ಸಮೀರವಾಡಿ (ಮಹಾಲಿಂಗಪುರ): ಕೈಗಾರಿಕೆಗಳ ಸ್ಥಾಪನೆಯಿಂದ ಉದ್ಯೋಗ ಹಾಗೂ ಸಂಪತ್ತು ಸೃಷ್ಟಿ ಸಾಧ್ಯ. ಅದರಲ್ಲೂ ರೈತರು ಮತ್ತು ಯುವಕರಿಗೆ ಸಾಕಷ್ಟು ಅನುಕೂಲವಾಗುವ ಕಾರಣ ಜನರು ಹೊಸ ಕೈಗಾರಿಕೆಗಳನ್ನು ಸ್ವಾಗತಿ ಸಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.
ಗ್ರಾಮದಲ್ಲಿ ಗೋದಾವರಿ ಬಯೋರಿಫೈನರೀಸ್ ಸಂಸ್ಥೆಯ ಸಕ್ಕರೆಯ ಉಪ ಉತ್ಪನ್ನಗಳ ತಯಾರಿಕಾ ಹಾಗೂ ಭಸ್ಮೀಕರಣ ಯೋಜನೆಗೆ ಚಾಲನೆ ನೀಡುವ ಹಾಗೂ ಬಗ್ಯಾಸ್ ಆಧಾರಿತ ರಾಸಾಯನಿಕ ಬಯೋರಿಫೈನರಿ ಘಟಕದ ಶಿಲಾನ್ಯಾಸ ಸಮಾರಂಭಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.‘ದೇಶದಲ್ಲಿಯೇ ಅತ್ಯುತ್ತಮ ಕೈಗಾರಿಕಾ ನೀತಿ ನಮ್ಮ ರಾಜ್ಯದಲ್ಲಿ ಜಾರಿ ಯಲ್ಲಿದೆ. ಬಂಡವಾಳ ಹೂಡುವವರು ಈ ನೀತಿಯ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳಿಗೆ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಮಾತನಾಡಿ ‘ಉದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಸೋಮಯ್ಯ ಗ್ರೂಪ್ ಕೃಷಿ ವಿಶ್ವವಿದ್ಯಾಲಯದ ಸಹಯೋಗ ಪಡೆದು ರೈತರಿಗೆ ಸಹಕಾರಿಯಾಗುವ ಯೋಜನೆಗಳನ್ನು ಜಾರಿಗೆ ತರಲಿ’ ಎಂದು ಆಶಿಸಿದರು. ಎಂಎಲ್ಸಿ ಆರ್.ಬಿ. ತಿಮ್ಮಾಪುರ ಮಾತನಾಡಿದರು. ಸಂಸ್ಥೆಯ ಚೇರಮನ್ ಸಮೀರಭಾಯಿ ಸೋಮಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕಂಪೆನಿಗಳ ಅಧಿಕಾರಿಗಳನ್ನು ಸನ್ಮಾನಿಸ ಲಾಯಿತು.
ಕಾರ್ಖಾನೆಯ ಸಿಇಓ ಎಸ್.ಎನ್. ಬಬಲೇಶ್ವರ, ಪ್ರಧಾನ ವ್ಯವಸ್ಥಾಪಕ ಭಾಲಚಂದ್ರ ಬಕ್ಷಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ರಂಗನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಉದಪುಡಿ, ಸುಜಾತಾ ಸಿಂಗಾಡಿ, ಸಂಗಪ್ಪ ಹಲ್ಲಿ, ಅಮೃತಾಬೆನ್ ಸೋಮಯ್ಯ, ಎಪಿಎಂಸಿ ಅಧ್ಯಕ್ಷ ರಾಮಣ್ಣ ಮಳಲಿ, ಉಮೇಶ ಪಾಶ್ಚಾಪೂರ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಸೋಮಯ್ಯ ಸಿಬಿಎಸ್ಇ ಶಾಲೆಯ ಮಕ್ಕಳು ಸ್ವಾಗತ ಗೀತೆ ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.