ಶಿರಾ: ತಾಲ್ಲೂಕಿನ ಲಕ್ಕನಹಳ್ಳಿ ಸಮೀಪ ಬಸ್ ಚಾಲನೆ ಮಾಡುತ್ತಿದ್ದಾಗಲೇ ಚಾಲಕ ನಾಗರಾಜು (45) ಅವರಿಗೆ ಹೃದಯಾಘಾತವಾಗಿದ್ದು, ಬಸ್ ಏಜೆಂಟ್ ಮಾರುತಿ ಅವರ ಸಮಯ ಪ್ರಜ್ಞೆಯಿಂದ ಸಂಭವನೀಯ ದುರಂತ ತಪ್ಪಿದೆ. ನಾಗರಾಜು ಸ್ಟೇರಿಂಗ್ ಮೇಲೆ ಕುಸಿದುಬಿದ್ದು ತಕ್ಷಣ ಮೃತಪಟ್ಟಿದ್ದಾರೆ.
ಆಂಧ್ರ ಪ್ರದೇಶದ ಅಮರಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಮಾರುತಿ ಕೃಪಾ ಬಸ್ ಬೆಳಿಗ್ಗೆ 7ರ ಸಮಯದಲ್ಲಿ ಲಕ್ಕನಹಳ್ಳಿ ನಿಲ್ದಾಣ ಬಿಟ್ಟಿದೆ. ಬಸ್ನಲ್ಲಿ ಸುಮಾರು 30 ಮಂದಿ ಪ್ರಯಾಣಿಕರು ಇದ್ದರು.
ಸ್ವಲ್ಪ ಸಮಯದಲ್ಲಿಯೇ ನಾಗರಾಜು ಎದೆ ನೋವಿನಿಂದ ಬಳಲಿದ್ದಾರೆ. ಆಗ ಬಸ್ ಚಲನೆಯಲ್ಲಿ ವ್ಯತ್ಯಯ ಕಂಡು ಬಂದಿದೆ.
ಏಜೆಂಟ್ ಮಾರುತಿ ತಕ್ಷಣ ಚಾಲಕನ ಬಳಿ ಬಂದು ಬ್ರೇಕ್ ಹಾಕಿದ್ದಾರೆ. ಈ ವೇಳೆಗಾಗಲೇ ಬಸ್ನ ಎರಡು ಚಕ್ರಗಳು ರಸ್ತೆ ಬಿಟ್ಟು ಹಳ್ಳದತ್ತ ಸಾಗಿದ್ದವು. ಮಾರುತಿ ಅವರು ಬ್ರೇಕ್ ಹಾಕದೇ ಇದ್ದಿದ್ದರೆ ಬಸ್ ಹಳ್ಳಕ್ಕೆ ಬಿದ್ದು, ಅನಾಹುತ ಸಂಭವಿಸುತ್ತಿತ್ತು.
ಬಸ್ ನಿಂತ ತಕ್ಷಣ ಪ್ರಯಾಣಿಕರು ಗಾಬರಿಗೊಂಡು ಕೆಳಗೆ ಇಳಿದರು. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.