ADVERTISEMENT

ಬಡ್ತಿ: ತೀರ್ಪು ಮರುಪರಿಶೀಲನೆಗೆ ಆಗ್ರಹ

ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 5:31 IST
Last Updated 2 ಮಾರ್ಚ್ 2017, 5:31 IST

ಬಾಗಲಕೋಟೆ: ‘ಬಡ್ತಿ ಮೀಸಲಾತಿ ವಿಚಾರದ ಬೆಳವಣಿಗೆ ಕುರಿತು ಕೇಂದ್ರ ಸರ್ಕಾರ ಕೂಡಲೇ ಪರಿಶಿಷ್ಟ ಜಾತಿ ಹಾಗೂ ಪಂಗಡದ ನೌಕರರ ನೆರವಿಗೆ ಬರಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಜು ಮೇಲಿನಕೇರಿ ಆಗ್ರಹಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಬುಧವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಂದುಳಿದ ವರ್ಗದವರು, ಪರಿಶಿಷ್ಟರು ರಾಜ್ಯದ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲದಿದ್ದರೆ ಅಂತಹವರಿಗೆ ಹುದ್ದೆಗಳನ್ನು ಮೀಸಲಿಡಲು ಯಾವುದೇ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸಂವಿಧಾನಾತ್ಮಕವಾಗಿ ಸರ್ಕಾರಗಳಿಗೆ ನೀಡಲಾಗಿದೆ. ಹಾಗಿದ್ದರೂ  ತೀರ್ಪು ಸಾಮಾಜಿಕ ನ್ಯಾಯದ ಆಶಯಗಳ ಪಾಲನೆಗೆ ಅಡೆತಡೆಯಾಗಲಿದೆ ಎಂದರು.

ಬಡ್ತಿ ಮೀಸಲಾತಿ ಆಧಾರದಲ್ಲಿ ಈಗ ಹುದ್ದೆಗಳಲ್ಲಿ ಇರುವವರನ್ನು ಹಂಗಾಮಿ ಬಡ್ತಿ ಪಡೆದವರು ಎಂದು ಪರಿಗಣಿಸಬೇಕು. ಮೀಸಲಾತಿ ಆಧಾರದಲ್ಲಿ ಬಡ್ತಿ ಪಡೆದ ವಿಷಯವನ್ನು ಮರುಪರಿಶೀಲನೆಗೆ ಒಳಪಡಿಸಬೇಕು.

ಮೂರು ತಿಂಗಳ ಒಳಗಾಗಿ ಈ ತೀರ್ಪಿನ ಪ್ರಕಾರ ಹೊಸ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ ಎಂದರು. ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು. ಇಲ್ಲವೇ ಈ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹ ಪಡಿಸಿದರು.

ಮುಖಂಡರಾದ ಲಕ್ಷ್ಮಣ ಯಂಕಚಿ, ಪರಶುರಾಮ ಕಾಂಬಳೆ, ಸಂತೋಷ ಚಳಕೇರಿ, ರಮೇಶ ಭಜಂತ್ರಿ, ಎ.ಡಿ.ಜಾಧವ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.