ವಿಧದ ಐ.ಪಿ.ಓ. ಗಳಿಗೆ ಆಸ್ಪದ ಕೊಡದೆ ಆಫರ್ ಫಾರ್ ಸೇಲ್ ಮಾರ್ಗದಲ್ಲಿ ಬಂಡವಾಳ ಹಿಂತೆಗೆತ ಮತ್ತು ಸಾರ್ವಜನಿಕ ಭಾಗಿತ್ವ ಹೆಚ್ಚಳಕ್ಕೆ ಅವಕಾಶ ನೀಡಿದೆ.

ಹಿಂದೂಸ್ಥಾನ್ ಕಾಪರ್ ಕಂಪೆನಿಯ ಬೆಲೆರೂ260ರ ಸಮೀಪವಿದ್ದಾಗ ರೂ 155 ರಂತೆ ಆಫರ್ ಫಾರ್ ಸೇಲ್‌ನಲ್ಲಿ ವಿತರಿಸಿದ್ದಾಗಲಿ ಗುರುವಾರ, 13 ರಂದು ವಿತರಿಸಿದ ಎಂ.ಎಂ.ಟಿ.ಸಿ. ಕಂಪೆನಿಯ ಷೇರಿನ ಬೆಲೆಯು ಪೇಟೆಯಲ್ಲಿ ರೂ 211 ರಲ್ಲಿದ್ದಾಗ ರೂ 60ಕ್ಕೆ ವಿತರಣೆ ಕನಿಷ್ಠ ಬೆಲೆ ನಿಗಧಿಪಡಿಸಿದ್ದು   ಆಕರ್ಷಕವಾಗಿದ್ದರೂ, ಬೆಲೆಯ ಅಂತರ ಹೆಚ್ಚಾಗಿದ್ದರಿಂದ ಎಂ.ಎಂ.ಟಿ.ಸಿ. ಷೇರಿನ ಬೆಲೆರೂ171ಕ್ಕೆ ಕುಸಿದು ಕೊಳ್ಳುವವರಿಲ್ಲದಂತಾಗಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಇಂತಹ ಕುಸಿತಕ್ಕೆ ಮುಖ್ಯ ಕಾರಣ ಆಫರ್ ಫಾರ್ ಸೇಲ್‌ನಲ್ಲಿ ಲಭ್ಯವಾದ ಷೇರಿಗೆ `ಲಾಕ್ ಇನ್' ಇರುವುದಿಲ್ಲ, ಯಾವಾಗ ಬೇಕಾದರೂ ಮಾರಾಟ ಮಾಡಬಹುದಾಗಿದೆ.

ಈ ವಿಭಿನ್ನ ವಿತ್ತೀಯ ಸಂಸ್ಥೆ ಎಲ್.ಐ.ಸಿ. ಯಂತಹವರಿಗೆ ಹೆಚ್ಚು ಅನುಕೂಲ. ಅವರ ಹೂಡಿಕೆ  ಗುಚ್ಚದಲ್ಲಿ ಈ ಕಂಪೆನಿ ಷೇರುಗಳಾಗಲೇ ಇರುತ್ತವೆ. ಆ ಷೇರುಗಳನ್ನು ಮಾರಾಟ ಮಾಡಿ, ಈ ಆಫರ್ ಫಾರ್ ಸೇಲ್‌ನಲ್ಲಿ ಕೊಳ್ಳುವಂತಹ `ಆರ್ಬಿಟ್ರೆಜ್' ಅವಕಾಶ ಹೆಚ್ಚಿನ ಆದಾಯಗಳಿಸಿ ಕೊಡುತ್ತದೆ. ಈ ಸಂದರ್ಭದಲ್ಲಿ ಇಂತಹ ಕುಸಿತಗಳು ಪೇಟೆಯ ಬಂಡವಾಳೀಕರಣ ಮೌಲ್ಯವನ್ನು ಕ್ಷೀಣಗೊಳಿಸುವುದನ್ನು ಗಮನಿಸಬಹುದು.

`ಆಫರ್ ಫಾರ್ ಸೇಲ್' ಪೇಟೆಯಲ್ಲಿ ಹೂಡಿಕೆ ಎಂಬುದನ್ನು ನಶಿಸುವಂತೆ ಮಾಡಿ ಸಟ್ಟಾ ವ್ಯಾಪಾರಕ್ಕೆ ಪ್ರೋತ್ಸಾಹಿಸುತ್ತಿದೆ ಎನ್ನಬಹುದು. ಇದನ್ನು ಗಮನಿಸಿದಾಗ ಸರ್ಕಾರ ಮತ್ತು ನಿಯಂತ್ರಕರು ಷೇರು ಪೇಟೆಗೆ ಸಣ್ಣ ಹೂಡಿಕೆದಾರರನ್ನು ಮರಳಿ ಕರೆತರಲು ಇದ್ದಂತಹ  ಸುವರ್ಣಾವಕಾಶ ಕಳೆದು ಕೊಂಡಿದೆಯಲ್ಲವೇ?

98863-13380
(ಮಧ್ಯಾಹ್ನ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.