ಗುಳೇದಗುಡ್ಡ: ಕೈಮಗ್ಗಗಳಿಂದ ತಯಾರಿಸುವ ಖಣ ಮತ್ತು ಸೀರೆ ಬಟ್ಟೆ ಖರೀದಿಸುವ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿ.ಎಸ್.ಟಿಯಲ್ಲಿ ಶೇ 5ರಷ್ಟು ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ಸ್ಥಳೀಯ ಹ್ಯಾಂಡಲೂಮ್ ಅಸೋಸಿಯೇಶನ್ ಹಾಗೂ ಕೈಮಗ್ಗ ನೇಕಾರರ ಸಹಕಾರಿ ಸಂಘಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಬಾಲಾಜಿ ಗುಡಿಯಿಂದ ಹೊರಟು ಚೌಬಜಾರ, ಅರಳಿಕಟ್ಟಿ, ರಜಂಗಳಪೇಟೆ, ಹರದೊಳ್ಳಿ ಓಣಿ, ಸಾಲೇಶ್ವರ ಗುಡಿ, ನಡುವಿನಪೇಟೆ ಮಾರ್ಗದ ಮೂಲಕ ಹಾಯ್ದು ಪುರಸಭೆ ಎದುರಿನ ಸಾರ್ವಜನಿಕರ ಕಟ್ಟೆಗೆ ಬಂದು ಸಭೆಯಾಗಿ ಮಾರ್ಪಟ್ಟಿತು.
ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ ಮಾತನಾಡಿ. ನೇಕಾರರು ಜಿ. ಎಸ್.ಟಿ. ವಿರೋಧಿಗಳಲ್ಲ. ನೇಕಾರರು ಕೈಮಗ್ಗದ ಮೇಲೆ ತಯಾರಿಸುವ ಹಾಗೂ ಉತ್ಪಾದಿಸುವ ಬಟ್ಟೆ ಖರೀದಿಗೆ ಶೇ 5ರಷ್ಟು ಜಿ.ಎಸ್.ಟಿಯಲ್ಲಿ ತೆರಿಗೆ ವಿಧಿಸಿರುವುದು ಸರಿಯಾದ ಕ್ರಮವಲ್ಲ. ಅದನ್ನು ಕೈಬಿಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಕೆರೂರ ನೇಕಾರ ಮುಖಂಡ ಗೋಪಾಲಪ್ಪ ಮದಿ, ಪುರಸಭೆ ಸದಸ್ಯ ಅಶೋಕ ಹೆಗಡಿ ಮಾತನಾಡಿದರು. ‘ತಹಶೀಲ್ದಾರರು ಬಂದು ನೇಕಾರರ ಮನವಿ ಸ್ವೀಕರಿಸುವವರೆಗೆ ಈ ಜಾಗ ಬಿಟ್ಟು ತೆರಳುವುದಿಲ್ಲ’ ಎಂದು ನೇಕಾರರು ಪಟ್ಟು ಹಿಡಿದು ಕೆಲಹೊತ್ತು ಧರಣಿ ಕುಳಿತರು.
ತಾಲ್ಲೂಕು ತಹಶೀಲ್ದಾರ ಎಸ್. ರವಿಚಂದ್ರ ಅವರು ತಕ್ಷಣ ಸ್ಥಳಕ್ಕೆ ಬಂದ ಬಳಿಕ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಹ್ಯಾಂಡಲೂಮ್ ಅಸೋಸಿಯೇಶನ್ ಅಧ್ಯಕ್ಷ ಜುಗಲಕಿಶೋರ ಭಟ್ಟಡ ಅವರು ಓದಿ ತಹಶೀಲ್ದಾರರಿಗೆ ವಿತರಿಸಿದ ನಂತರ ನೇಕಾರರು ಪ್ರತಿಭಟನೆ ಕೈಬಿಟ್ಟು ಹಿಂತಿರುಗಿದರು.
ಅಮಾತೆಪ್ಪ ಕೊಪ್ಪಳ, ಅಡಿವೆಪ್ಪ ತಾಂಡೂರ, ಶಿವುಕುಮಾರ ತೊಗರಿ, ರಂಗಪ್ಪ ಶೇಬಿನಕಟ್ಟಿ, ಸಂಪತಕುಮಾರ ರಾಠಿ, ಹನಮಂತಸಾ ಕಾಟವಾ, ಸಿ.ಬಿ. ಅನ್ನಂ, ಮಲ್ಲೇಶಪ್ಪ ಬೆಣ್ಣಿ, ದೇವೇಂದ್ರಪ್ಪ ಟಿ. ಗಾಯದ, ನಿಜಗುಣೆಪ್ಪ ಕೊಳ್ಳಿ, ಸಂತೋಷ ತಿಪ್ಪಾ, ಹನಮಂತ ಫಲಮಾರಿ, ಶಂಕ್ರಪ್ಪ ಬೀಳಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.