ಬಸವಾಪಟ್ಟಣ: ತಾಲ್ಲೂಕಿನಲ್ಲಿ ಸಾರ್ವಜನಿಕರಿಗೆ ಅವಶ್ಯವಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋ ಮತ್ತು ಬಸ್ ನಿಲ್ದಾಣ ಸ್ಥಾಪನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭರವಸೆ ನೀಡಿದ್ದಾರೆ ಎಂದು ದೊಡ್ಡಘಟ್ಟದ ಸಾಮಾಜಿಕ ಕಾರ್ಯಕರ್ತ ರಂಗಸ್ವಾಮಿ ತಿಳಿಸಿದ್ದಾರೆ.
ಬುಧವಾರ ತಾಲ್ಲೂಕಿನಿಂದ ತೆರಳಿದ್ದ 150 ಜನರ ನಿಯೋಗ ದೇವೇಗೌಡರನ್ನು, ಅವರ ನಿವಾಸದಲ್ಲಿ ಭೇಟಿ ಮಾಡಿ ಸರ್ಕಾರಿ ಬಸ್ ವ್ಯವಸ್ಥೆ ಮತ್ತು ಡಿಪೋ ಸ್ಥಾಪನೆಗೆ ಮನವಿ ಸಲ್ಲಿಸಿದಾಗ, ಅವರು ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದರಲ್ಲದೇ, ಅವರಿಗೆ ಲಿಖಿತ ಪತ್ರವನ್ನೂ ಕಳುಹಿಸಿದರು.
ಅದರಂತೆ ನಮ್ಮ ನಿಯೋಗ ಉಮಾಶಂಕರ್ ಅವರನ್ನು ಭೇಟಿ ಮಾಡಿ, 1)ದಾವಣಗೆರೆ, ಚನ್ನಗಿರಿ, ಶಿವಮೊಗ್ಗ. 2)ದಾವಣಗೆರೆ ಚನ್ನಗಿರಿ, ಭದ್ರಾವತಿ. 3)ಹೊನ್ನಾಳಿ ,ಬಸವಾಪಟ್ಟಣ, ಸೂಳೆಕೆರೆ, ತ್ಯಾವಣಿಗೆ, ದಾವಣಗೆರೆ ಹಾಗೂ 4) ಬಸವಾಪಟ್ಟಣ ಸೂಳೆಕೆರೆ ಚನ್ನಗಿರಿ ಮಾರ್ಗವಾಗಿ ಬಸ್ಗಳನ್ನು ಓಡಿಸಲು ಅರ್ಜಿಯನ್ನು ನೀಡಿದ್ದು, ಹೈಕೋರ್ಟ್ ಆದೇಶದಂತೆ ಚನ್ನಗಿರಿಯಲ್ಲಿ ಸಾರಿಗೆ ಬಸ್ ಡಿಪೋ ಮತ್ತು ನಿಲ್ದಾಣಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವುದಾಗಿ ರಂಗಸ್ವಾಮಿ ಪ್ರಜಾವಾಣಿಗೆ ತಿಳಿಸಿದ್ದಾರೆ.
ಈ ಬಗ್ಗೆ ಶಿವಮೊಗ್ಗ ಮತ್ತು ದಾವಣಗೆರೆ ವಿಭಾಗದ ಸಾರಿಗೆ ನಿಯಂತ್ರಣ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಜೆ.ಡಿ.ಎಸ್.ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶೀಲಾನಾಯ್ಕ್ ಒತ್ತಾಯಿಸಿದ್ದು, ಮಾಯಕೊಂಡ ಕ್ಷೇತ್ರದ ಜೆ.ಡಿ.ಎಸ್. ರೈತ ಮೋರ್ಚಾ ಅಧ್ಯಕ್ಷ ಕೆ.ಎಂ.ಅಣ್ಣಪ್ಪ, ದೊಡ್ಡಘಟ್ಟ ಮರಿಸ್ವಾಮಿ, ಚಿರಡೋಣಿ ರಂಗಪ್ಪ ಹಾಜರಿದ್ದರು ಎಂದು ರಂಗಸ್ವಾಮಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.