ಗುಳೇದಗುಡ್ಡ: ಇಲ್ಲಿನ ವಿಶೇಷ ತಹಶೀಲ್ದಾರ್ ಕಚೇರಿ ಅವ್ಯವಸ್ಥೆ ಸರಿಪಡಿಸಬೇಕು ಎಂದು ಸಾರ್ವಜನಿಕರು ತಹಶೀಲ್ದಾರ್ ರವಿಚಂದ್ರ ಅವರ ಬಳಿ ಅಲವತ್ತು ಕೊಂಡರು.
‘ಕಚೇರಿಯಲ್ಲಿ ಸಿಬ್ಬಂದಿ ಇರುವುದಿಲ್ಲ. ಸರಿಯಾಗಿ ಜನರೊಂದಿಗೆ ಸ್ಪಂದಿಸುವುದಿಲ್ಲ. ಏನಾದರೂ ಸಮಸ್ಯೆ ಕೇಳಿದರೆ ಬರೀ ಹಾರಿಕೆ ಉತ್ತರ ಕೊಡುತ್ತಾರೆ. ಕಚೇರಿ ನಮ್ಮ ಪಾಲಿಗೆ ಇದ್ದೂ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಾಲ್ಕು
ದಿನಗಳಿಂದ ಬಿ.ಎಸ್.ಎನ್.ಎಲ್ ಸಂಪರ್ಕ ಇಲ್ಲದೆ ಸರ್ವರ್ ಬಂದ್ ಆಗಿದೆ. ನಾಲ್ಕು ದಿನವಾದರೂ ಸರ್ವರ್ ದುರಸ್ತಿಗೆ ಒಬ್ಬರು ತಲೆಕೆಡಿಸಿಕೊಂಡಿಲ್ಲ. ಇದರಿಂದ ದೂರದ ಹಳ್ಳಿಗಳಿಂದ ಬರುವ ಜನರು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇಲ್ಲಿ ಕೇವಲ ಒಂದೇ ಪ್ರಿಂಟರ್ ಮಷಿನ್ ಇದೆ. ಇದರಿಂದ ಜಾತಿ, ಆದಾಯ, ಉತಾರ್, ರಾಷ್ಟ್ರೀಯ ಭದ್ರತಾ ಸೌಲಭ್ಯ ಪ್ರಮಾಣ ಪತ್ರ ನೀಡಲು ವಿಳಂಬವಾಗುತ್ತಿದೆ. ಇದರಿಂದ ನಿತ್ಯ ಜನರ ಕೆಲಸ ಮಾಡಲು ತೊಂದರೆಯಾಗುತ್ತಿದೆ. ಪ್ರೀಂಟರ್ ಇದ್ದರೆ ಪೇಪರ್ ಇರುವುದಿಲ್ಲ. ಇಷ್ಟೊಂದು ಕಚೇರಿ ಅವ್ಯವಸ್ಥೆಯಾಗಿದೆ’ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
‘ಕೂಡಲೇ ಸರ್ವರ್ ಸಮಸ್ಯೆ ಬಗೆಹರಿಯಲಿದೆ. ಪ್ರಿಂಟರ್ ಖರೀದಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ವಾರದೊಳಗೆ ಪ್ರಿಂಟರ್ ಸಮಸ್ಯೆ ಬಗೆಹರಿಯಲಿದೆ’ ಎಂದು ತಹಶೀಲ್ದಾರ್ ರವಿಚಂದ್ರ ಎಸ್. ಹೇಳಿದರು.
‘ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ಸಮಸ್ಯೆ ಇದೆ. ಜನರ ತುರ್ತು ಕೆಲಸಗಳಿಗೆ ಸಿಬ್ಬಂದಿ ಸ್ಪಂದಿಸುವುದಿಲ್ಲ. ಕೆಲಸ ಮಾಡದ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಂಗಪ್ಪ ಮಾದರ, ನಾಗೇಶ ಹಳ್ಳಿ, ದೇಸಾಯಿ, ಶೇಖಾ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.