ಬಾಗಲಕೋಟೆ: ಇಳಕಲ್ ನಗರಸಭೆ ಅಧಿಕಾರಿಗಳ ವಿರುದ್ಧ ಕೊಲೆ ಯತ್ನ ಆರೋಪದಡಿ ಎಫ್ಐಆರ್ ದಾಖಲಿಸಲು ಸೂಚನೆ ನೀಡುವಂತೆ ಹಾಗೂ ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಲ್ಲಿನ ಜನಜಾಗೃತಿ ವೇದಿಕೆ ಜಗದೀಶ ಕೆ.ಸರಾಫ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ನಗರೋತ್ಥಾನ ಎರಡನೇ ಹಂತದಲ್ಲಿ ನಗರಸಭೆ ಕಾರ್ಯಾಲಯದಿಂದ ಪೊಲೀಸ್ ಗ್ರೌಂಡ್, ಕೊಪ್ಪರದ ಪೇಟೆ, ಬಜಾರ್, ಗ್ರಾಮ ಚಾವಡಿ ಮಾರ್ಗವಾಗಿ ಕಂಠಿ ಸರ್ಕಲ್ವರೆಗಿನ ರಸ್ತೆಯನ್ನು ಡಾಂಬರೀಕರಣ ಮಾಡಿಲ್ಲದಿದ್ದರೂ ಕಾಮಗಾರಿ ಪೂರ್ಣಗೊಂಡಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ಜನವರಿ 21ರಂದು ಬಾಗಲಕೋಟೆ ಎಸಿಬಿ ಅಧಿಕಾರಿಗಳಿಗೆ ನಾನು ದೂರು ನೀಡಿದ್ದೆನು. ಇದಕ್ಕೆ ಪ್ರತೀಕಾರವಾಗಿ ಶನಿವಾರ ನನಗೆ ಕರೆ ಮಾಡಿ ಬಜಾರದ ವೆಂಕಟರಮಣ ಗುಡಿಯ ಮುಂಭಾಗಕ್ಕೆ ಕರೆಸಿಕೊಂಡ ನಗರಸಭೆ ಅಧಿಕಾರಿಗಳು ಗೂಂಡಾಗಳ ಮೂಲಕ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಜಗದೀಶ ಸರಾಫ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಲ್ಲೆ ಮಾಡಿದವರ ವಿರುದ್ಧ ಇಳಕಲ್ ಠಾಣೆಗೆ ದೂರು ನೀಡಿದರೂ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಅವರಿಗೆ ನೀಡಿದ ಮನವಿ ಪತ್ರದಲ್ಲಿ ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.