ADVERTISEMENT

ಬಿಸಿಯೂಟದ ಸಿಬ್ಬಂದಿ ವಜಾಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 5:40 IST
Last Updated 17 ಮಾರ್ಚ್ 2018, 5:40 IST

ಇಳಕಲ್‌: ಸಮೀಪದ ಹಿರೇಉಪನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಸಿಬ್ಬಂದಿ ಶುಚಿ–ರುಚಿಯಾಗಿ ಅಡುಗೆ ಮಾಡುತ್ತಿಲ್ಲ. ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿಭಟನೆ ನಡೆಸಿದರು.

ಆಹಾರದ ಗುಣಮಟ್ಟದ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯಶಿಕ್ಷಕಿ ಎ.ಎಸ್. ಹಂಗರಗಿ ಅವರನ್ನು ಪಾಲಕರು ತರಾಟೆಗೆ ತಗೆದುಕೊಂಡರು. ‘ವಿದ್ಯಾರ್ಥಿಗಳು ಹಾಗೂ ಪಾಲಕರು ಒಂದು ದಿನವೂ ಸಿಹಿ ಊಟ ನೀಡುತ್ತಿಲ್ಲ, ಸಾಂಬರ್‌ಗೆ ಸರಿಯಾಗಿ ಉಪ್ಪು, ಖಾರ, ಎಣ್ಣೆ ಹಾಕುವುದಿಲ್ಲ, ಆಹಾರ ಧಾನ್ಯ ಉಳಿಸಿ ಮನೆಗೆ ತಗೆದುಕೊಂಡು ಹೋಗುತ್ತಾರೆ’ ಎಂದು ಆರೋಪಿಸಿದರು.

ಈಗಿರುವ ಅಡುಗೆ ಸಿಬ್ಬಂದಿ ತಗೆದು ಹಾಕಿ, ಬೇರೆಯವರನ್ನು ನೇಮಕ ಮಾಡಬೇಕು. ಅವರನ್ನು ತೆಗೆಯದಿದ್ದರೆ ಶಾಲೆಗೆ ಬಿಸಿಯೂಟವೇ ಬೇಡ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಬಿ. ಗಂಜಿಹಾಳ ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ತಗೆಯುವ ಅಧಿಕಾರ ಶಿಕ್ಷಣ ಇಲಾಖೆಗೆ ಇಲ್ಲ. ನಿಮ್ಮ ದೂರನ್ನು ಗ್ರಾಮ ಪಂಚಾಯ್ತಿಗೆ ಸಲ್ಲಿಸಲಾಗುವುದು. ಆ ಬಗ್ಗೆ ಅವರು ಠರಾವು ಮಾಡಿದರೆ ಮಾತ್ರ ನಾನು ಕ್ರಮ ಕೈಗೊಳ್ಳಲು ಸಾಧ್ಯ.

ADVERTISEMENT

ಗ್ರಾಮದ ಹಿರಿಯರಾದ ಶರಣಪ್ಪ ಜಾಲಿಹಾಳ ಎಸ್.ಡಿ.ಎಂ.ಸಿ ಅಧ್ಯಕ್ಷ ಗುದ್ನೆಪ್ಪ ಪಲ್ಲೇದ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಪರಶುರಾಮ, ಗ್ರಾಪಂ ಸದಸ್ಯ ಮಹಾಂತೇಶ ಅಗಸಿಮುಂದಿನ, ಶೇಷಪ್ಪ ಅಗಸಿಮುಂದಿನ, ಶರಣಪ್ಪ ತುರಮರಿ, ನಾಗಪ್ಪ ಮಡ್ಡಿಕಾರ, ಕುಪ್ಪಮ್ಮ ಗಡ್ಡದ, ಮಹಾದೇವಿ ಜಾಲಿಹಾಳ, ವಿಜ್ಜವ್ವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.