ADVERTISEMENT

‘ಗುಬ್ಬಚ್ಚಿ ಸಂತತಿ ರಕ್ಷಿಸಿ’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 8:47 IST
Last Updated 22 ಮಾರ್ಚ್ 2017, 8:47 IST

ಕೆರೂರ: ಮೊಬೈಲ್‌ ತರಂಗಗಳ ಹಾವಳಿ ಮತ್ತು ಆಧುನಿಕತೆಯ ಭರಾಟೆಯಲ್ಲಿ ಗುಬ್ಬಚ್ಚಿ ಸಂತತಿ ವಿನಾಶದತ್ತ ಸಾಗುತ್ತಿದೆ. ಈಗಾಗಲೇ ನಗರ ಪ್ರದೇಶಗಳಿಂದ ಬಹುತೇಕ ಕಣ್ಮ ರೆಯಾಗಿರುವ ಗುಬ್ಬಚ್ಚಿಯ ಸಂತತಿ ಸಂರಕ್ಷಣೆಗೆ ಯುವ ಜನತೆಯ ಜಾಗೃತಿ, ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದು ಹೂಲಗೇರಿಯ ವೀರಯ್ಯ ಸ್ವಾಮೀಜಿ ಕರೆ ನೀಡಿದರು.

ಇಲ್ಲಿಗೆ ಸಮೀಪದ ಹೂಲಗೇರಿ ಗ್ರಾಮದ ಸಿದ್ಧರಾಮ ಶಿವಯೋಗೀಶ್ವರ ಆಧ್ಯಾತ್ಮಿಕ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬಾಗಲಕೋಟೆ ನಗರದ ದಿವ್ಯದರ್ಶನ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ ಆಯೋಜಿಸಿದ್ದ ವಿಶ್ವ ಗುಬ್ಬಚ್ಚಿಗಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.                                                                     
                                                    
ಗುಬ್ಬಚ್ಚಿ ಮತ್ತು ಇತರ ಸಣ್ಣ ಪಕ್ಷಿಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸುತ್ತಿದೆ. ತರಕಾರಿ ಸೇರಿ ವಿವಿಧ ಬೆಳೆಗಳಿಗೆ ಕೀಟಗಳ ಉಪಟಳ ಹೆಚ್ಚಾದ ಕಾರಣ, ರೈತರು ಅಧಿಕ ಕ್ರಿಮಿನಾಶಕಗಳ ಬಳಸುತ್ತಿರುವ ಪರಿಣಾಮ ಗುಬ್ಬಚ್ಚಿಗಳ ಸಂತತಿ ವಿನಾಶದ ಅಂಚಿಗೆ ಬಂದಿದ್ದು ಮಾನವನಿಗೂ ಆರೋಗ್ಯದ  ಸಮಸ್ಯೆಗಳು ಉಲ್ಬಣಿಸುತ್ತಿವೆ. ಇದರಿಂದ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ವೀರಯ್ಯ ಸ್ವಾಮೀಜಿ ಹೇಳಿದರು.

ಕಸಾಪ ವಲಯ ಅಧ್ಯಕ್ಷ ಆರ್.ಎಸ್. ನಿಡೋಣಿ ಮಾತನಾಡಿದರು. ದಿವ್ಯದರ್ಶನ ಸಂಸ್ಥೆಯ ಡಾ.ಪ್ರಹ್ಲಾದ ಭೋವಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಚಿನ್ನಪ್ಪಗೌಡ ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ರವಿ ಕುಂದರಗಿ, ರಂಗಪ್ಪ ದಂಡಿನ, ಸಂಜೀವ ಕಕರಡ್ಡಿ, ಶಿಕ್ಷಕರಾದ ಬಸವರಾಜ ಕೆಂಪಾರ, ಎಚ್.ಎಂ. ರಾಠೋಡ, ಪ್ರಶಾಂತ ರಾಯ್ಕರ, ಮಂಜುಳಾ ಕುರಬನ್ನವರ, ಪ್ರಿಯಾಂಕ ನಾಗಣ್ಣವರ, ವಿಜಯಕುಮಾರಿ ಗುಂಡಿ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.